ಮುಂದಿನ ವರ್ಷ ದೇಶವೇ ತಿರುಗಿ ನೋಡುವಂತೆ ಹಂಪಿ ಉತ್ಸವ ಆಚರಣೆ: ಸಚಿವ ಆನಂದ್ ಸಿಂಗ್
ಹಂಪಿ, ನವೆಂಬರ್ 15: ಪ್ರತಿ ವರ್ಷದಂತೆ ಈ ವರ್ಷವೂ ಹಂಪಿ ಉತ್ಸವ ವಿಜೃಂಭಣೆಯಿಂದ ಆಚರಿಸಬೇಕಾಗಿತ್ತು. ಆದರೆ ಕೋವಿಡ್ ಹಿನ್ನೆಲೆ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಹೇಳಿದರು.
ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಂಪಿ ಉತ್ಸವಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಇತಿಹಾಸ ನೆನಪಿಡುವ ರೀತಿಯಲ್ಲಿ ಹಂಪಿ ಉತ್ಸವ ನಡೆಯಲಿದೆ. ವಿಜಯನಗರದ ವೈಭವದ ಇತಿಹಾಸ ನಾವು ಕಲ್ಪನೆ ಮಾಡುವುದಕ್ಕೂ ಆಗಲ್ಲ, ಅಂತಹ ವೈಭವದ ಇತಿಹಾಸ ನಮ್ಮದು ಎಂದರು.
ಈ ರೀತಿಯ ಸರಳ ಆಚರಣೆಗೆ ಬಳ್ಳಾರಿ ಜಿಲ್ಲಾಡಳಿತದೊಂದಿಗೆ ಜಿಲ್ಲೆಯ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ದಯವಿಟ್ಟು ಜಿಲ್ಲೆಯ ಜನರು ಸಾಮಾಜಿಕ ಅಂತರ, ಸ್ಯಾನಿಟೈಸ್, ಮಾಸ್ಕ್ ಧರಿಸಬೇಕು. ಕೋವಿಡ್ ವ್ಯಾಕ್ಸಿನ್ ಸಿಗುವವರೆಗೆ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬಾರದು ಎಂದು ಮನವಿ ಮಾಡಿದರು.
ಸರಳ ಹಾಗೂ ಸಾಂಕೇತಿಕವಾಗಿ ಆಚರಣೆ
ಪ್ರತಿ ವರ್ಷ ಮೂರು ದಿನಗಳ ಕಾಲ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಅತ್ಯಂತ ವಿಜೃಂಭಣೆಯಿಂದ ರಾಜ್ಯ ಸರಕಾರವು ಹಂಪಿ ಉತ್ಸವವನ್ನು ನಡೆಸುತ್ತಿತ್ತು. ಈ ಬಾರಿ ಕೊವಿಡ್-19 ನಿಂದಾಗಿ ಸರಳ ಹಾಗೂ ಸಾಂಕೇತಿಕವಾಗಿ ಕೋವಿಡ್ ಮಾರ್ಗಸೂಚಿಗಳ ಅನುಸಾರ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಮುಂದಿನ ನವೆಂಬರ್ ನಲ್ಲಿ ಇಡೀ ದೇಶವೇ ಹಂಪಿಯತ್ತ ಸುಳಿಯುವಂತಹ ಹಂಪಿ ಉತ್ಸವ ಮಾಡಲಾಗುವುದು ಎಂದು ಸಚಿವ ಆನಂದ್ ಸಿಂಗ್ ಹೇಳಿದರು. ಈ ಸಂದರ್ಭದಲ್ಲಿ ಸಂಸದರಾದ ವೈ. ದೇವೇಂದ್ರಪ್ಪ ಮಾತನಾಡಿದರು.
ಜನಮನಸೂರೆಗೊಂಡ ತುಂಗಾರತಿ ಮಹೋತ್ಸವ
ಪವಿತ್ರ ತುಂಗಾಭದ್ರಾ ನದಿಯ ದಡದಲ್ಲಿ ಎಲ್ಲಿ ನೋಡಿದರಲ್ಲಿಯೂ ದೀಪಗಳ ಸಾಲು ಸಾಲು, ಬೆಳಕಿನ ವೈಭವ. ನದಿಯ ಬಂಡೆಗಳ ಮೇಲೂ ಹಣತೆ ಹಚ್ಚಲಾಗಿತ್ತು. ಅಲ್ಲದೇ ನದಿಗೆ ಬಾಗಿನ ಸಮರ್ಪಣೆ ಮಾಡಲಾಯಿತು.
