ನಾವು ರಾಜಕಾರಣಿಗಳು ಎನ್ನುವುದಕ್ಕಿಂತ ಮೊದಲು ನಮ್ಮ ಮಕ್ಕಳ ಪೋಷಕರು: ಶಾಸಕ ನಾಗೇಂದ್ರ
ಬಳ್ಳಾರಿ, ಅಕ್ಟೋಬರ್ 9: ನಾವೆಲ್ಲಾ ರಾಜಕಾರಣಿಗಳು ಎನ್ನುವುದಕ್ಕಿಂತ ಮೊದಲು ನಾವು ನಮ್ಮ ಮಕ್ಕಳ ಪೋಷಕರು ಎನ್ನುವುದನ್ನು ಮರೆಯಬಾರದು, ಕೊರೊನಾ ಸೋಂಕು ಹೆಚ್ಚಾದ ಈ ಸಮಯದಲ್ಲಿ ಶಾಲೆ ಆರಂಭ ಮಾಡುವುದು ಬೇಡ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಎನ್.ನಾಗೇಂದ್ರ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ನಾನೂ ಸಹ ಒಬ್ಬ ತಂದೆಯಾಗಿ ವಿಚಾರ ಮಾಡುವೆ. ನಮ್ಮ ಮನೆಯಲ್ಲಿ ಇರುವ ಮಕ್ಕಳೇ ಮನೆಗೆ ಬಂದವರ ಜೊತೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಿಲ್ಲ. ಹೀಗಾಗಿ ಶಾಲೆ ಆರಂಭ ಮಾಡಿದರೆ ಸಾಮಾಜಿಕ ಅಂತರ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ಕೊರೊನಾದಿಂದ ಶಿಕ್ಷಕರ ಸಾವು; ಶಾಲೆ ಬೇಡವೇ ಬೇಡ ಎಂದ ಶಾಸಕ
ಅಲ್ಲದೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೂ ಮಕ್ಕಳಿದ್ದಾರೆ. ಅವರು ಸಹ ಪಾಲಕರ ಸ್ಥಾನದಲ್ಲಿ ನಿಂತು ವಿಚಾರ ಮಾಡಲಿ ಎಂದು ಸಲಹೆ ನೀಡಿದ್ದಾರೆ.
ಈ ಒಂದು ವರ್ಷ ಮಕ್ಕಳ ಶಿಕ್ಷಣ ಹಾಳಾದರೂ ಪರವಾಗಿಲ್ಲಾ, ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವುದು ಬೇಡ ಎಂದಿದ್ದಾರೆ. ಇನ್ನು ವಿದ್ಯಾಗಮ ಯೋಜನೆಯಿಂದ ರಾಜ್ಯದಲ್ಲಿ ಶಿಕ್ಷಕರ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದರು.
ಬಳ್ಳಾರಿಯಲ್ಲಿ ಶಿಕ್ಷಕರ ಸಾವು; ಶಾಲಾರಂಭದ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ?
ಹೀಗಾಗಿ ಈ ವಿದ್ಯಾಗಮ ಯೋಜನೆಯನ್ನು ಕೈ ಬಿಡುವುದು ಸೂಕ್ತ. ಇದರಿಂದ ಕೊರೊನಾ ಸೋಂಕು ಮಕ್ಕಳಿಗೆ ಹರಡುವ ಸಾಧ್ಯತೆ ಹೆಚ್ಚಿದ್ದು, ಆದ್ದರಿಂದ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.