ಕೇಸ್ ಮುಚ್ಚಿ ಕಳ್ಳನ ಕೈಲೇ ಜೇಬು ತುಂಬಿಸಿಕೊಂಡ ಸಿರುಗುಪ್ಪದ ಪೊಲೀಸರು
ಬಳ್ಳಾರಿ, ಫೆಬ್ರವರಿ 17: ಅಡ್ಡ ದಾರಿ ಹಿಡಿದವರನ್ನು ಸರಿದಾರಿಗೆ ತರಬೇಕಾದ ಪೊಲೀಸರೇ ಅಡ್ಡ ದಾರಿ ಹಿಡಿದಿದ್ದಾರೆ. ದೂರು ನೀಡಿದ್ದ ಕಳ್ಳತನ ಪ್ರಕರಣವನ್ನು ಮುಚ್ಚಿ ಹಾಕಿ ಹಣ ಕಳ್ಳರಿಂದಲೇ ಹಣ ತೆಗೆದುಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ ನಡೆದಿದೆ.
ತಾಲೂಕಿನ ಹೊಚ್ಚೋಳಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನವಾಗಿತ್ತು. ಮನೆಯಲ್ಲಿದ್ದ ನಗದು ಹಣ ಹಾಗೂ ಚಿನ್ನಾಭರಣ ದೋಚಿ ಕಳ್ಳರು ಪರಾರಿ ಆಗಿದ್ದರು. ಈ ಕಳ್ಳತನ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಏರಿತ್ತು. ಆದರೆ ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಪ್ರಕರಣ ದಾಖಲಿಸದೇ ತನಿಖೆಯನ್ನು ಆರಂಭಿಸಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಿದರೇ ಹೊರತು ಕಸ್ಟಡಿಗೆ ಕಳಿಸಲಿಲ್ಲ. ಆದರೆ ಪೊಲೀಸರು ಅವರಿಂದ ಹಣ ವಸೂಲಿ ಮಾಡಿ ಕಳ್ಳರನ್ನು ಬಿಟ್ಟು ಕಳಿಸಿದ್ದಾರೆ.
ಆದರೆ ಕಳುವಾದ ಮಾಲೀಕರಿಗೆ ವಸೂಲಾತಿ ಮಾಡಿದ ಹಣದಲ್ಲಿ ಕೊಂಚಮಟ್ಟಿಗೆ ಕೈಗೆ ಕೊಟ್ಟು, ತನಿಖೆಯಿಲ್ಲ ಏನಿಲ್ಲ ಎಂದು ಹೇಳಿ ವಾಪಸ್ ಕಳಿಸಿದ್ದಾರೆ. ಆನಂತರ ಇಡೀ ಪ್ರಕರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರ ಬಳಿ ಬಂದಿದೆ. ಹಣ ಕಳೆದುಕೊಂಡ ಗಂಗಮ್ಮ ಎಸ್ಪಿ ಬಾಬಾ ಅವರಿಗೆ ಇಡೀ ಪ್ರಕರಣದ ಸನ್ನಿವೇಶವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅದಕ್ಕೆ ಅಚ್ಚರಿಗೊಂಡ ಎಸ್ಪಿ, ಹಚ್ಚೊಳ್ಳಿ ಪಿಎಸ್ಐ ಶಂಕರಪ್ಪ ಹಾಗೂ ಸಿರುಗುಪ್ಪ ಸಿಪಿಐ ಟಿ.ಆರ್.ಪವಾರ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.