ಹಂಪಿ ಉತ್ಸವದ ನಿಮಿತ್ತ ವಿರೂಪಾಕ್ಷೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ತುಂಗಾಭದ್ರಾ ನದಿ ದಡದಲ್ಲಿ ಶುಕ್ರವಾರ ರಾತ್ರಿ ತುಂಗಾರತಿ ಮಹೋತ್ಸದಲ್ಲಿ ಕಂಡುಬಂದಿತು. ಇದು ಜನಮನಸೂರೆಗೊಂಡಿತು.
ಜನರಿಗೆ ತಾಯಿ ಭುವನೇಶ್ವರಿ ದೇವಿಯ ಆಶೀರ್ವಾದ
ನದಿ ದಡದಲ್ಲಿಯೇ ಸುಂದರ ಮಂಟಪ ನಿರ್ಮಿಸಿ, ತಾಯಿ ಭುವನೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ವಿವಿಧ ರೀತಿಯ ಧಾರ್ಮಿಕ ಆಚರಣೆಗಳ ಮೂಲಕ ಒಂದು ಗಂಟೆಗೂ ಹೆಚ್ಚು ಕಾಲ ತುಂಗಾಭದ್ರಾ ನದಿ ಮತ್ತು ಭುವನೇಶ್ವರಿ ದೇವಿಗೆ ವಿಶೇಷವಾದ ಪೂಜೆ ಸಲ್ಲಿಸಲಾಯಿತು. ಭುವನೇಶ್ವರಿ ದೇವಿಗೆ ಹಾಗೂ ತುಂಗಭದ್ರೆಗೆ ವಿವಿಧ ಬಗೆಯ ಆರತಿಗಳನ್ನು ಬೆಳಗಲಾಯಿತು.
ಪ್ರತಿ ಹುಣ್ಣಿಮೆಗೆ ತುಂಗಭದ್ರಾ ಆರತಿ ಮಹೋತ್ಸವವನ್ನು ಆಚರಿಸಲಾಗುವುದು. ಈ ಮೂಲಕ ಹಂಪಿಗೆ ಬರುವ ಪ್ರವಾಸಿಗರಿಗೆ, ಸುತ್ತಮುತ್ತಲಿನ ಜನರಿಗೆ ತಾಯಿ ಭುವನೇಶ್ವರಿ ದೇವಿಯ ಆಶೀರ್ವಾದ ಪಡೆಯುವಂತಾಗಲಿ ಎಂದು ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ಸೂರ್ಯಚಂದ್ರ ಇರುವವರೆಗೆ ಹಂಪಿ ಉತ್ಸವ
ಹಂಪಿ ಉತ್ಸವದ ನಿಮಿತ್ತ ವಿರೂಪಾಕ್ಷೇಶ್ವರ ದೇವಸ್ಥಾನದ ದಡದ ತಟದಲ್ಲಿ ಏರ್ಪಡಿಸಿದ್ದ ತುಂಗಭದ್ರಾ ಆರತಿ ಮಹೋತ್ಸವ ನಂತರ ಅವರು ಮಾತನಾಡಿ, ಹುಣ್ಣಿಮೆ ದಿನ ತುಂಗಭದ್ರಾ ಆರತಿಗೆ ಆಗಮಿಸುವ ಜನರಿಗಾಗಿ ಬೆಳಕಿನ ವ್ಯವಸ್ಥೆ, ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು. ಎಲ್ಲಿಯವರೆಗೆ ಸೂರ್ಯಚಂದ್ರ ಇರುವರೋ ಅಲ್ಲಿಯವರೆಗೆ ಹಂಪಿ ಉತ್ಸವ ನಡೆಯುತ್ತದೆ, ಅಲ್ಲಿಯವರೆಗೂ ತುಂಗಭದ್ರಾ ಆರತಿ ಮಹೋತ್ಸವ ನಡೆಯಲಿದೆ ಎಂದರು.
