ದೇವರಿಗಾಗಿ ಜನರ ಕಿತ್ತಾಟ; ಬಳ್ಳಾರಿ ಗಡಿಭಾಗದಲ್ಲೊಂದು ವಿಚಿತ್ರ ಆಚರಣೆ
ಬಳ್ಳಾರಿ, ಅ. 06: ಸಾಮಾನ್ಯವಾಗಿ ಜಾತ್ರೆ ಹಬ್ಬ ಹರಿದಿನಗಳು ಅಂದ್ರೆ, ದೇವರ ಪೂಜೆ ಪುನಸ್ಕಾರ ಮಾಡಿ ಸಂಭ್ರಮಾಚರಣೆ ಮಾಡ್ತಾರೆ. ಆದರೆ ಈ ಜಾತ್ರೆಯಲ್ಲಿ ದೇವರ ಮೂರ್ತಿಯನ್ನ ತಮ್ಮೂರಿಗೆ ಒಯ್ಯಲು ಭಕ್ತರು ಪರಸ್ಪರ ಬಡಿದಾಡಿಕೊಳ್ಳುತ್ತಾರೆ. ಬಳ್ಳಾರಿಯ ಗಡಿಭಾಗ ಆಂಧ್ರದ ಗಡಿಭಾಗದ ಮಾಳ ಮಲ್ಲೇಶ್ವರ ದೇವಸ್ಥಾನದಲ್ಲಿ ದಸರಾ ಹಬ್ಬದಲ್ಲಿ ವಿಶೇಷ ಆಚರಣೆಯಾಗಿದ್ದು, ಇಲ್ಲಿ ದೇವರಿಗಾಗಿ ಜನ ಬಡಿದಾಡುಕೊಳ್ಳುತ್ತಾರೆ.
ಆಂಧ್ರದ ದೇವರುಗಟ್ಟು ಗ್ರಾಮ ಕರ್ನಾಟಕದ ಬಳ್ಳಾರಿ ಜಿಲ್ಲೆ ಸಮೀಪದಲ್ಲಿದೆ. ದೇವರಗಟ್ಟು ಗ್ರಾಮದಲ್ಲಿ ಪ್ರತಿ ವರ್ಷ ಮಾಳ ಮಲ್ಲೇಶ್ವರ ಜಾತ್ರೆ ನಡೆಯುತ್ತದೆ. ಇದೊಂದು ಭಯಾನಕ ಬಡಿಗೆ ಬಡಿದಾಟದ ಜಾತ್ರೆಯಾಗಿದೆ. ಈ ಜಾತ್ರೆಯ ಆಚರಣೆ ಮತ್ತು ಹಿನ್ನೆಲೆಯು ಸಹ ಹುಬ್ಬೇರಿಸುವಂತಿದೆ.
ಸಿಬಿಐ ಅಧಿಕಾರಿಗಳಿಂದ ನನಗೆ ಕಿರುಕುಳ; ಬಳ್ಳಾರಿಯಲ್ಲಿ ಗಾಲಿ ರೆಡ್ಡಿ ಆತಂಕ
ಅಂದಹಾಗೆ ಈ ಜಾತ್ರೆಯಲ್ಲಿ ಕರ್ನಾಟಕದ ಭಕ್ತರೇ ಹೆಚ್ಚು ಸಂಖ್ಯೆಯಲ್ಲಿ ಭಾಗಿಯಾಗುತ್ತಾರೆ. ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಪ್ರತಿ ವರ್ಷದ ಜಾತ್ರೆ ಸಮಯದಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರೆಗೆ ಬಂದ ಭಕ್ತರು ಮಧ್ಯರಾತ್ರಿ 1 ಗಂಟೆಯಿಂದ ಬೆಳಗ್ಗೆ 5ರ ವರಗೆ ಬಡಿಗೆ ಹಿಡಿದು ಬಡಿದಾಡಿಕೊಳ್ಳುತ್ತಾರೆ.
ಬಡಿಗೆ ಬಡಿದಾಟ ಕೂಡ ಈ ಗ್ರಾಮಗಳಲ್ಲಿ ಸಂಪ್ರದಾಯ!
ಇದು ಎರಡು ಗ್ರಾಮಗಳ ನಡುವೆ ನಡೆಯುವ ಸಾಂಪ್ರದಾಯಕ ಬಡಿಗೆ ಬಡಿದಾಟವಾಗಿದೆ. ಸಂಪ್ರದಾಯದಂತೆ ಈ ವರ್ಷವೂ ಕೈಯಲ್ಲಿ ಬಡಿಗೆಗಳನ್ನ ಹಿಡಿದು ಒಬ್ಬರಿಗೊಬ್ಬರು ಜನ ಬಡಿದಾಡಿಕೊಂಡಿದ್ದಾರೆ.
