ಕನ್ನಡ ನಾಡು-ನುಡಿಗೆ ಪ್ರಾಣ ಮುಡಿಪಾಗಿಟ್ಟ ಪೈಲ್ವಾನ್ ರಂಜಾನ್ ಸಾಬ್
ಬಳ್ಳಾರಿ, ನವೆಂಬರ್ 1: ಕರ್ನಾಟಕದ ಏಕೀಕರಣಕ್ಕೆ ತಮ್ಮ ಪ್ರಾಣವನ್ನು ತೆತ್ತವರು ಅನೇಕ ಮಹನೀಯರಿದ್ದಾರೆ. ಅದರಲ್ಲಿ ಕರ್ಣಾಟಕದ ಏಕೀಕರಣದಲ್ಲಿ ತಮ್ಮದೇ ಛಾಪು ಮೂಡಿಸಿದವರಲ್ಲಿ ಗಣಿನಾಡು ಬಳ್ಳಾರಿಯ ಪೈಲ್ವಾನ್ ರಂಜಾನ್ ಸಾಬ್ ಕೂಡಾ ಒಬ್ಬರು.
ಬಳ್ಳಾರಿಯ ಪಿಂಜಾರ ಓಣಿಯ ಇವರು ಕರ್ಣಾಟಕದ ಏಕೀಕರಣಕ್ಕೆ ತಮ್ಮ ಪ್ರಾಣವನ್ನು ನೀಡುತ್ತಾರೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಬಾಲ್ಯದಿಂದಲೂ ಕನ್ನಡದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ರಂಜಾನ್ ಸಾಬ್ ಮುಂದೆ ಕರ್ನಾಟಕದ ಕ್ರಿಯಾ ಸಮಿತಿಯ ಸಕ್ರಿಯ ಕಾರ್ಯಕರ್ತರಾಗಿದ್ದರು.
ಕರ್ನಾಟಕ ರಾಜ್ಯೋತ್ಸವ: ಎಲ್ಲಡೆ ಮೊಳಗಿತು ಕನ್ನಡ ಡಿಂಡಿಮ
ಈ ಮೂಲಕ ಹತ್ತು ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಕನ್ನಡಿಗರ ಸತತ ಹೋರಾಟದ ಫಲವಾಗಿ ಬಳ್ಳಾರಿಯು ಅಂದಿನ ಮೈಸೂರು ರಾಜ್ಯದಲ್ಲಿ ವಿಲೀನಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು. ಹೀಗಾಗಿ ಆ ಭಾಗದ ಕನ್ನಡಿಗರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಅಂದು 1953, ಸಪ್ಟೆಂಬರ್ 30ರ ರಾತ್ರಿ ವೇಳೆಯಲ್ಲಿ ಮರುದಿನ ಸಂಭ್ರಮಾಚರಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದವು. ಹೀಗಾಗಿ ಸಂಭ್ರಮಾಚರಣೆ ಹೊಣೆಯನ್ನು ರಂಜಾನ್ ಸಾಬ್ ಅವರೇ ವಹಿಸಿಕೊಂಡರು. ಕಾರಣ, ಅಲ್ಲಿ ಕನ್ನಡದ ವಿರೋಧಿಗಳ ಉಪಟಳ ಹೆಚ್ಚಾಗಿತ್ತು. ಹೀಗಾಗಿ ಧ್ವಜ ಸ್ತಂಭ ಹಾಗಾ ರಾತ್ರಿ ನಿರ್ಮಾಣವಾದ ಮಂಟಪದ ರಕ್ಷಣೆಗೆ ಟೊಂಕಕಟ್ಟಿ ರಂಜಾನ್ ಸಾಬ್ ನಿಂತರು.
ಮುರುದಿನ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಅಂದಿನ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯ ಅವರು ಬರುವವರಿದ್ದರು. ಹೀಗಾಗಿ ಮಂಟಪದ ರಕ್ಷಣೆ ಹಾಗೂ ನಿರ್ಮಾಣದ ಹೊಣೆಗಾರಿಕೆನ್ನು ರಂಜಾನ್ ಸಾಬ್ ವಹಿಸಿಕೊಂಡರು. ಇನ್ನು ರಾತ್ರಿ ಪೂರ್ತಿಯಾಗಿ ಕೆಲಸ ಮಾಡಿದ ಅವರು, ರಾತ್ರಿ ಮಂಟಪದಲ್ಲಿ ಮಲಗುತ್ತಿದ್ದರು.
ಆದರೆ ಮರುದಿನ ಬೆಳಗಾಗುವ ಹೊತ್ತಿಗೆ ರಂಜಾನ್ ಅವರ ಮೇಲೆ ದಾಳಿ ನಡೆದಿದೆ ಎಂಬ ಸುದ್ದಿಯನ್ನು ಜನರು ನಂಬಲು ಸಾಧ್ಯವಾಗಲಿಲ್ಲ. ರಾತ್ರಿ ಮಂಟಪದಲ್ಲಿ ಮಲಗಿದ್ದ ರಂಜಾನ್ ಸಾಬ್ ಮೇಲೆ ಕನ್ನಡ ವಿರೋಧಿ ಗುಂಪು ಆ್ಯಸಿಡ್ ದಾಳಿ ಮಾಡಿತ್ತು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ರಂಜಾನ್ ಸಾಬ್ ಅವರಿಗೆ ಚಿಕಿತ್ಸೆ ನೀಡುವ ಸಲುವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ರಂಜಾನ್ ಸಾಬ್ ಅವರು 1953ರ ನವೆಂಬರ್ 2 ರಂದು ಕೊನೆಯುಸಿರೆಳೆದರು. ರಂಜಾನ್ ಸಾಬ್ ಕನ್ನಡ ವಿರೋಧಿಗಳ ದಾಳಿಗೆ ತುತ್ತಾಗಿದ್ದು, ಕನ್ನಡಕ್ಕಾಗಿ ಹೋರಾಟ ಮಾಡುತ್ತಲೇ ಕನ್ನಡಕ್ಕಾಗಿ ಪ್ರಾಣ ನೀಡಿದರು.
ಇನ್ನು ಬಳ್ಳಾರಿಯಲ್ಲಿ ಪ್ರತಿ ವರ್ಷ ಬಂದಾಗಲೂ ರಂಜಾನ್ ಸಾಬ್ ನೆನಪಾಗುತ್ತಾರೆ. ಆದರೆ ನಗರದಲ್ಲಿ ಅವರ ಒಂದು ಪುತ್ಥಳಿ ನಿರ್ಮಾಣ ಮಾಡುವ ಸಲುವಾಗಿ ಅನೇಕರು ಧ್ವನಿ ಎತ್ತುತ್ತಾರೆ. ಆದರೆ ಆ ಧ್ವನಿ ಕೇವಲ ಧ್ವನಿಯಾಗಿ ಉಳಿದಿದೆ. ಇವರೆಗೂ ಅವರ ಒಂದು ಪುತ್ಥಳಿ ನಿರ್ಮಾಣ ಮಾತ್ರ ಆಗಿಲ್ಲ.