ಹಂಪಿ ಉತ್ಸವ ಮೆರವಣಿಗೆಯಲ್ಲಿ ಸಾಗಿಬಂದ ವೀರಗಾಸೆ, ಡೊಳ್ಳು ಕುಣಿತ, ಹಲಗೆ ವಾದನ, ಕಹಳೆ ವಾದನ, ನಂದಿಧ್ವಜ ಪ್ರದರ್ಶನ ವಿಜಯನಗರ ಸಾಮ್ರಾಜ್ಯದಲ್ಲಿ ಶ್ರೀ ಕೃಷ್ಣದೇವರಾಯನ ಒಡ್ಡೊಲಗವೇ ಸಾಗುತ್ತಿರುವಂತೆ ನೋಡುಗರನ್ನು ವರ್ತಮಾನದಿಂದ ಇತಿಹಾಸಕ್ಕೆ ಕರೆದೊಯ್ಯುವಂತಿತ್ತು.
ಶೋಭಾಯಾತ್ರೆಯಲ್ಲಿ ಕಲಾವಿದರ ಉತ್ಸಾಹ
ಹಗಲುವೇಷ, ಸಿಂದೋಳ್ ಕುಣಿತ, ಹಕ್ಕಿಪಿಕ್ಕಿ ಬುಡಕಟ್ಟು ನೃತ್ಯ, ಗೊರವರ ಕುಣಿತ, ಮರಗಾಲು ಕುಣಿತ, ಕೀಲುಕುದುರೆ ಪ್ರದರ್ಶನ ಗಮನಸೆಳೆದವು. ಜಾನಪದ ಐಸಿರಿಯನ್ನು ಜನರು ಕಣ್ತುಂಬಿಕೊಂಡರು.
ಮೆರವಣಿಗೆಯನ್ನು ಸ್ಮರಣೀಯವಾಗಿಸಿಕೊಳ್ಳಲು, ಕೆಲವರು ತಮ್ಮ ಮೊಬೈಲ್ ಗಳಿಂದ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದರೆ, ಹಲವರು ಮೆರವಣಿಗೆಯಲ್ಲಿ ತಾವೂ ಸಾಗುತ್ತ ವಿಡಿಯೋ ದೃಶ್ಯ ಚಿತ್ರೀಕರಿಸಿಕೊಳ್ಳುತ್ತಿದ್ದುದು ಕಂಡುಬಂದಿತು. ಶೋಭಾಯಾತ್ರೆಯಲ್ಲಿ ಕಲಾವಿದರ ಉತ್ಸಾಹ ತುಂಗಾರತಿ ಕಾರ್ಯಕ್ರಮ ಸಮಾರಂಭ ಮುಕ್ತಾಯವಾಗುವವರೆಗೂ ತಾರಕಕ್ಕೇರಿದ್ದು ವಿಶೇಷವಾಗಿತ್ತು.
ಸರಳ ಹಂಪಿ ಉತ್ಸವ ಆಚರಣೆ
ಸಂಸದ ದೇವೇಂದ್ರಪ್ಪ, ಶಾಸಕರಾದ ಎಂ.ಎಸ್ ಸೋಮಲಿಂಗಪ್ಪ, ಹೊಸಪೇಟೆ ತಾಲ್ಲೂಕ್ ಪಂಚಾಯತ್ ಅಧ್ಯಕ್ಷರಾದ ಎನ್.ನಾಗವೇಣಿ ಬಸವರಾಜ್, ತಾಲೂಕು ಪಂಚಾಯತ್ ಸದಸ್ಯ ಪಾಲಪ್ಪ, ಕಮಲಾಪುರ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸೈಯದ್ ಅಮಾನುಲ್ಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಎಸ್. ರಂಗಪ್ಪ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಕೆ.ಆರ್.ನಂದಿನಿ, ಹೊಸಪೇಟೆ ಸಹಾಯಕ ಆಯುಕ್ತ ಶೇಖ್ ತನ್ವೀರ್ ಅಸೀಫ್, ಪ್ರೊಬೇಷನರಿ ಐಎಎಸ್ ರಾಹುಲ್ ಸಂಕನೂರು, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಮತ್ತಿತರರು ಇದ್ದರು.