ಸಿಎಂ ಆಗಿ ಬಿಎಸ್ವೈ ಅಧಿಕಾರವಧಿ ಪೂರ್ಣಗೊಳಿಸುತ್ತಾರೆ: ಬಿಜೆಪಿ ಶಾಸಕರ ಸ್ಪಷ್ಟನೆ
ವಿಜಯನಗರ, ಜುಲೈ 20: "ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದೆನ್ನಲಾದ ವೈರಲ್ ಆಡಿಯೋ ಧ್ವನಿ ಕೇವಲ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಬಿಜೆಪಿ ಪಕ್ಷದಲ್ಲಿ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ,'' ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದರು.
ಹೊಸಪೇಟೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಜೂಗೌಡ, "ಮಾಧ್ಯಮಗಳಲ್ಲಿ ಯಾವುದೋ ಒಂದು ಆಡಿಯೋ ಸಿಎಂ ಯಡಿಯೂರಪ್ಪರನ್ನು ಬದಲಾವಣೆ ಮಾಡುವ ಕುರಿತು ಇದೆ ಅಂತ ಹೇಳಲಾಗುತ್ತಿದೆ, ಆದರೆ ಅದು ನಳಿನ್ ಕುಮಾರ್ ಕಟೀಲ್ ಅವರದ್ದು ಅಂತ ಹೇಳಲಾಗುತ್ತಿದೆ, ಅದೆಲ್ಲ ತನಿಖೆಯಾಗಬೇಕು ಆಗ ಮಾತ್ರ ಗೊತ್ತಾಗುತ್ತದೆ,'' ಎಂದರು.
"ಸಿಎಂ ಯಡಿಯೂರಪ್ಪ ಬದಲಾವಣೆ ಕುರಿತು ನಮ್ಮ ಮುಂದೆ ಯಾವುದೇ ರೀತಿಯ ಪ್ರಶ್ನೆಗಳಿಲ್ಲ. ಪಕ್ಷದ ಸಭೆಗಳಲ್ಲಿ ಯಾವುದೇ ರೀತಿಯ ಸಿಎಂ ವಿಚಾರವಾಗಿ ಬದಲಾವಣೆ ಕುರಿತಾಗಿ ಚರ್ಚೆ ನಡೆದಿಲ್ಲ, ಅಷ್ಟಕ್ಕೂ ಹೈಕಮಾಂಡ್ ಇದೆ. ಸಿಎಂ ಯಡಿಯೂರಪ್ಪನವರೇ ಖುದ್ದಾಗಿ ಹೇಳಿದಾರಲ್ಲವಾ. ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಿ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅಂತ ಹೇಳಿದರೆ ಕೂಡಲೇ ಕೊಡುತ್ತೇನೆ ಅಂತ ಅವರೇ ಹೇಳಿದ್ದಾರೆ.''
"ಯಡಿಯೂರಪ್ಪನವರು ಬಿಜೆಪಿ ಹೈಕಮಾಂಡ್ಗೆ ಬದ್ಧರಿದ್ದಾರೆ. ರಾಜ್ಯಾಧ್ಯಕ್ಷರಿದ್ದಾರೆ, ಪಕ್ಷದಲ್ಲಿ ಹಿರಿಯ ನಾಯಕರು ಇದ್ದಾರೆ ಅವರು ಅದನ್ನು ತೀರ್ಮಾನ ತೆಗೆದುಕೊಳ್ತಾರೆ,'' ಎಂದರು.
"ಜುಲೈ 26ಕ್ಕೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರ್ಣಗೊಳ್ಳಲಿದೆ, ಅದರ ಹಿಂದಿನ ಒಂದು ದಿನ ಮುಚ್ಚಿತವಾಗಿ ಔತಣಕೂಟವನ್ನು ಕರೆದಿದ್ದಾರೆ. ಅಲ್ಲಿ ಕೆಲ ಶಾಸಕರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು, ಅಸಮಧಾನವನ್ನು ಪಕ್ಷದ ಚೌಕಟ್ಟಿನಲ್ಲಿ ಮಾತನಾಡುತ್ತಾರೆ. ಬಿಜೆಪಿ ಪಕ್ಷಕ್ಕೆ ವಲಸೆ ಬಂದಂತವರು ಯಡಿಯೂರಪ್ಪನವರನ್ನು ನಂಬಿಕೊಂಡು ಬಂದವರು ಇದ್ದಾರೆ.''
"ವಲಸೆ ಬಂದ ಶಾಸಕರು ತಮ್ಮ ವೈಯಕ್ತಿಕ ವಿಷಯಗಳನ್ನು ಚರ್ಚೆ ಮಾಡಿರಬಹುದು, ಅದು ನಮ್ಮ ಗಮನಕ್ಕೂ ಬಂದಿಲ್ಲ ಎಂದರು. ಔತಣಕೂಟ ಏರ್ಪಡಿಸಿರುವುದರಿಂದ ಅದಕ್ಕೆ ಬೇರೆ ಅರ್ಥವನ್ನು ಕಲ್ಪಿಸಲಾಗುತ್ತದೆ. ಕೆಲವು ನಮ್ಮ ಶಾಸಕರು ಗೊಂದಲದ ಹೇಳಿಕೆಗಳನ್ನು ಕೊಡುತ್ತಿರುವುದರಿಂದ ಈ ರೀತಿಯ ಅವಾಂತರ ಸೃಷ್ಟಿಯಾಗುತ್ತಿದ್ದು, ಸಿಎಂ ಯಡಿಯೂರಪ್ಪನವರಿಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿದೆ,'' ಎಂದು ಶಾಸಕ ರಾಜೂಗೌಡ ಹೇಳಿದರು.
