'ನಮ್ಮ ಮತ ಮಾರಾಟಕ್ಕಿಲ್ಲ' ಎಂದ ಬಳ್ಳಾರಿ ಗ್ರಾಮೀಣ ಮತದಾರರು!
ಬಳ್ಳಾರಿ, ಮೇ. 06: ನಮ್ಮ ಮತ ಮಾರಾಟಕ್ಕಿಲ್ಲ' ಹೀಗೊಂದು ಅಭಿಯಾನ ಬಳ್ಳಾರಿ ನಗರ ವ್ಯಾಪ್ತಿಯ, ಬಳ್ಳಾರಿ ಗ್ರಾಮೀಣ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ನಿವಾಸಿಗಳಿಂದ ಆರಂಭವಾಗಿದೆ.
ಓಟಿಗಾಗಿ ಏನೆಲ್ಲಾ ಬೇಡಿಕೆಗಳನ್ನು ಇರಿಸುವ ಈ ಸಂದರ್ಭದಲ್ಲಿ ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣ ಪಕ್ಕದ ಟೀಚರ್ಸ್ ಕಾಲನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಪದಾಧಿಕಾರಿಗಳು ಒಟ್ಟಾಗಿ ತೆಗೆದುಕೊಂಡ ತೀರ್ಮಾನ ನಮ್ಮ ಮತ ಮಾರಾಟಕ್ಕಿಲ್ಲ'.
ಬಳ್ಳಾರಿ ನಗರದಲ್ಲಿ ಗರಿಷ್ಠ, ಹೂವಿನಹಡಗಲಿಯಲ್ಲಿ ಕನಿಷ್ಠ ಮತದಾರರು
ಹೌದು, ಈ ರೀತಿಯಾಗಿ ಬರೆದು ಬೋರ್ಡ್ ಗಳನ್ನು ಪ್ರದರ್ಶನ ಮಾಡಿ, ಪ್ರತಿ ಮನೆಯ ಗೇಟಿನ ಮುಂದೆ, ಕಾಂಪೌಂಡ್ ಗೆ ಹಚ್ಚುವುದು ಮತ್ತು ಕಾಲನಿಯ ಪ್ರವೇಶದ್ವಾರದಲ್ಲಿ ಎಲ್ಲರಿಗೂ ಕಾಣುವಂತೆ ದೊಡ್ಡದಾದ ಫ್ಲೆಕ್ಸ್ ಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ.
ಟೀಚರ್ಸ್ ಕಾಲನಿಯ ಪ್ರತಿ ಮನೆಯ ಗೋಡೆಯ ಮೇಲೆ ನಮ್ಮ ವೋಟು ಮಾರಾಟಕ್ಕಿಲ್ಲ' ಎಂಬ ಭಿತ್ತಿ ಪತ್ರ ಪ್ರದರ್ಶನವಾಗುತ್ತಿದೆ. ಯಾವುದೇ ರಾಜಕಾರಣಿ, ಲೋಕಲ್ ಲೀಡರ್ ಈ ಕಾಲನಿಯ ಒಳಗೆ ಎಂಟ್ರಿ ಆಗುವ ಮೊದಲು ಬ್ಯಾನರ್ ಹಾಗೂ ಮನೆಯ ಮುಂಭಾಗದಲ್ಲಿ ಇರುವ ಭಿತ್ತಿ ಪತ್ರ ಅವರನ್ನು ಹಾರ್ಧಿಕವಾಗಿ ಸ್ವಾಗತಿಸುತ್ತದೆ.
ಕಾಲನಿಯ ಪಾರ್ಕ್ ಅಭಿವೃದ್ಧಿ ವಿಚಾರದಲ್ಲಿ ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳಿಂದ ಎದುರಿಸಿದ ವಿರೋಧ, ಅಧಿಕಾರಿಗಳಿಂದ ಪಡೆದ ಬೆಂಬಲದ ಹಿನ್ನಲೆಯಲ್ಲಿ ಈ ಕಾಲನಿಯ ನಿವಾಸಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
ಈ ಕಾಲನಿಯಲ್ಲಿ 70ಕ್ಕೂ ಹೆಚ್ಚು ಕುಟುಂಬಗಳಿವೆ. ಎಲ್ಲರೂ ಟೀಚರ್ಸ್ ಕಾಲನಿ ಕ್ಷೇಮಾಭಿವೃಧಿ ಸಂಘ ರಚಿಸಿಕೊಂಡು, ಈ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೇ, ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಪ್ರತಿ ಮನೆಗೂ ಹೋಗಿ, ಪವಿತ್ರ ಮತದಾನದ ಜಾಗೃತಿ ಮೂಡಿಸಿ, ನಮ್ಮ ಮತ ಮಾರಟಕ್ಕಿಲ್ಲ ಎಂಬ ಭಿತ್ತಿ ಪತ್ರ ಅಂಟಿಸುತ್ತಿದ್ದಾರೆ.
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ. ನಾಗೇಂದ್ರ, ಬಿಜೆಪಿಯಿಂದ ಸಣ್ಣ ಫಕೀರಪ್ಪ ಸ್ಪರ್ಧಿಸುತ್ತಿದ್ದು ಇವರಿಬ್ಬರ ಕದನ ಕುತೂಹಲ ಕೆರಳಿಸಿದೆ. ಈ ಕ್ಷೇತ್ರದಲ್ಲಿ ಶ್ರೀರಾಮುಲು ಅವರ ಪ್ರಾಬಲ್ಯ ಹೆಚ್ಚಾಗಿರುವುದು ವಿಶೇಷ.