ನೀವೆಂದೂ ನೋಡಿರದ ದೃಶ್ಯಗಳಿವು. ಘನಘೋರ ಭಯಂಕರ ಇಲ್ಲಿ ಕಣ್ಣೆದುರಿಗೆ ನಡೆಯುತ್ತೆ. ಜಾತ್ರೆಯಲ್ಲಿ ಹಲವು ವಿಶೇಷಗಳಿರುತ್ತವೆ. ಆದರೆ ಮನುಷ್ಯರು ಪರಸ್ಪರ ಬಡಿದಾಡಿಕೊಳ್ಳುವಷ್ಟರ ಮಟ್ಟಿಗಿರುತ್ತದೆಯೇ ಎನ್ನವ ಪ್ರಶ್ನೆ ಕೂಡ ನೋಡುಗರಲ್ಲಿ ಮೂಡುತ್ತೆ. ಇಲ್ಲಿ ಜನರು ಮಾತಾಡಲ್ಲ ಅವರ ಕೈಯಲ್ಲಿರುವ ಬಡಿಗೆ ಮಾತಾಡುತ್ತೆ.
ದೇವರನ್ನು ಒಲಿಸಿಕೊಳ್ಳು ಭಕ್ತರ ಬಡಿದಾಟ!
ಅದು ವಿಜಯದ ಸಂಕೇತವಾಗಿರುವ ವಿಜಯದಶಮಿ ದಿನದಂದು ಮಧ್ಯ ರಾತ್ರಿ ನಡೆಯುವ ಈ ಬಡಿಗೆಗಳ ಕಾದಾಟ ದೇವರನ್ನು ತಮ್ಮೂರಿಗೆ ಕರೆದುಕೊಳ್ಳಲು ನಡೆಯುತ್ತೆ. ದೇವರನ್ನು ಒಲಿಸಿಕೊಳ್ಳಲು ಭಕ್ತರು ಏನೆಲ್ಲ ಮಾರ್ಗಗಳನ್ನ ಅನುಸರಿಸುತ್ತಾರೆ ಎನ್ನುವುದಕ್ಕೆ ಇದು ಉತ್ತಮ ನಿದರ್ಶನ.
ವಿಜಯದಶಮಿಯ ಅಂಗವಾಗಿ ಪ್ರತಿ ವರ್ಷ ನಡೆಯುವ ಮಾಳ ಮಲ್ಲೇಶ್ವರ ಕಲ್ಯಾಣೋತ್ಸವದಲ್ಲಿ ದೇವರನ್ನು ಒಲಿಸಿಕೊಳ್ಳುವುದಕ್ಕಾಗಿ ಇಲ್ಲಿನ ಗ್ರಾಮಸ್ಥರು ದೊಣ್ಣೆಗಳಿಂದ ಪರಸ್ಪರ ಹೊಡೆದಾಡುತ್ತಾರೆ. ಗಡಿಭಾಗ ಬಳ್ಳಾರಿ ಸಮೀಪದ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆ ಆಲೂರ ಮಂಡಲದ ನೇರಣಕಿ ಗ್ರಾಮಕ್ಕೆ ಸೇರಿದ ಅರಣ್ಯ ಪ್ರದೇಶದ ಗುಡ್ಡದ ಮೇಲೆ ಮಾಳ ಮಲ್ಲೇಶ್ವರಸ್ವಾಮಿ ದೇವಸ್ಥಾನವಿದೆ. ಇದಕ್ಕೆ ದೇವರ ಗುಡ್ಡ ಎಂದು ಕರೆಯಲಾಗುತ್ತದೆ.
ತಮಟೆ ಬಾರಿಸುತ್ತಾ, ಕುಣಿಯುತ್ತಾ ಬಡಿದಾಡುವ ಯುವಕರು!
ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು ಇಲ್ಲಿನ ಬಹುತೇಕ ಜನ ಕನ್ನಡ ಭಾಷಿಕರೇ ಆಗಿದ್ದರಿಂದ ಕಾರಣಿಕ ನುಡಿ ಸಹ ಕನ್ನಡ ಭಾಷೆಯಲ್ಲೇ ಆಗುವುದು ವಿಶೇಷ. ಈ ದೃಶ್ಯವನ್ನು ನೋಡಲು ನೂರಾರು ಭಕ್ತರು ಆಗಮಿಸುತ್ತಾರೆ. ಇನ್ನು ಪ್ರಮುಖ ವಿಚಾರವೆಂದರೆ ಬಡಿಗೆ ಬಡಿದಾಟಕ್ಕೆ ವಿದ್ಯಾವಂತರು, ಬುದ್ಧಿವಂತರು, ಎಂಜಿನಿಯರ್ ಯುವಕರು ಭಾಗವಹಿಸುವುದು ಮತ್ತೊಂದು ವಿಶೇಷ.
