ಬಳ್ಳಾರಿಯಲ್ಲಿ ಮಳೆ; ಸೇತುವೆಯಿಲ್ಲದೇ ಜನರ ಪರದಾಟ
ಬಳ್ಳಾರಿ, ಅಕ್ಟೋಬರ್ 1: ಬಳ್ಳಾರಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ವ್ಯಾಪಕ ಮಳೆಯಾಗಿರುವ ವರದಿಯಾಗಿದೆ. ಬಳ್ಳಾರಿ, ಸಂಡೂರು ಹೊಸಪೇಟೆ ಕೂಡ್ಲಿಗಿ ಹೂವಿನ ಹಡಗಲಿಯಲ್ಲಿ ವ್ಯಾಪಕ ಮಳೆಯಾಗಿರುವುದಾಗಿ ತಿಳಿದುಬಂದಿದೆ.
ಭಾರೀ ಮಳೆಯಿಂದಾಗಿ ರಾರಾವಿ ಗ್ರಾಮದ ಯಲ್ಲಮನ ಹಳ್ಳದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದ್ದು, ಜನರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹಳ್ಳ ದಾಟಬೇಕಾದ ಅನಿವಾರ್ಯತೆ ಉಂಟಾಗಿದೆ. ಪ್ರತಿ ಸಲ ಮಳೆ ಬಂದಾಗ ಕರ್ನಾಟಕ ಮತ್ತು ಆಂಧ್ರ ಸಂಪರ್ಕಿಸುವ ಈ ಹಳ್ಳ ದಾಟಲು ಜನರು ಪ್ರಾಣವನ್ನೇ ಪಣಕ್ಕೆ ಇಡಬೇಕಾದ ಸ್ಥಿತಿ ಇದೆ.
ಯಲ್ಲಮ್ಮನಹಳ್ಳ ಮಳೆಯಿಂದ ತುಂಬಿ ಹರಿಯುತ್ತಿದ್ದು, ಕಳೆದ ವಾರ ಸುರಿದ ಮಳೆಯಿಂದಾಗಿ ತಾತ್ಕಾಲಿಕ ಸೇತುವೆ ಕುಸಿದ ಪರಿಣಾಮ ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆ ಮತ್ತು ಆಂಧ್ರಕ್ಕೆ ಸಂಪರ್ಕ ಕಲ್ಪಿಸೋ ರಸ್ತೆ ಸಂಪೂರ್ಣ ಜಲಾವೃತವಾಗಿದೆ.
ಮಳೆ ಆರ್ಭಟಕ್ಕೆ ಚಿತ್ರದುರ್ಗ, ಚಾಮರಾಜನಗರದಲ್ಲಿ ಕೊಳೆಯುತ್ತಿರುವ ಬೆಳೆಗಳು
ರಾರಾವಿಯಿಂದ ದಿನನಿತ್ಯ ಇದೇ ಮಾರ್ಗವಾಗಿ ಸಿರಗುಪ್ಪಕ್ಕೆ ಕೂಲಿಕಾರ್ಮಿಕರು ಬರುತ್ತಿದ್ದಾರೆ. ಮಳೆಯಿಂದ ನಿರ್ಮಾಣ ಹಂತದ ಸೇತುವೆ ಕೆಲವೆಡೆ ಈಗಾಗಲೇ ಕುಸಿದಿದೆ. ತಾತ್ಕಾಲಿಕ ಸೇತುವೆ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಪರಿಣಾಮ ನಿತ್ಯ ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟಬೇಕಿದೆ.
ಕೂಲಿಕಾರರು ಕೂಲಿಗೆ ಹೋಗಬೇಕಾದ್ರೆ ನಿತ್ಯ ಇದೇ ಗೋಳು. ಸ್ವಲ್ಪ ಮಳೆ ಬಂದ್ರೆ ಸಾಕು, ಜನರ ಗೋಳಾಟ ಹೇಳತೀರದು. ನೀರಿನಲ್ಲಿ ಕೊಚ್ಚಿಕೊಂಡು ಹೋದರೆ ಯಾರು ಹೊಣೆ?. ಪರ್ಯಾಯ ಮಾರ್ಗದ ಮೂಲಕ ದಡ ಸೇರಬೇಕಾದ್ರೆ, 15 ಕಿ.ಮೀ. ಸುತ್ತುವರೆದು ಹೋಗಬೇಕಾದ ಅನಿವಾರ್ಯತೆ. ಹೀಗಾಗಿ ಕೂಡಲೇ ತಾತ್ಕಾಲಿಕ ಸೇತುವೆ ಮರು ನಿರ್ಮಾಣ ಮಾಡುವಂತೆ ಜನರು ಆಗ್ರಹ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಭಾರೀ ಮಳೆ: ಬಳ್ಳಾರಿಯಲ್ಲಿ ನಿನ್ನೆಯಿಂದ ಮತ್ತೆ ಮಳೆ ಆರಂಭವಾಗಿದೆ ಸಂಡೂರು ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಸಂಡೂರು ಪಕ್ಕದ ನಾರಿಹಳ್ಳ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ನಾರಿಹಳ್ಳ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊರಕ್ಕೆ ಬಿಡಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಬಳ್ಳಾರಿ 8.3 ಮಿ.ಮೀ, ಹಡಗಲಿ 87.2, ಎಚ್.ಬಿ.ಹಳ್ಳಿ 22.0, ಹೊಸಪೇಟೆ 67.0, ಕೂಡ್ಲಿಗಿ 17.8, ಸಂಡೂರು 12.2, ಸಿರುಗುಪ್ಪ 5.6, ಕಂಪ್ಲಿ 23.4 ಮಿ.ಮೀ ಮಳೆಯಾಗಿದೆ.