ಶಾಸಕ ಭೀಮಾನಾಯ್ಕ್ ವಿರುದ್ಧ ಅಡವಿ ಆನಂದದೇವನಹಳ್ಳಿ ಗ್ರಾಮಸ್ಥರ ಆಕ್ರೋಶ
ಬಳ್ಳಾರಿ, ಅಕ್ಟೋಬರ್ 7: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್ ಕೆಎಂಎಫ್ ನಿರ್ದೇಶಕರಾಗಿ ಒಂದು ವರ್ಷ ಕಳೆದಿದೆ. ಅಷ್ಟರಲ್ಲೇ ಅವರ ಸದಸ್ಯತ್ವ ರದ್ದು ಮಾಡಿ ಹೊಸಪೇಟೆ ಉಪ ವಿಭಾಗ ನ್ಯಾಯಾಲಯ ಆದೇಶ ಹೊರಡಿಸಿದೆ.
ಭೀಮಾನಾಯಕ್ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಯ ಹಾಲು ಒಕ್ಕೂಟದ ಅಧ್ಯಕ್ಷರು. ಇದಕ್ಕೂ ಮೊದಲು ಭೀಮಾನಾಯಕ್ ಹಗರಿಬೊಮ್ಮನಹಳ್ಳಿ ತಾಲೂಕಿನ ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸದಸ್ಯರಾಗಿದ್ದರು. ಆ ಮೂಲಕ ಅವರು ರಾಬಾಕೊ ಅಧ್ಯಕ್ಷರಾಗಲು ಹಾಗೂ ಕೆಎಂಎಫ್ ನಿರ್ದೇಶಕನಾಗಲು ಅರ್ಹತೆ ಪಡೆದಿದ್ದರು.
ಕೆಎಂಎಫ್ ಅಧ್ಯಕ್ಷ ಚುನಾವಣೆ ಮುಂದೂಡಿಕೆ: ಎಚ್.ಡಿ.ರೇವಣ್ಣಗೆ ಶಾಕ್
ಆದರೆ ಭೀಮಾನಾಯಕ್ ಅಡವಿ ಆನಂದದೇವನಹಳ್ಳಿ ನಿವಾಸಿಯೇ ಅಲ್ಲ. ಹೀಗಾಗಿ ಹಾಲು ಒಕ್ಕೂಟದ ಸದಸ್ಯರಾಗಲು ಸಾಧ್ಯವೇ ಇಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ನಿಯಮದ ಪ್ರಕಾರ ಸಹಕಾರಿ ಹಾಲು ಒಕ್ಕೂಟದ ಸದಸ್ಯರಾಗಲು ಅದೇ ಗ್ರಾಮದ ನಿವಾಸಿಯಾಗಿದ್ದರೆ ಮಾತ್ರ ಅರ್ಹತೆ ಇರುತ್ತದೆ. ಇದೇ ವಿಚಾರಕ್ಕೆ ಅವರ ಅರ್ಹತೆ ಪ್ರಶ್ನಿಸಿ ಬಸವರಾಜ್ ಕೆ ಹಾಗೂ ನಾಗನಗೌಡ ಎನ್ನುವರು ಕೋರ್ಟ್ ಮೊರೆ ಹೋಗಿದ್ದರು. ಕೂಲಂಕಶವಾಗಿ ವಿಚಾರಣೆ ನಡೆಸಿದ ನ್ಯಾಯಾಲಯ ಭೀಮಾನಾಯಕ್ ನಕಲಿ ದಾಖಲೆ ಸೃಷ್ಟಿ ಆರೋಪವನ್ನು ಎತ್ತಿ ಹಿಡಿದಿದ್ದು, ಅವರ ಸದಸ್ಯತ್ವವನ್ನೇ ರದ್ದು ಮಾಡಿ ಆದೇಶ ಹೊರಡಿಸಿದೆ.
ಬಳ್ಳಾರಿ: ವಲಸೆ ಹಕ್ಕಿ ಭೀಮಾನಾಯ್ಕಗೆ ಟಿಕೆಟ್ ಖಾತ್ರಿ ಇಲ್ಲ
ಭೀಮಾನಾಯಕ್ ವಿರುದ್ಧ ನಕಲಿ ದಾಖಲಾತಿ ಸೃಷ್ಟಿ ಆರೋಪಕ್ಕೆ ಭೀಮಾನಾಯಕ್ 2018ರ ಚುನಾವಣೆಯಲ್ಲಿ ಸಲ್ಲಿಸಿದ್ದ ಅಫಿಡವಿಟ್ ಸಾಕ್ಷಿಯಾಗಿದ್ದು, ಅಫಿಡವಿಟ್ ನಲ್ಲಿ ಭೀಮಾನಾಯಕ್ ಹಗರಿಬೊಮ್ಮನಹಳ್ಳಿ ನಿವಾಸಿ ಎಂದು ತಮ್ಮ ಆಧಾರ್ ಕಾರ್ಡ್, ವೋಟರ್ ಐಡಿ ಲಗತ್ತಿಸಿದ್ದರು. ಆದರೆ ಅಡವಿಆನಂದದೇವನಗಹಳ್ಳಿ ಹಾಲು ಉತ್ಪಾದಕರ ಸಂಘದ ಸದಸ್ಯರಾಗುವಾಗ ನಾನು ಇದೇ ಗ್ರಾಮದಲ್ಲಿ ವಾಸವಿದ್ದೇನೆ ಎಂದು ಬಾಡಿಗೆ ಮನೆ ಕರಾರು ಹಾಗೂ ಜಮೀನು ಒಂದರ ಗುತ್ತಿಗೆ ಕರಾರು ಕೊಟ್ಟಿದ್ದರು. ಭೀಮಾನಾಯಕ್ ವಿರುದ್ಧ ಅಡವಿಆನಂದದೇವನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಗ್ರಾಮಕ್ಕೆ ಕೆಟ್ಟ ಹೆಸರು ತಂದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಭೀಮಾನಾಯಕ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.