ಸಿದ್ದು ಮುಂದೆ, ಮೋದಿ ಹಿಂದೆ ನೋಡ್ಕೊಂಡು ಗಾಡಿ ಓಡಿಸ್ತಾರೆ!
ಹೊಸಪೇಟೆ, ಫೆಬ್ರವರಿ 10 : ರಾಹುಲ್ ಗಾಂಧಿಯವರು ಮುಕ್ಕಾಲು ಗಂಟೆ ಮಾಡಿದ ಭಾಷಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ವಾಹನ ಓಡಿಸುವ ರೀತಿಯನ್ನು ವ್ಯಾಖ್ಯಾನಿಸಿದ್ದು ಕೇಳುಗರಿಗೆ ರಂಜನೆ ನೀಡುವಂತಿತ್ತು.
ಸಿದ್ದರಾಮಯ್ಯನವರು ಗಾಡಿ ಓಡಿಸುವಾಗ ಯಾವಾಗಲೂ ಮುಂದೆ ನೋಡಿಕೊಂಡು ಗಾಡಿ ಓಡಿಸುತ್ತಾರೆ. ಮುಂದೆ ಏನು ನಡೆಯುತ್ತಿದೆ ಎಂಬುದು ಅವರಿಗೆ ಗೊತ್ತಿರುತ್ತದೆ. ಇದರಿಂದ ಯಾವುದೇ ಅಪಘಾತವೂ ಆಗುವುದಿಲ್ಲ. ಆದರೆ, ಮೋದಿಯವರು ಹಿಂಬದಿ ಕಾಣಿಸುವ ಕನ್ನಡಿಯನ್ನು ನೋಡಿಕೊಂಡು ಮುಂದೆ ಗಾಡಿ ಓಡಿಸುತ್ತಾರೆ. ಅದಕ್ಕಾಗಿಯೇ ಅಪಘಾತಗಳಾಗಿವೆ ಎಂದು ರಾಹುಲ್ ಮೋದಿಯನ್ನು ಅಪಹಾಸ್ಯ ಮಾಡಿದರು.
ನೀವು ಕರೆದಾಗಲೆಲ್ಲಾ ಕರ್ನಾಟಕಕ್ಕೆ ಬರುವೆ: ರಾಹುಲ್ ವಚನ
ನರೇಂದ್ರ ಮೋದಿಜಿಯವರು ಹಿಂಬದಿ ಕಾಣಿಸುವ ಕನ್ನಡಿ ನೋಡಿಕೊಂಡು ಓಡಿಸಿದ್ದರಿಂದಲೇ ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯಂಥ ಅಪಘಾತಗಳು ಸಂಭವಿಸಿವೆ. ಇದರಿಂದಾಗಿಯೇ ಜಿಎಸ್ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಅನ್ನಾಗಿ ಬದಲಾಯಿಸಿದ್ದು! ಇನ್ನು ಮೇಲಾದರೂ ಮೋದಿಯವರು ಸಿದ್ದರಾಮಯ್ಯ ಹೇಗೆ ಆಡಳಿತ ನಡೆಸುತ್ತಾರೆ ಎಂಬುದನ್ನು ಅವರಿಂದ ನೋಡಿ ಕಲಿತುಕೊಳ್ಳಲಿ ಎಂದು ಟಾಂಗ್ ನೀಡಿದರು.
ತಮ್ಮ ಭಾಷಣದುದ್ದಕ್ಕೂ ನರೇಂದ್ರ ಮೋದಿ ಅವರನ್ನು ಟೀಕಿಸಲಿಕ್ಕಾಗಿಯೇ ಹೆಚ್ಚಿನ ಸಮಯ ಮೀಸಲಿಟ್ಟ ರಾಹುಲ್ ಗಾಂಧಿಯವರು, ಪ್ರಧಾನಿಯವರೇ, ಸಂಸತ್ತಿನಲ್ಲಿ ಒಂದು ಗಂಟೆಯ ಕಾಲ ಕಾಂಗ್ರೆಸ್ ಅನ್ನು ಹಳಿಯುವ ಕೆಲಸವನ್ನೇ ಮಾಡಿದಿರಿ. ನಾವು ಇತಿಹಾಸದ ಬಗ್ಗೆ ಪಾಠ ಕೇಳೋಕೆ ನಿಮ್ಮನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿಲ್ಲ. ದೇಶದ ಭವಿಷ್ಯದ ಬಗ್ಗೆ ಯೋಚಿಸುವುದಕ್ಕೆ ಪ್ರಧಾನಿ ಮಾಡಿದ್ದೇವೆ ಎಂದು ಟೀಸಿದರು.