ಈ ಊರಿನ ಜನ ಯುಗಾದಿ ಆಚಿರಿಸದಿರಲು ಕಾರಣ ಬಲು ವಿಚಿತ್ರ
ಬಳ್ಳಾರಿ, ಮಾರ್ಚ್ 18: ಎಲ್ಲೆಲ್ಲೂ ಹೊಸವರ್ಷದ ಹೊಸತನದ ನವೋಲ್ಲಾಸದ ಯುಗಾದಿ ಹಬ್ಬದ ಸಡಗರ - ಸಂಭ್ರಮ. ಆದರೆ, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಮತ್ತು ತಾಲೂಕಿನ ಹಲವು ವಂಶಸ್ಥರುಗಳ ಮನೆಗಳಲ್ಲಿ ಸೂತಕದ ಕರಾಳಛಾಯೆ ಆವರಿಸಿರುತ್ತದೆ.
ಇವರಿಗೆ ಯುಗಾದಿ ಹಬ್ಬವಲ್ಲ, ಕರಾಳ ನೆನಪುಗಳ ಕೆಟ್ಟ ದಿನ. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಅನೇಕ ಕುಟುಂಬಗಳು ವಂಶಪರಂಪರಾಗತವಾಗಿ ಯುಗಾದಿಯನ್ನು ಆಚರಣೆ ಮಾಡುವುದಿಲ್ಲ. ಕೂಡ್ಲಿಗಿ ಪಟ್ಟಣದ ಕಾವಲ್ಲಿ, ಗುಪ್ಪಾಲ್, ಭಂಗಿ, ಜಿಂಕಲ್ ಮತ್ತು ತಳವಾರ ಕುಟುಂಬಗಳ 250ಕ್ಕೂ ಹೆಚ್ಚು ಮನೆಗಳಲ್ಲಿ ಯುಗಾದಿ ಹಬ್ಬದಂದು ಪ್ರತೀವರ್ಷ ಸೂತಕವೆ ಮನೆ ಮಾಡಿರುತ್ತದೆ.
ಯುಗಾದಿ ಎಂಬ ಹೊಸ ವರ್ಷ... ಏನಿದರ ಮಹತ್ವ?
ಕೂಡ್ಲಿಗಿ ತಾಲೂಕಿನ ಅಗ್ರಹಾರದ ದೊಡ್ಡಮನೆ ವಂಶಸ್ಥರು, ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಬಾರಿಕರು, ಉಪ್ಪಾರ ಜನಾಂಗದವರ ಮನೆಗಳಲ್ಲಿ ಯುಗಾದಿ ಆಚರಣೆ ಇಲ್ಲವೇ ಇಲ್ಲ. ಯುಗಾದಿ ಆರಂಭದ ದಿನವಾದ ಅಮಾವಾಸ್ಯೆ, ಮಾರನೇ ದಿನ ಪಾಡ್ಯದ ದಿನದಂದು ಈ ಮನೆಗಳಲ್ಲಿ ಯಾರು ಸ್ನಾನವನ್ನೂ ಮಾಡುವುದಿಲ್ಲ. ಜೊತೆಗೆ ಯಾವುದೇ ರೀತಿಯ ಪೂಜೆ ಪುನಸ್ಕಾರಗಳನ್ನೂ ಆಚರಿಸುವುದಿಲ್ಲ. ಹೊಸ ಬಟ್ಟೆಗಳ ಮಾತು ದೂರ. ಅಡುಗೆ ಮಾಡುವಾಗ ಸಂಬಾರಿಗೆ ವಗ್ಗರಣೆ, ಕರಿದ ತಿಂಡಿಗಳನ್ನು ಮಾಡುವುದು ಇಲ್ಲವೇ ಇಲ್ಲ. ಬೇವಿನ ಎಲೆಯನ್ನೂ ಮುಟ್ಟುವುದಿಲ್ಲ.
ಸುಮಾರು ವರ್ಷಗಳ ಹಿಂದೆ ಯುಗಾದಿ ಆಚರಣೆ ಮಾಡುವಾಗ ಈ ಕುಟುಂಬಗಳ ವಂಶಜರು ಪ್ರತೀವರ್ಷ ಒಂದಲ್ಲ ಒಂದು ಅವಘಡಗಳು- ಆಘಾತಗಳನ್ನು ಎದುರಿಸಿ ಅಪಶಕನವನ್ನು ಅನುಭವಿಸಿ ಯುಗಾದಿ ಹಬ್ಬವನ್ನು ಆಚರಣೆಯನ್ನು ಕೈಬಿಟ್ಟಿದ್ದಾರೆ ಎಂದು ಇವರ ಯುವಕರ ಪಡೆ ತಿಳಿಸುತ್ತಿದೆ. ಅಷ್ಟೇ ಅಲ್ಲ, ಯುವಶಕ್ತಿಯು ಹಬ್ಬವನ್ನು ಆಚರಿಸಲು ಯತ್ನ ನಡೆಸಿದಾಗ ಇವರೂ ಅಪಘಾತ - ಆಘಾತಗಳಿಗೆ ಒಳಗಾಗಿ ಬದುಕಿನಲ್ಲಿ ತೀವ್ರವಾದ ತೊಂದರೆಗೆ ಒಳಗಾಗಿದ್ದಾರೆ ಎಂದು ವಾಲ್ಮೀಕಿ ಜನಾಂಗದ ಗುಪ್ಪಾಲ್ ಕಾರಪ್ಪ, ಮಾರೆಪ್ಪ, ಕರಿಯಪ್ಪ, ನಾಯಕಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಹೀಗಾಗಿ ಕೂಡ್ಲಿಗಿ ಪಟ್ಟಣದ ಶೇ. 70ರಷ್ಟು ವಾಲ್ಮೀಕಿ ಜನಾಂಗ ಯುಗಾದಿ ಹಬ್ಬದ ಆಚರಣೆ ಮಾಡುತ್ತಿಲ್ಲ. ಮಿತ್ರರು, ಆಪ್ತರು, ನೆರೆಹೊರೆಯವರು ಯುಗಾದಿ ಹಬ್ಬವನ್ನು ಆಚರಿಸಿ ನೀಡುವ ಸಿಹಿಯನ್ನು, ಬೇವನ್ನು ತಿಂದ ನಂತರ ಇವರು ಸ್ನಾನ ಮಾಡಿ, ಆರಾಧ್ಯದೈವಕ್ಕೆ ನಮಸ್ಕಾರ ಮಾಡಿ, ದೈನಂದಿನ ಕೆಲಸಗಳಲ್ಲಿ ತೊಡಗುತ್ತಾರೆ.