ರಾತ್ರಿ ನಡೆಯುವ ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಯ ಕಲ್ಯಾಣೋತ್ಸವದಲ್ಲಿ ಉತ್ಸವ ಮೂರ್ತಿ ಮತ್ತು ಪಲ್ಲಕ್ಕಿಯನ್ನು ಹೊತ್ತು ನೇರಣಕಿ ಗ್ರಾಮದ ಭಕ್ತರು ದೇವರ ಗುಡ್ಡಕ್ಕೆ ಬರುತ್ತಾರೆ. ಈ ವೇಳೆ ಕಬ್ಬಿಣದ ಸಲಾಕೆ ಸುತ್ತಿದ ಕೋಲು ಹಿಡಿದು ತಂಡ ತಂಡಗಳಾಗಿ ತಮಟೆ ಬಾರಿಸುತ್ತ, ಹಿಲಾಲು ಉರಿಸುತ್ತ, ಹೂಂಕರಿಸುತ್ತ, ಕುಣಿಯುತ್ತ, ಉತ್ಸವ ಮೂರ್ತಿಗಳನ್ನು ಕೊಂಡೊಯ್ಯುತ್ತಾರೆ.
ಬಡಿದಾಟದಲ್ಲಿ ಅನಾಹುತವಾದರೂ, ಪೊಲೀಸ್ ಪ್ರಕರಣವಿಲ್ಲ!
ಈ ಉತ್ಸವ ಮೂರ್ತಿಯನ್ನು ತಮ್ಮ ಗ್ರಾಮಕ್ಕೆ ಒಳ್ಳೆಯದಾಗುತ್ತದೆಂಬ ನಂಬಿಕೆಯಿಂದ ಈ ರೀತಿ ಕೊಂಡೊಯ್ಯುಲಾಗುತ್ತದೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿ. ಈ ಸಂಭ್ರಮದಲ್ಲಿ ಸಾವಿರಾರು ಜನರ ಮಧ್ಯೆ ಹೊಡೆದಾಡುವ ದೃಶ್ಯ ನಡೆಯುವುದರಿಂದ ಇಲ್ಲಿ ಏನೇ ಅನಾಹುತ ಸಂಭವಿಸಿದರೂ ಯಾರು ಹೊಣೆಗಾರರಲ್ಲ. ಇವು ಪೊಲೀಸ್ ಪ್ರಕರಣಕ್ಕೂ ಸಂಬಂಧಪಡುವುದಿಲ್ಲ.
ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಹಬ್ಬದ ರಾತ್ರಿ ನಡೆದ ಕಲ್ಯಾಣೋತ್ಸವದಲ್ಲಿ ಮೂರ್ತಿಗಳ ರಕ್ಷಣೆಯಲ್ಲಿ ನೇರಣಕಿ ಭಕ್ತ ಸಮೂಹ ಮತ್ತು ಅರಕೆರ, ಎಳ್ಳಾರ್ಥಿ, ವಿರುಪಾಪುರ, ಸುಳುವಾಯಿ ಮೊದಲಾದ ಸುತ್ತಮುತ್ತಲ ಗ್ರಾಮಗಳ ಜನತೆ ಉತ್ಸವ ಮೂರ್ತಿಗಳನ್ನು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಪ್ರಯತ್ನಪಟ್ಟಿದ್ದಾರೆ.
ಈ ವರ್ಷ ಬಡಿಗೆ ಬಡಿದಾಟದಿಂದಾಗಿ 80ಕ್ಕೂ ಹೆಚ್ಚು ಜನರು ಗಾಯಗೊಂಡರೆ, ಕೆಲವರ ಪರಿಸ್ಥಿತಿ ಗಂಭೀರವಾಗಿದೆ. ಕೂಡಲೇ ಚಿಕಿತ್ಸೆ ನೀಡಲು ಸ್ಥಳದಲ್ಲಿಯೇ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಆದರೆ, ಈ ಸಂದರ್ಭದಲ್ಲಿ ಪೊಲೀಸರು ಮಾತ್ರ ಮೂಕ ಪ್ರೇಕ್ಷಕರಾಗಿರ್ತಾರೆ.
ವೈಜ್ಞಾನಿಕವಾಗಿ ನಾವೆಷ್ಟೇ ಮುಂದುವರೆದಿದ್ರೂ ಇಂತಹ ಆಚರಣೆಗಳು ಒಮ್ಮೊಮ್ಮೆ ನಮ್ಮನ್ನು ಚಕಿತರನ್ನಾಗಿ ಮಾಡ್ತವೆ. ರಕ್ತಚರಿತ್ರೆಯನ್ನು ಹೇಳೋಕಂತಲೇ ಇರುವಂತಹ ಇಂತಹ ಜಾತ್ರೆಗಳು ನಾಗರಿಕ ಸಮಾಜಕ್ಕೆ ಅವಶ್ಯಕತೆಯಿದೆಯಾ ಎನ್ನುವುದು ಕೂಡ ಪ್ರಮುಖ ಪ್ರಶ್ನೆಯಾಗಿದೆ.