ಹಂಪಿ ಸ್ಮಾರಕ ಧ್ವಂಸ ಪ್ರಕರಣ: ತನಿಖೆಗೆ ಆಗ್ರಹ, ಪ್ರತಿಭಟನೆ
ಬಳ್ಳಾರಿ, ಫೆಬ್ರವರಿ 02: ವಿಶ್ವ ವಿಖ್ಯಾತ ಹಂಪಿಯಲ್ಲಿನ ಐತಿಹಾಸಿಕ ಸ್ಮಾರಕಗಳ ಕಲ್ಲಿನ ಕಂಬಗಳು ಕಿಡಿಗೇಡಿಗಳ ಕೃತ್ಯಕ್ಕೆ ಹಾಳಾಗುತ್ತಿದ್ದು, ಸ್ಮಾರಕಗಳಿಗೆ ಸಂರಕ್ಷಣೆ ಇಲ್ಲವಾಗಿದೆ ಎನ್ನುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿರುವುದು ಉದಾಹರಣೆಯಾಗಿದೆ.
ವೈರಲ್ ವಿಡಿಯೋ: ಸುಂದರ ಹಂಪೆ ಸ್ಮಾರಕ ಕಿಡಿಗೇಡಿಗಳಿಂದ ಧ್ವಂಸ
ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವವನ್ನು ಹೊಂದಿರುವ ಹಂಪಿಯಲ್ಲಿ ಸ್ಮಾರಕಗಳು ಮುಂದಿನ ಪೀಳಿಗೆಗೆ ಉಳಿಯಬೇಕೆಂಬ ಉದ್ದೇಶದಿಂದ ವಿವಿಧ ಇಲಾಖೆಗಳಿಂದ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯವೂ ನಡೆಯುತ್ತಿದೆ. ಆದರೆ, ಹಂಪಿಯ ಒಂಟೆ ಸಾಲು, ಗಜಶಾಲೆ ಹಿಂದಿ ಇರುವಂತಹ ವಿಷ್ಣು ದೇವಸ್ಥಾನದ ಆವರಣದಲ್ಲಿನ ಕಂಬಗಳನ್ನು ಯಾರೋ ಕಿಡಿಗೇಡಿಗಳು ಬೀಳಿಸುತ್ತಿರುವ ದೃಶ್ಯ ವೀಡಿಯೋದಲ್ಲಿ ಕಂಡು ಬರುತ್ತಿದೆ.
ಸಾಕಷ್ಟು ಹಣ ಖರ್ಚುಮಾಡಿ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯವೂ ನಡೆಯುತ್ತಿದ್ದು, ಹೀಗೆ, ಸ್ಮಾರಕಗಳ ಕಲ್ಲಿನ ಕಂಬಗಳು ತುಂಡಾಗಿ ಬೀಳುವುದರಿಂದ ಅವುಗಳ ಇತಿಹಾಸವೇ ಇಲ್ಲದಂತಾಗುತ್ತದೆ.
2019ರಲ್ಲಿ ನೋಡಬೇಕಾದ 52 ಸ್ಥಳಗಳ ಪಟ್ಟಿಯಲ್ಲಿ ಹಂಪಿಗೆ 2ನೇ ಸ್ಥಾನ
ಪ್ರತಿಭಟನೆ
ಇತ್ತೀಚೆಗೆ ಹಾಡುಹಗಲೇ ಕಿಡಿಗೇಡಿಗಳು ಕಲ್ಲಿನ ಕಂಬಗಳನ್ನು ಬೀಳಿಸಿರುವಂಥ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದರಿಂದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಹಂಪಿಯ ಸ್ಮಾರಕಗಳ ಸಂರಕ್ಷಣೆಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಪುರಾತತ್ವ ಮತ್ತು ಸಂಗ್ರಹಾಲಯಗಳ ಸಂರಕ್ಷಣಾ ಇಲಾಖೆ ಕೆಲಸ ಮಾಡುತ್ತಿದ್ದರೂ ಇಂಥ ಘಟನೆಗಳು ನಡೆಯುತ್ತಿದೆ. ವಿಡಿಯೋ ವೈರಲ್ ಆದ ನಂತರ ಕಮಲಾಪುರ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಮತ್ತು ಹಂಪಿ ಪ್ರವಾಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶ್ವ ವಿಖ್ಯಾತ ಹಂಪಿಯಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ, ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ತನಿಖೆ ನಡೆಯುತ್ತಿದೆ
ಹಂಪಿ ಸ್ಮಾರಕ ಕಿಡಿಗೇಡಿಗಳಿಂದ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಎಸ್ಪಿ ಅರುಣ್ ರಂಗರಾಜನ್ ಪ್ರತಿಕ್ರಿಯೆ ನೀಡಿದ್ದು, "ವೈರಲ್ ವೀಡಿಯೋ ಹಿನ್ನೆಲೆ ಈಗಾಗಾಲೇ ತನಿಖೆ ಮಾಡಲಾಗುತ್ತಿದೆ. ನಾಲ್ವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಪುರಾತತ್ವ ಇಲಾಖೆ ಎರಡು ವರುಷದ ಹಿಂದೆ ಘಟನೆಯಾಗಿದೆ ಎನ್ನುತ್ತಿದೆ. ಆರು ತಿಂಗಳ ಹಿಂದೆ ಘಟನೆ ನಡೆದಿರಬಹುದು ಎಂಬುದು ನಮ್ಮ ಅಂದಾಜು. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು" ಎಂದಿದ್ದಾರೆ.