ಕೋಳಿ ಫಾರಂನಲ್ಲೇ ಮಕ್ಕಳ ಓದು, ವಾಸ; ಕೂಡ್ಲಿಗಿ ವಸತಿ ಶಾಲೆಯನ್ನೊಮ್ಮೆ ನೋಡಿ...
ಬಳ್ಳಾರಿ, ಮಾರ್ಚ್ 4: ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಪೋಷಕರೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಹಿಂದೇಟಾಕುವುದರಿಂದ ಶಾಲೆಗಳನ್ನು ಅಭಿವೃದ್ಧಿಪಡಿಸಿ, ಮಕ್ಕಳ ದಾಖಲಾತಿಯನ್ನು ಹೆಚ್ಚಿಸಬೇಕೆಂಬ ಚಿಂತನೆಯೂ ನಡೆಯುತ್ತಿದೆ. ಜೊತೆಗೆ ಮಕ್ಕಳ ಕಲಿಕೆಗೆ ಅನುಕೂಲವಂತೆ ವಸತಿ ಶಾಲೆಗಳಿಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಆಲೋಚನೆ ನಡೆದಿದೆ.
ಆದರೆ ಕೋಳಿ ಫಾರಂ ಆಗಿದ್ದ ಜಾಗವನ್ನೇ ವಸತಿ ಶಾಲೆಯನ್ನಾಗಿ ಮಾರ್ಪಡಿಸಿರುವ ಸಂಗತಿ ಬಳ್ಳಾರಿಯಲ್ಲಿ ನಡೆದಿದೆ. ಇಂಥ ಒಂದು ಪರಿಸ್ಥಿತಿಯಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳು ಓದುತ್ತಿದ್ದಾರೆ. ಈ ಕುರಿತ ವರದಿ ಇಲ್ಲಿದೆ...
ಕೋಳಿ ಫಾರ್ಮ್ ನಲ್ಲಿ ನಡೆಯುತ್ತಿದೆ ವಸತಿ ಶಾಲೆ
ಕಳೆದ ನಾಲ್ಕೈದು ತಿಂಗಳ ಹಿಂದೆ ಈ ಜಾಗ ಒಂದು ಕೋಳಿ ಫಾರಂ ಆಗಿತ್ತು. ಈ ಫಾರಂನಲ್ಲಿ ಸುಮಾರು ಐದು ಸಾವಿರ ಕೋಳಿಗಳನ್ನು ಸಾಕಲಾಗಿತ್ತು. ಆದರೆ ಈಗ ಅದೇ ಕೋಳಿ ಫಾರಂ ಮಕ್ಕಳ ವಸತಿ ಶಾಲೆಯಾಗಿ ಮಾರ್ಪಟ್ಟಿದೆ. ಈ ಕೋಳಿ ಫಾರ್ಮ್ ಈಗ ವಸತಿ ಶಾಲೆಯಾಗಿದ್ದು, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಇರುವ ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳು ಇಲ್ಲಿದ್ದಾರೆ.
ಮಲೆನಾಡ ಮಡಿಲಲ್ಲಿ ಮಕ್ಕಳ ಸೆಳೆಯುತ್ತಿದೆ ಈ "ರೈಲು ಶಾಲೆ"
ಖಾನಾ ಹೊಸಳ್ಳಿಯಲ್ಲಿದ್ದ ಶಾಲೆ
ಈ ವಸತಿ ಶಾಲೆ ಮೊದಲು ಕೂಡ್ಲಿಗಿ ತಾಲೂಕಿನ ಖಾನಾಹೊಸಳ್ಳಿಯಲ್ಲಿ ಇತ್ತು. ಅಲ್ಲಿ ಸರಿಯಾದ ಸ್ಥಳ ಸಿಗದ ಹಿನ್ನೆಲೆಯಲ್ಲಿ ಮತ್ತೆ ಈ ಶಾಲೆಯನ್ನು ಕೂಡ್ಲಿಗಿ ಪಟ್ಟಣದ ಬೇರೆ ವಸತಿ ಶಾಲೆಯಲ್ಲಿ ಸ್ಥಳಾಂತರ ಮಾಡಲಾಯಿತು. ಆದರೆ ಅಲ್ಲಿಯೂ ತೊಂದರೆಯಾದ ಹಿನ್ನೆಲೆಯಲ್ಲಿ ಈ ಶಾಲೆಯನ್ನು ಈ ಕೋಳಿ ಫಾರ್ಮ್ ಗೆ ಸ್ಥಳಾಂತರ ಮಾಡಲಾಯಿತು. ಇಲ್ಲಿಯೂ ಅವರಿಗೆ ಮತ್ತದೇ ಸ್ಥಿತಿ ಎದುರಾಗಿದೆ.
