ಲಡಾಖ್ನಲ್ಲಿ ರಾರಾಜಿಸಲು ಅಣಿಯಾಗುತ್ತಿದೆ ಈ ಬೃಹತ್ ರಾಷ್ಟ್ರಧ್ವಜ
ಬಳ್ಳಾರಿ, ಆಗಸ್ಟ್ 13: ರಾಜ್ಯದಲ್ಲಿ ತಯಾರಾಗುವ ರಾಷ್ಟ್ರ ಧ್ವಜಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಹುಬ್ಬಳ್ಳಿ ಖಾದಿ ಗ್ರಾಮೋದ್ಯೋಗ ಧಾರವಾಡ ಗರಗದಲ್ಲಿ ತಯಾರಾಗುವ ರಾಷ್ಟ್ರ ಧ್ವಜಗಳು ದೇಶದ ಮೂಲೆ ಮೂಲೆಗಳಲ್ಲಿ ಹಾರಾಡುತ್ತವೆ. ಈ ಬಾರಿ ಗಣಿಜಿಲ್ಲೆಯಲ್ಲಿ ತಯಾರಾಗುತ್ತಿರುವ ಈ ವಿಶೇಷ ರಾಷ್ಟ್ರಧ್ವಜ ಲಡಾಖ್ನಲ್ಲಿ ರಾರಾಜಿಸಲು ಸಿದ್ಧವಾಗುತ್ತಿದೆ.
ಈ ರಾಷ್ಟ್ರ ಧ್ವಜ ಸಾಮಾನ್ಯವಾದುದಲ್ಲ. ರಾಜ್ಯದ ಪ್ರತಿ ಜಿಲ್ಲೆ, ತಾಲೂಕು ಕೇಂದ್ರದಿಂದ ಜನರು ಹೊಲಿಗೆ ಹಾಕಿ ತಯಾರಿಸುತ್ತಿರುವ ಬೃಹತ್ ಗಾತ್ರದ ಧ್ವಜವಿದು. ರಾಷ್ಟ್ರ ಧ್ವಜ ಅಂದರೆ ನಮಗೆ ನೆನಪಿಗೆ ಬರುವುದು ಧಾರವಾಡದ ಗರಗ. ದೆಹಲಿಯ ಕೆಂಪು ಕೋಟೆಯ ಮೇಲೆ ಹಾರಾಡುವ ರಾಷ್ಟ್ರ ಧ್ವಜ ಸಹ ಇದೇ ಗರಗದಲ್ಲಿ ತಯಾರಾಗುವುದು. ಜೊತೆಗೆ ಈ ಬಾರಿ ಈ ಬೃಹತ್ ಧ್ವಜವೂ ದೇಶದ ಹೆಮ್ಮೆಯ ಪ್ರತೀಕವಾದ ಲಡಾಕ್ ನಲ್ಲಿ ಹಾರಾಡಲು ಸಿದ್ಧತೆ ನಡೆಯುತ್ತಿದೆ.
ಕೇಸರಿ, ಬಿಳಿ, ಹಸಿರು ಬಣ್ಣದ ಮಾಸ್ಕ್ ನಿಷೇಧಿಸಲು ಕಾಂಗ್ರೆಸ್ ಮನವಿ
ಬೆಂಗಳೂರು ಮೂಲದ ದಂಪತಿಯಿಂದ ತಯಾರಿ
ಬೆಂಗಳೂರು ಮೂಲದ ವಿನೋದಕುಮಾರ ಹಾಗೂ ಪತ್ನಿ ದೇಶದ ಗಡಿ ಲಡಾಖ್ನಲ್ಲಿ ಹಾರಿಸಲು ಅಂದಾಜು 90x60 ಅಡಿಯ ರಾಷ್ಟ್ರಧ್ವಜವನ್ನು ಸಿದ್ಧಗೊಳಿಸುತ್ತಿದ್ದಾರೆ. ಬೆಂಗಳೂರಿನ ನೆಲಮಂಗಲದಿಂದ ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲೂಕಿಗೆ ಆಗಮಿಸಿದ ಈ ಕುಟುಂಬ ರಾಷ್ಟ್ರಧ್ವಜ ತಯಾರಿ ಪ್ರಕ್ರಿಯೆಗೆ ಚಾಲನೆ ನೀಡಿದೆ.
