'ನನ್ನ ಗೆಲುವೂ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇತಿಹಾಸ'
ಬಳ್ಳಾರಿ, ಮೇ. 4 : ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ. ಪರಮೇಶ್ವರ ನಾಯ್ಕ ಅವರು ಕಾರ್ಮಿಕ ಸಚಿವರಾಗಿ, ಎರಡನೇ ಸಲ ಗೆದ್ದಲ್ಲಿ ಮತ್ತು ಕ್ಷೇತ್ರದಲ್ಲಿ ಸತತವಾಗಿ ಎರಡನೇ ಸಲ ಗೆಲುವು ಸಾಧಿಸಿದಲ್ಲಿ ಇತಿಹಾಸವನ್ನೇ ನಿರ್ಮಿಸಲಿದ್ದಾರೆ.
ಪ್ರತಿಸ್ಪರ್ಧಿ ವಿರುದ್ಧ ವಿಶೇಷ ರೀತಿ ಪ್ರಚಾರ ಕೈಗೊಂಡ 'ಕೈ' ಅಭ್ಯರ್ಥಿ
ಪಿ.ಟಿ. ಪರಮೇಶ್ವರನಾಯ್ಕ ಅವರು ಇತಿಹಾಸ ನಿರ್ಮಿಸುತ್ತೇನೆ' ಎನ್ನುತ್ತಲೇ ಕ್ಷೇತ್ರದಲ್ಲಿ ಪ್ರಚಾರ ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಔಪಚಾರಿಕವಾಗಿ ಮಾತನಾಡಿ, ಆವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಚುನಾವಣಾ ಪ್ರಚಾರ ಹೇಗಿದೆ?
ಉತ್ತಮವಾಗಿದೆ. ಬಿರುಬೇಸಿಗೆಯ ತಾಪದಲ್ಲೇ ಚುನಾವಣಾ ಕಾವೂ ಹೆಚ್ಚುತ್ತಿದೆ. ದಿನದ 18 ತಾಸು ಚುನಾವಣೆಯದ್ದೇ ಕೆಲಸ. ಹಳ್ಳಿಗಳಲ್ಲಿ ಜನಗಳೊಂದಿಗೆ ಮಾತನಾಡುತ್ತಲೇ ಊಟ, ತಿಂಡಿ. ಚುನಾವಣಾ ಕಾಲ ಇವೆಲ್ಲಾ ಸಾಮಾನ್ಯ ಅಲ್ಲವೇ? ನಾನು ಗೆದ್ದು ಇತಿಹಾಸ ನಿರ್ಮಿಸುತ್ತೇನೆ ಎನ್ನುವ ವಿಶ್ವಾಸವಿದೆ.
ಇಲ್ಲಿ ಗೆದ್ದ ಅಭ್ಯರ್ಥಿಯ ಪಕ್ಷ ರಾಜ್ಯಾಡಳಿತ ಮಾಡುವ ಸಂಪ್ರದಾಯವಿದೆಯಲ್ಲ?
ಹೌದು. ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ನಾನು ಈ ಬಾರಿ ಗೆಲ್ಲುವ ಮೂಲಕ ಕಾಂಗ್ರೆಸ್ ಸರ್ಕಾರ ಪುನಃ ಅಧಿಕಾರಕ್ಕೆ ಬರಲಿದೆ. ನನ್ನ ಗೆಲುವೂ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇತಿಹಾಸ ನಿರ್ಮಿಸಿದಂತೆ.
ನಾನು ಗೆದ್ದ ನಂತರ ಮಾಡುವ ಕೆಲಸ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕ್ರಿಯಾಯೋಜನೆ ರೂಪಿಸಿ, ಕಾಮಗಾರಿ ಪ್ರಾರಂಭಿಸುವುದು ಮತ್ತು ತುಂಗಭದ್ರಾ ನದಿಯಿಂದ ನೀರಾವರಿಗಾಗಿ ನೀರು ಹರಿಸುವ ಯೋಜನೆಗೆ ಚಾಲನೆ. ರೈತರ ಬದುಕು ಹಸನಾಗಿಸುವುದೇ ಮೊದಲ ಕೆಲಸ.
ಪಕ್ಷೇತರ ಅಭ್ಯರ್ಥಿ ತೀವ್ರ ಸ್ಪರ್ಧೆ ನೀಡುವ ಆತಂಕವಿದೆಯೇ?
ಓದೋ ಗಂಗಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರು ಭ್ರಷ್ಟ ಅಧಿಕಾರಿ. 35 ಕೋಟಿ ಅಕ್ರಮ ಆಸ್ತಿ ಗಳಿಸಿದ ಆರೋಪ ಅವರ ಮೇಲಿದೆ. ತನಿಖೆ ಹಂತದಲ್ಲಿದೆ. ಸ್ಥಳೀಯ ಸಮಸ್ಯೆಗಳ ಕಾರಣ ಅವರ ಸ್ಪರ್ಧೆಗೆ ತೀವ್ರತೆ ಬಂದಿದೆ. ಅವರು, ಲೆಕ್ಕಕ್ಕಿಲ್ಲ, ಆಟಕ್ಕುಂಟು ಎನ್ನುವಂತೆ. ಭ್ರಷ್ಟರನ್ನು ಕ್ಷೇತ್ರ ಆರಿಸುವುದಿಲ್ಲ. ನನ್ನ ಗೆಲುವು ಖಚಿತ.
ಲಂಬಾಣಿ ಜನರ ಗುಳೆ ತಡೆಯಲು ಏಕೆ ಪ್ರಯತ್ನಿಸುತ್ತಿಲ್ಲ?
