ಸ್ಮಾರಕಗಳ ಬಳಿ ಅಕ್ರಮ ಮಣ್ಣು ಸಾಗಣೆ; ಹಂಪಿ ಸ್ಮಾರಕಗಳಿಗೆ ಹಾನಿ
ಬಳ್ಳಾರಿ, ಮಾರ್ಚ್ 22: ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾದ ಹಂಪಿಯಲ್ಲಿ ಸ್ಮಾರಕಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಅಳಿಯ ರಾಮರಾಯ 500 ರಿಂದ 600 ವರ್ಷಗಳಿ ಹಿಂದೆ ನಿರ್ಮಿಸಿದ್ದ ಕೋಟೆ ಗೋಡೆ ಕುಸಿದು ಬಿದ್ದಿದೆ. ಸ್ಮಾರಕಗಳಿಗೆ ಇಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮಣ್ಣು ಸಾಗಣೆಯಿಂದಲೇ ಹಾನಿ ಸಂಭವಿಸುವ ಭೀತಿ ಎದುರಾಗಿದೆ.
ಹಂಪಿಯ ವಿಜಯ ವಿಠಲ ದೇವಾಲಯಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ತಾಳವಾರಘಟ್ಟ ದ್ವಾರದ ಬಳಿಯ ಶಿವ ದೇವಾಲಯದ ಪಕ್ಕದಲ್ಲೇ ಹಲವಾರು ದಿನಗಳಿಂದ ಅನಧಿಕೃತವಾಗಿ ಮಣ್ಣು ಸಾಗಾಣಿಕೆ ನಡೆಯುತ್ತಿದೆ. ಶಿವ ದೇವಾಲಯದ ಪಕ್ಕದಿಂದಲೇ ಹಿಟಾಚಿ ಯಂತ್ರದಿಂದ ಬೃಹತ್ ಲಾರಿಗಳ ಮೂಲಕ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡಲಾಗುತ್ತದೆ. ಹಿಟಾಚಿಯಿಂದ ಕೆಲಸ ಮಾಡುವ ಸಂದರ್ಭದಲ್ಲಿ ಇದಕ್ಕಾಗಿ ಕೋಟೆ ಗೋಡೆಯನ್ನು ಧ್ವಂಸ ಮಾಡಲಾಗಿದೆ.
ಉರುಳಿ ಬೀಳುತ್ತಿವೆ ಹಂಪಿ ಸ್ಮಾರಕಗಳು, ಬೇಕಿದೆ ರಕ್ಷಣೆ
ಶಿವನ ದೇವಾಲಯವು ಕೋಟೆ ಗೋಡೆಗೆ ಹೊಂದಿಕೊಂಡಿರುವ ಕಲ್ಲು ಗುಂಡಿನ ಮೇಲೆ ಹರಪ್ಪ ನಾಗರೀಕತೆ ಸಮಾನವಾದ ಲಿಪಿ ಕಂಡು ಬರುತ್ತದೆ. ಇಂತಹ ಐತಿಹಾಸಿಕ ಸ್ಥಳದಲ್ಲಿ ಅಕ್ರಮ ಮಣ್ಣನ್ನು ತೆಗೆಯುತ್ತಿರುವುದು ಮುಂದುವರೆದರೆ ಐತಿಹಾಸಿಕ ಸ್ಮಾರಕಗಳಿಗೆ ಹಾನಿಯಾಗಲಿದೆ.
ಹಂಪಿ ವೀಕ್ಷಣೆಗಿದ್ದ ನಿರ್ಬಂಧ ತೆರವು; ಆಫ್ ಲೈನ್ ಟಿಕೆಟ್ ಪುನರಾರಂಭ
ಸ್ಮಾರಕ ಪ್ರೇಮಿಗಳ ಆಕ್ರೋಶ
ತಳವಾರ ಘಟ್ಟ ಮಹಾದ್ವಾರದ ಅನತಿ ದೂರದಲ್ಲಿ ಬೃಹತ್ ಲಾರಿಗಳ ಓಡಾಟದ ಸದ್ದು ಕೇಳಿ ಬರುತ್ತಿದ್ದು ಅಕ್ರಮವಾಗಿ ಮಣ್ಣು ಸಾಗಣಿಕೆ ಮಾಡುತ್ತಿದ್ದರೂ ಸಹ ಕೇಂದ್ರ ಪುರಾತತ್ವ ಮತ್ತು ರಾಜ್ಯ ಪುರಾತತ್ವ ಇಲಾಖೆ ಹಾಗೂ ಕಂದಾಯ ಮತ್ತು ಅರಣ್ಯ ಇಲಾಖೆ, ಹಂಪಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ನಾವು ಏನು ನೋಡಿಯೇ ಇಲ್ಲ ಎಂದು ಕಣ್ಮುಚ್ಚಿ ಕುಳಿತು ಜಾಣ ಮೌನವಹಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸ್ಮಾರಕ ಹಾಳಾಗುತ್ತಿದೆ ಎಂದು ಸ್ಮಾರಕ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಕಾನೂನು ಕ್ರಮಗಳನ್ನು ಕೈಗೊಳ್ಳಿ
ಈ ಪ್ರದೇಶದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಮಣ್ಣು ಸಾಗಾಣೆ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಇಂತಹ ಘಟನೆಗಳನ್ನು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ವಿಜಯನಗರ ಸ್ಮಾರಕ ಸಂರಕ್ಷಣಾ ಸೇನೆ ಹಂಪಿ ಒತ್ತಾಯಿಸಿದೆ.
ಸ್ಥಳಕ್ಕೆ ಭೇಟಿ ನೀಡಲಾಗಿದೆ
"ಸಹಾಯಕ ಆಯುಕ್ತರಾದ ಸಿದ್ದರಾಮೇಶ್ವರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು" ಎಂದು ಗ್ರಾಮ ಲೆಕ್ಕಿಗ ಸುಭಾಷ್ ಹೇಳಿದ್ದಾರೆ.
ಕೋಟೆ ಗೋಡೆ ಧ್ವಂಸ
"ಹಂಪಿ ತಾಳವಾರ ಘಟ್ಟ ದ್ವಾರದ ಬಳಿ ಶಿವ ದೇವಾಲಯದ ಪಕ್ಕದಲ್ಲಿ ಅನಧಿಕೃತ ಮಣ್ಣು ಸಾಗಾಣಿಕೆ ನಡೆಯುತ್ತಿದೆ. ಇದಕ್ಕಾಗಿ ಕೋಟೆ ಗೋಡೆ ಧ್ವಂಸ ಮಾಡಲಾಗಿದೆ. ಗುಂಡಿನ ಮೇಲೆ ಹರಪ್ಪನ ನಾಗರಿಕತೆಗೆ ಸಮಾನವಾದ ಲಿಪಿ ಇದೆ ಇದು ಹೋಗೆ ಮುಂದುವರೆದರೆ ಸ್ಮಾರಕಗಳು ನಾಶವಾಗುತ್ತವೆ" ಎಂದು ವಿಜಯನಗರ ಸ್ಮಾರಕ ಸಂರಕ್ಷಣಾ ಸೇನೆ ಹಂಪಿ ಅಧ್ಯಕ್ಷ ವಿಶ್ವನಾಥ ಮಾಳಗಿ ಹೇಳಿದ್ದಾರೆ.