Oneindia Impact: ಅವೈಜ್ಞಾನಿಕ ಕೃಷಿ ಹೊಂಡ ಮುಚ್ಚಿದ ಅಧಿಕಾರಿಗಳು
ವಿಜಯನಗರ, ಜುಲೈ 09; ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿಯಲ್ಲಿ ಸುರಿದ ಮಳೆಯಿಂದಾಗ ನೀರು ಹೊಲಗಳಿಗೆ ನುಗ್ಗಿತ್ತು. ಪಪ್ಪಾಯಿ ಮತ್ತು ದಾಳಿಂಬೆ ಫಲಸು ಹಾನಿಯಾಗಿತ್ತು.
ಮಳೆಯ ನೀರು ಮೂರು ಎಕರೆಯಲ್ಲಿದ್ದ ಬೆಳೆಗಳ ಮೇಲೆ ನುಗ್ಗಲು ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಕೃಷಿ ಹೊಂಡ ಕಾರಣ ಎಂದು ರೈತರು ದೂರಿದ್ದರು. ಒನ್ ಇಂಡಿಯಾ ಕನ್ನಡ ಗುರುವಾರ ಈ ವರದಿ ಪ್ರಕಟಿಸಿತ್ತು, ಫೇಸ್ಬುಕ್ನಲ್ಲಿ ರೈತ ಜಾತಪ್ಪ ವಿಡಿಯೋ ಹಾಕಿತ್ತು.
ವಟ್ಟಮ್ಮನಹಳ್ಳಿ ಗ್ರಾಮದ ಜಾತಪ್ಪ ಎನ್ನುವ ರೈತನ ಬೆಳೆ ಜುಲೈ 7 ತಡರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಹಾನಿಯಾಗಿತ್ತು. ಪಪ್ಪಾಯಿ ಮತ್ತು ಡಾಳಿಂಬೆ ಹೊಲಕ್ಕೆ ನೀರು ನುಗ್ಗಿ ಗಿಡಗಳಿಗೆ ಹಾನಿಯಾಗಿತ್ತು. ಈ ಕುರಿತು ರೈತರು ಕಣ್ಣೀರಿಟ್ಟಿದ್ದರು.
ವಿಜಯನಗರದಲ್ಲಿ ಮಳೆ ಅಬ್ಬರ; ಮನೆಗಳಿಗೆ ಹಾನಿ, ಬೆಳೆಗಳು ಜಲಾವೃತ
ಒನ್ ಇಂಡಿಯಾ ಜೊತೆ ಮಾತನಾಡಿದ್ದ ರೈತ ಜಾತಪ್ಪ ತನ್ನ ಅಳಲನ್ನು ತೊಡಿಕೊಂಡಿದ್ದ. "ಅವೈಜ್ಞಾನಿಕವಾಗಿ ಕೃಷಿ ಹೊಂಡವನ್ನು ಹಳ್ಳದಲ್ಲಿ ನಿರ್ಮಾಣ ಮಾಡಿದ್ದರಿಂದ ಮಳೆ ನೀರು ನಮ್ಮ ಹೊಲಕ್ಕೆ ನುಗ್ಗಿದೆ, ಇದಕ್ಕೆ ಕೃಷಿ ಅಧಿಕಾರಿಗಳೇ ಕಾರಣ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
"ಪ್ರತಿ ವರ್ಷವೂ ನಮಗೆ ಇದೇ ರೀತಿಯಾಗುತ್ತಿದೆ. ನಮಗೆ ನ್ಯಾಯ ಕೊಡಿಸಿ" ಎಂದು ಜಾತಪ್ಪ ಪುತ್ರ ವಿರೇಶ್ ಕಣ್ಣೀರಿಟ್ಟಿದ್ದರು. ಘಟನೆ ನಡೆದ ಸ್ಥಳಕ್ಕೆ ಜುಲೈ 8ರಂದು ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.
ಪರಿಸ್ಥಿತಿ ಅವಲೋಕನ ನಡೆಸಿದ ಕೃಷಿ ಇಲಾಖೆಯ ಅಧಿಕಾರಿಗಳು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದ ಕೃಷಿ ಹೊಂಡವನ್ನು ತೆರವುಗೊಳಿಸಿದರು.