"ದೇಶಾಭಿಮಾನದ ಸಂಕೇತ ಧ್ವಜ"
ಮಾಜಿ ಶಾಸಕ ಕೆ. ನೇಮಿರಾಜ ನಾಯ್ಕ, ಬಿಜೆಪಿ ನಗರ ಘಟಕದ ಅಧ್ಯಕ್ಷ ಜೆ.ಎಂ. ಜಗದೀಶ ಸೇರಿದಂತೆ ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರ ಸಮಕ್ಷಮದಲ್ಲಿ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಲಯದ ಆವರಣದಲ್ಲಿ ಈ ರಾಷ್ಟ್ರಧ್ವಜಕ್ಕೆ ಹೊಲಿಗೆ ಹಾಕುವ ಕಾರ್ಯಕ್ಕೆ ಚಾಲನೆ ದೊರೆಯಿತು. ಈ ಸಂಬಂಧ ಮಾಜಿ ಶಾಸಕ ನೇಮಿರಾಜ ನಾಯ್ಕ ಅವರು ಮಾತನಾಡಿ, ಇಂದಿನ ಯುವ ಪೀಳಿಗೆಯಲ್ಲಿ ದೇಶಾಭಿಮಾನ ಬೆಳೆಸಬೇಕೆಂಬ ಉದ್ದೇಶದೊಂದಿಗೆ ಈ ಬೃಹತ್ ರಾಷ್ಟ್ರಧ್ವಜ ತಯಾರಿಸಲಾಗುತ್ತಿದೆ. ವಿನೋದಕುಮಾರ ದಂಪತಿಗೆ ನಾನು ಧನ್ಯವಾದ ಸಲ್ಲಿಸಲು ಬಯಸುವೆ ಎಂದರು.
ಪಾಕ್ ಸುದ್ದಿವಾಹಿನಿಯಲ್ಲಿ ಹಾರಿತು ಭಾರತದ ತ್ರಿವರ್ಣ ಧ್ವಜ
ಆಗಸ್ಟ್ 15ಕ್ಕೆ ಸಿಎಂ ಇಂದ ಪೂಜೆ
ಈಗಾಗಲೇ ಬಹುತೇಕ ಜಿಲ್ಲಾ ತಾಲೂಕು ಕೇಂದ್ರದಲ್ಲಿ ಜನರು ಈ ರಾಷ್ಟ್ರ ಧ್ವಜಕ್ಕೆ ಹೊಲಿಗೆ ಹಾಕಿ ಕೇಸರಿ ಬಿಳಿ ಹಸಿರು ಬಣ್ಣದ ಬಟ್ಟೆ ಜೋಡಿಸಿದ್ದಾರೆ. ಆಗಸ್ಟ್ 15 ರಂದು ಧ್ವಜಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪನವರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಅಲ್ಲಿಂದ ನೇರವಾಗಿ ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಈ ರಾಷ್ಟ್ರಧ್ವಜವನ್ನು ಪ್ರದರ್ಶಿಸಲಾಗುವುದು.
ಲಡಾಖ್ ನಲ್ಲಿ ಹಾರಿಸಲು ಅನುಮತಿ ಬಾಕಿ
ಬಳಿಕ, ಆಗಸ್ಟ್ 25ರಂದು ಲಡಾಖ್ನಲ್ಲಿ ಈ ಧ್ವಜವನ್ನು ಭಾರತೀಯ ವಾಯುಪಡೆ ಸೈನಿಕರ ಸಮಕ್ಷಮದಲ್ಲೇ ಪ್ರದರ್ಶನ ನಡೆಸಲು ಸಿದ್ಧತೆ ನಡೆದಿದೆ ಎಂದು ವಿನೋದ ಕುಮಾರ ತಿಳಿಸಿದ್ದಾರೆ. ವಿನೋದ್ ಕುಮಾರ್ ಅವರು ಈಗಾಗಲೇ ಪ್ರಧಾನಮಂತ್ರಿ ಕಚೇರಿಯ ಜೊತೆಯಲ್ಲಿ ಪತ್ರ ವ್ಯವಹಾರ ಮಾಡಿದ್ದಾರೆ. ಲಡಾಖ್ ನಲ್ಲಿ ಈ ಬಾವುಟ ಹಾರಿಸಲು ಅನುಮತಿ ದೊರೆಯುವುದು ಮಾತ್ರ ಬಾಕಿ ಇದೆ. ಅಂದುಕೊಂಡಂತೆ ಆದರೆ ಆಗಸ್ಟ 25ರಂದು ಈ ರಾಷ್ಟ್ರ ಧ್ವಜ ಲಡಾಖ್ ನಲ್ಲಿ ಹಾರಾಡಲಿದೆ.