ಲೇ ಪರಮೇಶ್ವರ್ ನಾಯಕ್, ನಿನ್ ಮೇಲೆ ಕೇಸ್ ಹಾಕ್ಬೇಕು: ಸಿದ್ದರಾಮಯ್ಯ
ಬಳ್ಳಾರಿ, ಜೂನ್ 15: ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಅದ್ದೂರಿಯಾಗಿ ಮಗನ ಮದುವೆ ಮಾಡಿದ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ವಿರುದ್ದ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಲ್ಯಾಣ ಮಂಟಪದ ಎದುರೇ ಸಿಟ್ಟಾದ ಘಟನೆ ನಡೆದಿದೆ.
Recommended Video
ಪರಮೇಶ್ವರ್ ನಾಯಕ ಮಗನ ಮದುವೆಗೆ ಆಗಮಿಸಿದ್ದ ಸಿದ್ದರಾಮಯ್ಯ ಕಾರಿನಿಂದ ಇಳಿದ ಕೂಡಲೇ, "ಲೇ ಪಿಟಿಪಿ, ಮಾಸ್ಕ್ ಹಾಕಿಕೊಂಡಿಲ್ಲ. ಐವತ್ತು ಜನರ ಮೇಲೆ ಜನ ಸೇರಿಸಿದ್ದೀಯಾ. ನಿನ್ ಮೇಲೆ ಕೇಸ್ ಹಾಕಬೇಕು"ಎಂದು ಸಿಟ್ಟಾಗಿದ್ದಾರೆ.
ಲಾಕ್ಡೌನ್ ನಿಯಮ ಉಲ್ಲಂಘನೆ: ಶಾಸಕ ಪಿ.ಟಿ.ಪರಮೇಶ್ವರ ವಿರುದ್ಧ ಕೇಸ್
ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್ ನಾಯಕ್, "ಅಯ್ಯೋ ಸುಮ್ಮನಿರಿ ಸಾರ್..ಮಿಡಿಯಾದವರು ಇದ್ದಾರೆ" ಎಂದು ಹೇಳಿ, ಸಿದ್ದಾರಾಮಯ್ಯನವರನ್ನು ಒಳಗೆ ಕರೆದುಕೊಂಡು ಹೋದರು.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗ್ರಾಮದ ಲಕ್ಷ್ಮೀಪುರ ತಾಂಡಾದಲ್ಲಿ ಶಾಸಕ ಪರಮೇಶ್ವರ್ ನಾಯ್ಕ್ ಅವರ ಮಗನ ಮದುವೆ ನಡೆದಿದೆ. ಮದುವೆ ಕಾರ್ಯಕ್ರಮಕ್ಕೆ ಸಚಿವ ಶ್ರೀರಾಮುಲು, ಕಾಂಗ್ರೆಸ್ ಮುಖಂಡರಾದ ಡಾ.ಪರಮೇಶ್ವರ್ ಮುಂತಾದವರು ಭಾಗವಹಿಸಿದ್ದರು.
''ಶಾಸಕರ ಪುತ್ರನ ಮದುವೆಗೆ ಯಾವುದೇ ರೀತಿಯ ಅನುಮತಿ ಕೇಳಿರಲಿಲ್ಲ. ಕಾರ್ಯಕ್ರಮದಲ್ಲಿ ಕೋವಿಡ್ ಲಾಕ್ಡೌನ್ ನಿಯಮಗಳ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ. ನಿಯಮಾವಳಿ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ'' ಎಂದು ಬಳ್ಳಾರಿ ಡಿಸಿ ಎಸ್.ಎಸ್.ನಕುಲ್ ತಿಳಿಸಿದ್ದರು.
''ನನ್ನ ಮಗನ ಮದುವೆಗೆ ಕಡಿಮೆ ಜನರು ಬನ್ನಿ ಎಂದು ವಿನಂತಿಸಿಕೊಂಡಿದ್ದೆ. ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ಜನರು ಬಂದಿದ್ದಾರೆ. ಬಂದವರನ್ನು ಬರಬೇಡಿ ಎಂದು ಹೇಳಲು ಆಗುತ್ತಾ" ಎಂದು ಪಿ.ಟಿ.ಪರಮೇಶ್ವರ್ ನಾಯಕ್ ಪ್ರತಿಕ್ರಿಯೆ ನೀಡಿದ್ದರು.