ಬಳ್ಳಾರಿಯಲ್ಲಿ ದೇವರ ಪ್ರಸಾದ ತಿಂದವರಿಗೆ ಕ್ವಾರಂಟೈನ್ ಶಿಕ್ಷೆ
ಬಳ್ಳಾರಿ, ಮೇ 07: ದೇವರ ಪ್ರಸಾದ ತಿಂದ 34 ಜನಕ್ಕೆ ಬಳ್ಳಾರಿಯಲ್ಲಿ ಕ್ವಾರೆಂಟೈನ್ ವಿಧಿಸಲಾಗಿದೆ. ಬಳ್ಳಾರಿಯಿಂದ ಹದಿನೆಂಟು ಮಂದಿ ಉತ್ತರಾಖಂಡ ಪ್ರವಾಸಕ್ಕೆ ಹೋಗಿ ಬಂದಿದ್ದು, ಅವರಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಒಟ್ಟು 34 ಮಂದಿಗೆ ಕ್ವಾರಂಟೈನ್ ವಿಧಿಸಲಾಗಿದೆ.
ಬಳ್ಳಾರಿಯಿಂದ ಉತ್ತರಾಖಂಡದ ಚಾರ್ ಧಾಮ್ ಗೆ ಹದಿನೆಂಟು ಮಂದಿ ಹೋಗಿದ್ದು, ಪ್ರವಾಸ ಮುಗಿಸಿ ವಾಪಸ್ ಬರುವ ವೇಳೆ ಲಾಕ್ ಡೌನ್ ವಿಧಿಸಲಾಗಿದೆ. ಹೀಗಾಗಿ ಉತ್ತರಾಖಂಡದ ಲುಡುಕಿ ಎಂಬಲ್ಲಿ ಹೋಟೆಲ್ ಒಂದರಲ್ಲಿ ಆಶ್ರಯ ಪಡೆದಿದ್ದರು. ನಾಲ್ಕು ದಿನಗಳ ಹಿಂದಷ್ಟೆ ನಗರಕ್ಕೆ ವಾಪಸ್ಸಾಗಿದ್ದರು.
ಅಂತರ್ ರಾಜ್ಯದಿಂದ ಬಳ್ಳಾರಿಗೆ ಬಂದರೆ ಕಡ್ಡಾಯ ಕ್ವಾರಂಟೈನ್
ಪ್ರವಾಸಕ್ಕೆ ಹೋಗಿದ್ದ ಆ ಹದಿನೆಂಟು ಮಂದಿಯಲ್ಲಿ ಒಬ್ಬನಿಗೆ ಕೊರೊನಾ ದೃಢವಾಗಿತ್ತು. ಎರಡು ದಿನಗಳ ಹಿಂದೆ ಬಳ್ಳಾರಿ ಜಾಗೃತಿ ನಗರದಲ್ಲಿ ಒಂದು ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿರುವುದಾಗಿ ತಿಳಿದುಬಂದಿತ್ತು.
ಹೀಗಾಗಿ ಪ್ರವಾಸಕ್ಕೆ ಹೋಗಿ ಬಂದವರು ಹಂಚಿದ್ದ ಪ್ರಸಾದ ತಿಂದವರೂ ಈಗ ಕ್ವಾರೆಟೈನ್ ನಲ್ಲಿರಬೇಕಾಗಿದೆ. ಸೋಂಕಿತನ ಪತ್ನಿ ಹಂಚಿದ್ದ ಪ್ರಸಾದ ತಿಂದ ಒಟ್ಟು 34 ಜನರನ್ನು ಮುಂಜಾಗ್ರತಾ ಕ್ರಮವಾಗಿ ಸೆಕೆಂಡರಿ ಕಾಂಟ್ಯಾಕ್ಟ್ ಎಂದು ಪರಿಗಣಿಸಿ ಕ್ವಾರೆಂಟೈನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 57 ಜನರು ಕೂಡ ಕ್ವಾರೆಂಟೈನ್ ಆಗಿದ್ದಾರೆ. ಅದೃಷ್ಟವಶಾತ್ ಪ್ರಸಾದ ಹಂಚಿದ್ದ ಸೋಂಕಿತನ ಪತ್ನಿಗೆ ಕೊರೊನಾ ನೆಗೆಟಿವ್ ಎಂದು ಬಂದಿದೆ.