150 ಮಕ್ಕಳಿಗೆ 2 ಶೌಚಾಲಯ
ಇಲ್ಲಿ ಸುಮಾರು ನೂರಾ ಐವತ್ತು ಮಕ್ಕಳು ಕಲಿಯುತ್ತಿದ್ದಾರೆ. ಈ ಇಷ್ಟೂ ಮಕ್ಕಳಿಗೂ ಕೇವಲ ಎರಡೇ ಶೌಚಾಲಯ. ಶೌಚಾಲಯ ಕೊರತೆಯಿಂದ, ಇಲ್ಲಿನ ಹೆಣ್ಣು ಮಕ್ಕಳು ಸ್ನಾನದ ಗೃಹದಲ್ಲಿ ಸ್ನಾನ ಮಾಡಿದರೆ, ಇಲ್ಲಿನ ಗಂಡು ಮಕ್ಕಳು ಹಾದಿ ಬೀದಿಯಲ್ಲಿ ಸ್ನಾನ ಮಾಡುತ್ತಾರೆ. ಇಲ್ಲಿ ಓದುತ್ತಿರುವ ಬಹುತೇಕ ಮಕ್ಕಳು ಗ್ರಾಮೀಣ ಪ್ರದೇಶದವರು. ತಂದೆ ತಾಯಿ ಉದ್ಯೋಗ ಅರಸಿ ಬೇರೆ ಕಡೆಗೆ ದುಡಿಯಲು ಹೋಗುತ್ತಾರೆ. ಹೀಗಾಗಿ ತಮ್ಮ ಮಕ್ಕಳನ್ನು ಈ ಶಾಲೆ ನಂಬಿ ಸೇರಿಸಿ ಹೋಗುತ್ತಾರೆ. ಆದರೆ ಇಲ್ಲಿನ ಮಕ್ಕಳ ಸ್ಥಿತಿ ನೋಡಿದರೆ ಬೇಸರ ಆವರಿಸದೇ ಇರದು.
ಚಿತ್ರದುರ್ಗದಲ್ಲಿ ಬ್ರಿಟಿಷರ ಕಾಲದ ಈ ಶಾಲೆಗೆ ಮರುಜೀವ ಬಂತು
ಇಲ್ಲಿನ ವಿದ್ಯಾರ್ಥಿನಿಯರ ಕಥೆಯೇನು?
ಇದೇ ಕೋಳಿ ಫಾರ್ಮ್ ನಲ್ಲಿ ಓದು, ಇಲ್ಲೇ ವಸತಿ. 6 ರಿಂದ 8ನೇ ತರಗತಿ ಮಕ್ಕಳು ಇಲ್ಲಿದ್ದು, ಅವರಿಗೆ ಸೂಕ್ತ ಭದ್ರತೆಯೂ ಇಲ್ಲ. ಊರ ಹೊರಗಿನ ಶಾಲೆ ಇದಾಗಿದ್ದರಿಂದ ಮಕ್ಕಳಿಗೂ ಭಯ ಕಾಡುತ್ತದೆ. ಹೆಣ್ಣು ಮಕ್ಕಳು ಇಲ್ಲಿ ಕಲಿಯುತ್ತಿದ್ದು, ಕನಿಷ್ಠ ಅವರಿಗೂ ಸೂಕ್ತ ಭದ್ರತೆ ಇಲ್ಲ. ಶಾಲೆಗೆ ಬಾಡಿಗೆ ಕೊಟ್ಟ ಕೋಳಿ ಫಾರ್ಮ್ ಮಾಲೀಕರು ಶೌಚಾಲಯ ಕಟ್ಟಿಸಿ ಕೊಡುವುದಾಗಿ ಹೇಳಿದ್ದಾರೆ. ಆದರೆ ಮಕ್ಕಳಿಗೆ ಕನಿಷ್ಠ ಸೌಲಭ್ಯಗಳೂ ಇಲ್ಲದೆ ಪ್ರತಿದಿನ ನರಕ ಯಾತನೆ ಅನುಭವಿಸುತ್ತಿದ್ದಾರೆ. ಸರ್ಕಾರ ಶಿಕ್ಷಣಕ್ಕೆ ಕೋಟಿ ಕೋಟಿ ಹಣ ನೀಡುತ್ತದೆ. ಆದರೆ ಇಲ್ಲಿನ ಸ್ಥಳೀಯ ನಾಯಕರು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಕ್ಕಳು ಈ ರೀತಿಯ ನರಕದಲ್ಲಿ ಓದಬೇಕಾದ ಸ್ಥಿತಿ ನಿರ್ಮಾಣವಾಗಿದೆ.