ಶ್ರೀರಾಮುಲು ಆಪ್ತ ಬಂಡೆ ರಮೇಶ್ ಕೊಲೆ ಆರೋಪಿ ಯಲ್ಲಪ್ಪ ಮರ್ಡರ್ ಹಿಂದಿದೆ ಇನ್ನಷ್ಟು ಸಂಗತಿ
ಬಳ್ಳಾರಿ, ಫೆಬ್ರವರಿ 27: ಶ್ರೀರಾಮುಲು ಆಪ್ತ ಬಂಡೆ ರಮೇಶನನ್ನು ಕೊಲೆ ಮಾಡಿದ್ದ ರೌಡಿ ಶೀಟರ್ ಯಲ್ಲಪ್ಪ ಮಂಗಳವಾರ ಕೊಲೆಯಾಗಿದ್ದು, ಇದು ಹಳೇ ದ್ವೇಷದಿಂದ ನಡೆದ ಕೊಲೆ ಎಂದು ಶಂಕಿಸಲಾಗಿದೆ.
ಮಂಗಳವಾರ ಬಳ್ಳಾರಿಯ ದೇವಿನಗರದ ಕಿರಾಣಿ ಅಂಗಡಿ ಮುಂದೆ ಕುರ್ಚಿ ಹಾಕಿಕೊಂಡು ಕುಳಿತಿದ್ದ ರೌಡಿಶೀಟರ್ ಯಲ್ಲಪ್ಪನ ತಲೆಗೆ ಆಟೋ ರಿಕ್ಷಾದಲ್ಲಿ ಬಂದಿಳಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ಈ ಪ್ರಕರಣದಿಂದ ಇದೀಗ ಹತ್ತಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಡೆ ರಮೇಶನನ್ನು ಆತನ ಹುಟ್ಟುಹಬ್ಬದ ದಿನದಂದೇ ಯಲ್ಲಪ್ಪ ಕೊಲೆ ಮಾಡಿದ್ದು, ಇದೀಗ ಬಂಡೆ ರಮೇಶ್ ಹುಟ್ಟುಹಬ್ಬದ ದಿನದಂದೇ ಯಲ್ಲಪ್ಪ ಕೂಡ ಕೊಲೆಯಾಗಿದ್ದಾನೆ.
ಆಂಧ್ರದಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್
ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲೇ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ ರೌಡಿಶೀಟರ್ ಯಲ್ಲಪ್ಪನನ್ನು ಅಲ್ಲಿನ ಪೊಲೀಸರು ಗಡಿಪಾರು ಮಾಡಿದ್ದರು. ಕಳೆದ ನಾಲ್ಕು ವರ್ಷಗಳಿಂದ ಯಲ್ಲಪ್ಪ ಬಳ್ಳಾರಿ ನಗರದಲ್ಲೇ ನೆಲೆಸಿದ್ದ. ಕರ್ನಾಟಕ ಮತ್ತು ನೆರೆಯ ಆಂಧ್ರಪ್ರದೇಶ ರಾಜ್ಯಗಳಲ್ಲೂ ಕ್ರಿಮಿನಲ್ ಆಗಿದ್ದ ಈತ ಮಾಜಿ ನಕ್ಸಲೇಟ್ ಕೂಡ ಆಗಿದ್ದ ಎಂದು ತಿಳಿದುಬಂದಿದೆ. ಬರೀ ಕೊಲೆ, ದರೋಡೆ, ಸುಲಿಗೆಯನ್ನೇ ತನ್ನ ವೃತ್ತಿಯನ್ನಾಗಿಸಿಕೊಂಡಿದ್ದ ಯಲ್ಲಪ್ಪ ವಿರುದ್ಧ ಅನಂತರಪುರ ಜಿಲ್ಲೆ ಉರವಗೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ.
ಶ್ರೀರಾಮುಲು ಆಪ್ತ ಬಂಡಿ ರಮೇಶ್ ಕೊಲೆ ಆರೋಪಿ ಯಲ್ಲಪ್ಪ ಮರ್ಡರ್
ಬಿಜೆಪಿ ಮುಖಂಡ ಬಂಡಿ ರಮೇಶನ ಕೊಲೆ ಮಾಡಿದ್ದ ಯಲ್ಲಪ್ಪ
ಈ ಕಾರಣಕ್ಕಾಗಿಯೇ ಉರವಗೊಂಡ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಕೂಡ. ಕರ್ನಾಟಕ ಆಂಧ್ರ ಗಡಿಯಂಚಿನ ಬಳ್ಳಾರಿ ನಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಶ್ರಯ ಪಡೆದಿದ್ದ ಈತ ಈಚೆಗೆ ತನ್ನ ಮಗಳ ಮನೆಯಲ್ಲಿ ವಾಸ ಮಾಡಿದ್ದ. ಯಲ್ಲಪ್ಪ ಬಳ್ಳಾರಿಯಲ್ಲಿಯೂ ತನ್ನ ಪಟಾಲಂ ಕಟ್ಟಿಕೊಂಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇಲ್ಲೂ ಕೊಲೆ, ಸುಲಿಗೆ, ಪಂಚಾಯತಿ ಮಾಡಿಕೊಂಡು ಇಲ್ಲಿನ ರೌಡಿಶೀಟರ್ ಜೊತೆಗೂಡಿ ರೌಡಿಸಂ ಮಾಡುತ್ತಾ ಬಿಜೆಪಿ ಮುಖಂಡ ಬಂಡೆ ರಮೇಶ್ ನನ್ನು ಮತ್ತೊಬ್ಬ ರೌಡಿಶೀಟರ್ ಜಗ್ಗನ ಜೊತೆಗೂಡಿ ಕೊಲೆ ಮಾಡಿ ಜೈಲು ಸೇರಿದ್ದ.
