ಶಾಸಕ ಆನಂದ್ ಸಿಂಗ್, ಬಿ.ನಾಗೇಂದ್ರ ವಿರುದ್ಧ ಜಾಮೀನು ರಹಿತ ವಾರೆಂಟ್
ಬೆಂಗಳೂರು, ಅಕ್ಟೋಬರ್ 03 : ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಇಬ್ಬರೂ ಶಾಸಕರು ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಬುಧವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ವಿ.ಪಾಟೀಲ್ ಅವರು ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ್ದಾರೆ.
ಬೇಲೇಕೇರಿ ಪ್ರಕರಣ : ಜನಾರ್ದನ ರೆಡ್ಡಿ ಆರೋಪಿ ನಂ.1
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಇಬ್ಬರು ಶಾಸಕರು ಆರೋಪಿಗಳಾಗಿದ್ದು ಜೈಲು ವಾಸವನ್ನು ಅನುಭವಿಸಿದ್ದರು. ಪ್ರರಕರಣದಲ್ಲಿ ಆರೋಪಿ ಸ್ಥಾನದಿಂದ ತಮ್ಮನ್ನು ಕೈ ಬಿಡುವಂತೆ ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಶಾಸಕರು ಅರ್ಜಿ ಸಲ್ಲಿಸಿದ್ದರು.
ಬೇಲೇಕೇರಿ : ಸ್ವಸ್ತಿಕ್, ಕಾರದಪುಡಿ ಮೇಲೆ ಚಾರ್ಜ್ ಶೀಟ್
ವಿಶೇಷ ನ್ಯಾಯಾಲಯ ಶಾಸಕ ಆನಂದ್ ಸಿಂಗ್ ಸಂಬಂಧಿಯಾದ ಶ್ಯಾಮರಾಜ್ ಸಿಂಗ್ಗೆ ಸಹ ನೋಟಿಸ್ ಜಾರಿಯಾಗಿದೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ಕೈ ಬಿಡಬೇಕು ಎಂದು ಮೂವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಆನಂದ್ ಸಿಂಗ್!
ಜಾಮೀನು ರಹಿತ ವಾರೆಂಟ್ ಏಕೆ?
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಮೂವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಬುಧವಾರ ವಿಚಾರಣೆಗೆ ಹಾಜರಾಗಬೇಕಿತ್ತು. ಕಳೆದ ಮೂರು ಬಾರಿಯೂ ವಿಚಾರಣೆಗೆ ಹಾಜರಾಗಿ ಎಂದು ಸಮನ್ಸ್ ನೀಡಲಾಗಿತ್ತು. ಆದರೆ, ಶಾಸಕರಾದ ಬಿ.ನಾಗೇಂದ್ರ, ಆನಂದ್ ಸಿಂಗ್ ಮತ್ತು ಶ್ಯಾಮರಾಜ್ ಸಿಂಗ್ ಗೈರು ಹಾಜರಾಗಿದ್ದರು. ಆದ್ದರಿಂದ, ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ.
ಸುಪ್ರೀಂಗೆ ಚಾರ್ಜ್ ಶೀಟ್
ವೆಂಕಟೇಶ್ವರ ಟ್ರಾನ್ಸ್ಪೋರ್ಟ್ ಕಂಪನಿಯಿಂದ 50 ಸಾವಿರ ಮೆಟ್ರಿಕ್ ಟನ್ ಅಕ್ರಮ ಅದಿರು ಸಾಗಾಟ ಮಾಡಿದ ಪ್ರಕರಣದಲ್ಲಿ ಆನಂದ್ ಸಿಂಗ್, ಬಿ.ನಾಗೇಂದ್ರ ಸೇರಿ 18 ಆರೋಪಿಗಳಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಅನ್ವಯ ಸಿಬಿಐ ಪ್ರಕರಣದ ವಿಚಾರಣೆ ನಡೆಸಿ, ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಶಾಸಕ ನಾಗೇಂದ್ರ ಹೇಳಿದ್ದೇನು?
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ವಾರೆಂಟ್ ಜಾರಿಯಾದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ವಿಚಾರಣೆ ದಿನಾಂಕ ಗೊತ್ತಿರಲಿಲ್ಲ. ಆದ್ದರಿಂದ, ಹಾಜರಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಸಮಸ್ಯೆಯಾಗಿದೆ. ನಾಳೆ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಜಾಮೀನು ರಹಿತ ವಾರೆಂಟ್ ಹಿಂಪಡೆಯಲು ಪ್ರಯತ್ನ ನಡೆಸಲಿದ್ದಾರೆ' ಎಂದರು.
ಜನಾರ್ದನ ರೆಡ್ಡಿ ಆರೋಪಿ ನಂ 1
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮೊದಲ ಆರೋಪಿಯಾಗಿದ್ದಾರೆ. ಸಿಬಿಐ ಸಲ್ಲಿಸಿದ ಚಾರ್ಜ್ ಶೀಟ್ ಪ್ರಕಾರ ಹಾಲಿ ಶಾಸಕ ಸುರೇಶ್ ಬಾಬು, ಆನಂದ್ ಸಿಂಗ್, ಬಿ.ನಾಗೇಂದ್ರ ಅವರು ಆರೋಪಿಗಳು. ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಸಹ ಆರೋಪಿಯಾಗಿದ್ದಾರೆ.