"ಕಾಂಗ್ರೆಸ್ನ ಶಾಸಕ ಶಾಮನೂರು ಶಿವಶಂಕರಪ್ಪ, ಎಂ.ಬಿ ಪಾಟೀಲ್ರು ಬೆಂಬಲ ನೀಡಿದ್ದಾರೆ. ಅವರಿಗೂ ಸಹ ನಾವು ಸ್ವಾಗತ ಕೋರುತ್ತೇವೆ. ಅಖಿಲ ಭಾರತ ಮಹಾಸಭಾ ಅವರ ಬೆಂಬಲಕ್ಕೆ ನಿಂತಿದೆ. ಇನ್ನು ಎರಡು ವರ್ಷಗಳ ಕಾಲ ಸಿಎಂ ಆಗಿ ಬಿಎಸ್ವೈ ಮುಂದುವರೆಯುತ್ತಾರೆ. ಅದರಲ್ಲಿ ಯಾವುದೇ ರೀತಿಯ ಗೊಂದಲಗಳು ಬೇಡ, ಬಿಜೆಪಿ ಪಕ್ಷವನ್ನು ಕಟ್ಟಿ ಬಲಿಷ್ಠವಾಗಿ ಬೆಳೆಸಿದ್ದಾರೆ.''
ಆ ಆಡಿಯೋ ನನ್ನದಲ್ಲ ಎಂದು ಕಟೀಲ್ರವರೇ ಹೇಳುತ್ತಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರದ್ದು ಬಹಳ ಮೃದುಸ್ವಭಾವ ಮತ್ತು ಸರಳ ವ್ಯಕ್ತಿತ್ವ. ಇವತ್ತು ಟೆಕ್ನಾಲಿಜಿ ಬಹಳ ಮುಂದುವರೆದಿದ್ದು, ಅದು ಡಬ್ಬಿಂಗ್ ಆಗಿರಬಹುದು. ಯಾವುದನ್ನೂ ನಿಖರವಾಗಿ ಹೇಳುವುದಕ್ಕೆ ಆಗುವುದಿಲ್ಲ. ಹಾಗಾಗಿ ತನಿಖೆಯಿಂದ ಮಾತ್ರ ಗೊತ್ತಾಗಲಿದೆ. ಸುಭದ್ರವಾಗಿ ನಮ್ಮ ಸರ್ಕಾರ ಇನ್ನೂ ಎರಡು ವರ್ಷ ಪೂರ್ಣಗೊಳಿಸಲಿದೆ ಎಂದು ಬಿಜೆಪಿ ಶಾಸಕ ರಾಜೂಗೌಡ ಹೇಳಿದರು.
"ದೆಹಲಿಗೆ ಹೋಗುವುದು ಈಗ ಟ್ರೆಂಡ್ ಆಗಿಬಿಟ್ಟಿದ್ದು, ಶಾಸಕರು ತಮ್ಮ ವೈಯಕ್ತಿಕ ಕೆಲಸಕ್ಕೂ ಹೋಗಿದ್ದರು. ಮಾಧ್ಯಮಗಳು ಅದನ್ನೇ ದೊಡ್ಡದಾಗಿ ಬಿಂಬಿಸಿದವು. ಆದರೆ ನಮ್ಮ ಉತ್ತರ ಕರ್ನಾಟಕದಲ್ಲಿ ಏನೇ ಅಭಿವೃದ್ಧಿ ಕೆಲಸ ಮಾಡಿದರೂ ಮಾಧ್ಯಮಗಳು ತೋರಿಸುವುದಿಲ್ಲ,'' ಎಂದು ಅಸಮಧಾನ ವ್ಯಕ್ತಪಡಿಸಿದರು.
ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ, "ನಾನು ಯಾವ ಸಚಿವ ಸ್ಥಾನದ ಆಕಾಕ್ಷಿಯಲ್ಲ. ನಾನೊಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ,'' ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಮಾತನಾಡಿ, "ಸಿಎಂ ಬದಲಾವಣೆ ಅನ್ನುವುದು ಮಾಧ್ಯಮಗಳಲ್ಲಿ ಇಂದು ದೊಡ್ಡ ಸುದ್ದಿಯಾಗುತ್ತಿದೆ, ಆದರೆ ಸಿಎಂ ಯಡಿಯೂರಪ್ಪರನ್ನು ಬದಲಾವಣೆ ಮಾಡುವ ಪ್ರಶ್ನೆನೇ,'' ಇಲ್ಲ ಎಂದು ಸ್ಪಷ್ಟಪಡಿಸಿದರು.
"ಎಲ್ಲದಕ್ಕೂ ಹೈಕಮಾಂಡ್ ಇದೆ, ಬಿಜೆಪಿ ಶಿಸ್ತಿನ ಪಕ್ಷವಾಗಿದೆ. ನನ್ನ ಪ್ರಕಾರ ಹೇಳುವುದಾದರೆ ಯಾವುದೇ ರೀತಿಯಲ್ಲಿ ಬದಲಾವಣೆ ಇಲ್ಲ, ನಮ್ಮ ಪಕ್ಷದ ನಾಯಕರು ಅದನ್ನೆಲ್ಲಾ ತೀರ್ಮಾನ ಮಾಡುತ್ತಾರೆ. ಈಗಾಗಲೇ ಎರಡು ವರ್ಷ ಅವಧಿ ಪೂರೈಸಿದ್ದೇವೆ, ಇನ್ನೂ ಎರಡು ವರ್ಷ ಪೂರೈಸುವ ಜವಾಬ್ದಾರಿ ನಮ್ಮ ಮೇಲಿದೆ,'' ಎಂದರು.