ರಮೇಶನ ಹುಟ್ಟುಹಬ್ಬದ ದಿನದಂದೇ ಯಲ್ಲಪ್ಪನೂ ಕೊಲೆಯಾದ
ಎರಡು ವರ್ಷದ ಹಿಂದೆ ಬಂಡೆ ರಮೇಶ್ ಹುಟ್ಟುಹಬ್ಬದಂದೇ ಕೊಚ್ಚಿ ಕೊಲೆ ಮಾಡಲಾಗಿತ್ತು. ಮಂಗಳವಾರ, ಫೆಬ್ರವರಿ 25 ಬಂಡೆ ರಮೇಶನ ಹುಟ್ಟುಹಬ್ಬ ಇದ್ದು, ಇದೇ ದಿನ ಯಲಪ್ಪನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಅಂದಹಾಗೆ ಹತ್ಯೆಯಾದ ಯಲ್ಲಪ್ಪನ ಹೆಸರಿನಲ್ಲಿ ರಾಜ್ಯದ ಬಳ್ಳಾರಿ ಗ್ರಾಮಾಂತರದಲ್ಲಿ ಎರಡು, ಕಮಲಾಪುರ ಪೊಲೀಸ್ ಠಾಣೆಯಲ್ಲಿ ಒಂದೊಂದು ಪ್ರಕರಣಗಳಿವೆ. ಜೈಲಿನಿಂದ ಬಿಡುಗಡೆ ಬಳಿಕವೂ ಯಲ್ಲಪ್ಪ ಸುಧಾರಿಸಲಿಲ್ಲ. ಆಂಧ್ರದಿಂದ ಗಡಿಪಾರಾದ ಬಳಿಕ ರಾಜ್ಯದ ಬಳ್ಳಾರಿಯಲ್ಲಿ ತನ್ನ ಅಟಾಟೋಪ ಮುಂದುವರೆಸಿದ್ದ ಎಂದು ತಿಳಿದುಬಂದಿದೆ.
ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ರೌಡಿ ಶೀಟರ್ ಸ್ಲಂ ಭರತ್ ಸಾವು
ಹಳೇ ದ್ವೇಷಕ್ಕೆ ಕೊಲೆ ಎಂದು ದೂರು ಕೊಟ್ಟ ಯಲ್ಲಪ್ಪನ ಪತ್ನಿ
ಕೆಲವು ವಿಚಾರಗಳಲ್ಲಿ ಬಳ್ಳಾರಿಯಲ್ಲಿರುವ ರೌಡಿಶೀಟರ್ ಗಳ ಮಧ್ಯ ಭಿನ್ನಾಭಿಪ್ರಾಯ, ಮನಸ್ತಾಪ ಬಂದು ಹಲವು ಗುಂಪುಗಳಾಗಿದ್ದವು. ಈ ಭಿನ್ನಾಭಿಪ್ರಾಯ, ಹಳೆಯ ದ್ವೇಷಗಳೇ ಯಲ್ಲಪ್ಪನ ಭೀಕರ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಈ ಅನುಮಾನದಿಂದಲೇ ಯಲ್ಲಪ್ಪನ ಪತ್ನಿ ಸಾಲಮ್ಮ, ರೌಡಿ ಶೀಟರ್ ಜಗ್ಗ, ಆತನ ಸಹಚರರು ಹಾಗೂ ಮತ್ತೊಬ್ಬ ರೌಡಿ ಶೀಟರ್ ಅಂದ್ರಾಳ್ ಸೀತಾರಾಮ ಹಾಗೂ ಆತನ ಸಹಚರ ಮೇಲೆ ಹಳೆಯ ದ್ವೇಷಕ್ಕೆ ಹತ್ಯೆ ಮಾಡಿದ್ದಾರೆಂದು ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೊಲೆಗೆ ಸೀನಾ, ಕೃಷ್ಣ, ಅಬ್ದುಲ್ ಸಹಕರಿಸಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.