ಹೊಸಪೇಟೆಯಲ್ಲಿ ಸಚಿವರು ನೀಡುತ್ತಿದ್ದ ಆಹಾರ ಕಿಟ್ ಗೆ ಜನವೋ ಜನ
ಬಳ್ಳಾರಿ, ಏಪ್ರಿಲ್ 18: ಲಾಕ್ ಡೌನ್ ನಿಂದಾಗಿ ಆಹಾರ ಸಾಮಗ್ರಿಗಳ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಅಷ್ಟೇ ಅಲ್ಲ, ದಿನಗೂಲಿಗಳಿಗೆ, ಕಾರ್ಮಿಕರಿಗೆ, ಬಡವರಿಗೆ ಕೆಲಸ ಇಲ್ಲದೇ ದಿನದ ಊಟ ಸಿಗುವುದೇ ಕಷ್ಟವಾಗಿದೆ. ಹೀಗಾಗಿ ಅಂಥವರಿಗೆ ನೆರವಾಗುವ ದೃಷ್ಟಿಯಿಂದ ಕೆಲವೆಡೆ ಆಹಾರದ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಆದರೆ ಆಹಾರ ಕಿಟ್ ಗಳನ್ನು ಪಡೆಯಲು ಜನರು ಮುಗಿಬೀಳುತ್ತಿರುವ ಘಟನೆಗಳೂ ವರದಿಯಾಗುತ್ತಿವೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಆಹಾರ ಕಿಟ್ ಗಳಿಗಾಗಿ ಜನರು ಮುಗಿಬೀಳುತ್ತಿದ್ದಾರೆ. ಇಂದು ಕೂಡ ಬಳ್ಳಾರಿಯ ಹೊಸಪೇಟೆಯಲ್ಲಿ ಅರಣ್ಯ ಸಚಿವ ಆನಂದ ಸಿಂಗ್ ಅವರ ಪರವಾಗಿ ಆಹಾರ ಕಿಟ್ ಗಳನ್ನು ವಿತರಿಸುವ ಕೆಲಸ ಬೆಳಿಗ್ಗೆ ಆರಂಭಗೊಂಡಿತ್ತು. ಆದರೆ ಆಹಾರದ ಕಿಟ್ ಪಡೆಯಲು ಕೆಲವೇ ನಿಮಿಷಗಳಲ್ಲಿ ಜನರು ದೌಡಾಯಿಸಿದರು. ನೂಕು ನುಗ್ಗಲಿನಿಂದ ಬಂದ ಜನರನ್ನು ಕಂಡು ಆಹಾರ ಕಿಟ್ ವಿತರಣೆ ನಿಲ್ಲಿಸಲಾಯಿತು.
2000 ರೂ ಸಿಗುವ ವದಂತಿ- ಮಂಗಳೂರಲ್ಲಿ ಮುಗಿಬಿದ್ದ ನೂರಾರು ಜನ
ಹೊಸಪೇಟೆಯ ಬಹುತೇಕ ಪಡಿತರ ಅಂಗಡಿಗಳ ಮೂಲಕ ಕಿಟ್ ಅನ್ನು ನೀಡಲಾಗುತ್ತಿದೆ. ಆದರೆ ಜನರು ಸಾಮಾಜಿಕ ಅಂತ ಕಾಯ್ದುಕೊಳ್ಳದೇ ಮುಗಿಬೀಳುವುದು ಇನ್ನೂ ನಿಂತಿಲ್ಲ.
ಜಿಲ್ಲೆಯಲ್ಲಿ ಈವರೆಗೂ 13 ಪಾಸಿಟಿವ್ ಪ್ರಕರಣ ಪತ್ತೆ ಆಗಿದೆ. ಹೊಸಪೇಟೆ ನಗರ ಒಂದರಲ್ಲಿಯೇ ಹತ್ತು ಪ್ರಕರಣಗಳಿವೆ. ಆದರೂ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಾಮಾಜಿಕ ಅಂತರವನ್ನು ಮರೆತು ನೂಕು ನುಗ್ಗಲಿನಲ್ಲಿ ಬರುತ್ತಿದ್ದಾರೆ.