ಕಬ್ಬು ಕಡಿಯಲು, ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಲಂಬಾಣಿಗಳು ಅಲ್ಲದೇ ಇಲ್ಲಿಯ ಅನೇಕರು ವಲಸೆ ಹೋಗುತ್ತಿದ್ದಾರೆ. ಸರ್ಕಾರದ ಅನೇಕ ಯೋಜನೆಗಳು ಅವರನ್ನು ತಲುಪಿದ್ದರೂ ಅವರು ಗುಳೇ ಹೋಗುತ್ತಿರುವುದರ ಕುರಿತು ಅಧ್ಯಯನ ನಡೆಸಬೇಕಿದೆ. ಈ ಬಗ್ಗೆ ಗಮನ ನೀಡುವೆ.
ನಾನು, ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಮಹತ್ವ ನೀಡಿದ್ದೆ. ಮಾಜಿ ಆದ ಮೇಲೆ ಕ್ಷೇತ್ರದಲ್ಲೇ ಬೀಡುಬಿಟ್ಟು ಜನರೊಂದಿಗೆ ಬೆರೆತೆ.
ಎಂ.ಪಿ. ಪ್ರಕಾಶ್, ರವೀಂದ್ರ ಅವರ ಬೆಂಬಲಿಗರನ್ನು ಕಡೆಗಣಿಸಿರುವ ಆರೋಪವಿದೆ?
ನಿಜ. ಆರೋಪ ಏಕವ್ಯಕ್ತಿ ಕೇಂದ್ರಿತ. ಸತ್ಯಕ್ಕೆ ದೂರ. ನಾನು ಕಾಂಗ್ರೆಸ್ ನ ಯಾರೊಬ್ಬರನ್ನೂ ಕಡೆಗಣಿಸಿಲ್ಲ. ಎಂ.ಪಿ. ಪ್ರಕಾಶ್, ಎಂ.ಪಿ. ರವೀಂದ್ರ, ತಾಯಿ ಎಂ.ಪಿ. ರುದ್ರಾಂಬಿಕ ಅಥವಾ ಎಂ.ಪಿ. ಪ್ರಕಾಶ್ ಕುಟುಂಬದ ಎಲ್ಲರನ್ನೂ ಸದಾ ಗೌರವಿಸುತ್ತೇನೆ. ಹಲವರು ವೈಯಕ್ತಿಕ ಭಿನ್ನಾಭಿಪ್ರಾಯಗಳಿಗೆ ನಮ್ಮ ಮಧ್ಯೆ ಸಮಸ್ಯೆ ಸೃಷ್ಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಸರಿಯಾಗಲಿದೆ.
ಓದೋ ಗಂಗಪ್ಪ ಅವರಿಗೆ ಎಂ.ಪಿ. ಪ್ರಕಾಶ್ ಅವರ ಕುಟುಂಬದ ಆಶೀರ್ವಾದ ಇದೆ ಎಂದು ಹೇಳಲಾಗುತ್ತಿದೆ. ಹಾಗೇನಿಲ್ಲ. ಎಂ.ಪಿ. ಪ್ರಕಾಶ್ ನನಗೆ ಬೆಂಬಲಿಸಿದ್ದರು. ಆಶೀರ್ವಾದ ಮಾಡಿದ್ದರು.
ಕಾಂಗ್ರೆಸ್ ಪಕ್ಷದ ಮುಖಂಡರು, ಮುಖ್ಯಮಂತ್ರಿಗಳು ಹೂವಿನಹಡಗಲಿ ಕ್ಷೇತ್ರದ ಅನೇಕ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಸರಿ ಆಗಲಿವೆ. ಎಂ.ಪಿ. ರವೀಂದ್ರ ಪ್ರಚಾರಕ್ಕೆ ಬರುವ ವಿಶ್ವಾಸವಿದೆ. ನಂಬಿಕೆ ಇದೆ.
ಅನುಪಮ ಶೆಣೈ ವಿವಾದ?
ಅನುಪಮ ಶೆಣೈ ಉತ್ತಮ ಅಧಿಕಾರಿ. ವೈಯಕ್ತಿಕ ಕಾರಣಗಳಿಂದಾಗಿ ತಪ್ಪು ಗ್ರಹಿಕೆಯ ಕಾರಣಕ್ಕಾಗಿ ವಿವಾದ ಸೃಷ್ಟಿ ಆಗಿದ್ದು. ಅವರು ಇಲಾಖೆಯನ್ನು ಬಿಡಬಾರದಾಗಿತ್ತು. ಕ್ಷೇತ್ರದ ಜನರು ಈ ವಿಚಾರವನ್ನು ಮರೆತಿದ್ದಾರೆ. ಇದು ಚುನಾವಣೆಯ ವಿಚಾರವೂ ಅಲ್ಲ.
ಹಳೆಯ ಲೀಡರುಗಳು ನಿಮ್ಮೊಂದಿಗಿಲ್ಲ ಏಕೆ?
ನಿಜ. ಈ ಮೊದಲ ಎಲ್ಲಾ ಚುನಾವಣೆಗಳಲ್ಲಿ ಜಿಲ್ಲೆಯ - ರಾಜ್ಯದ ಎಲ್ಲಾ ಲೀಡರ್ ಗಳು, ಕೆ.ಸಿ. ಕೊಂಡಯ್ಯ ಅವರು ನಮ್ಮೊಂದಿಗೆ ಪ್ರಚಾರದಲ್ಲಿ ಇರುತ್ತಿದ್ದರು. ಕಾಲಕಾಲಕ್ಕೆ ಮಾರ್ಗದರ್ಶನ ನೀಡುತ್ತಿದ್ದರು.
ಆದರೆ, ವೈಯಕ್ತಿಕ ಕಾರಣಗಳಿಗಾಗಿ ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ನಿರ್ವಹಿಸುವ ಸಾಧ್ಯತೆಗಳಿವೆ.