ಕರ್ನಾಟಕದ ಆರೋಗ್ಯ ಕ್ಷೇತ್ರದಲ್ಲಿ ವೈಭವ ತರಬೇಕಿದೆ: ಡಾ.ಕೆ.ಸುಧಾಕರ್
ಉಡುಪಿ/ಬಳ್ಳಾರಿ, ಮಾರ್ಚ್ 30: ವಿಜಯನಗರ ಸಾಮ್ರಾಜ್ಯದಲ್ಲಿ ಸೃಷ್ಟಿಯಾಗಿದ್ದ ವೈಭವದಂತೆ ಆರೋಗ್ಯ ಕ್ಷೇತ್ರದಲ್ಲೂ ವೈಭವ ತರಬೇಕಿದೆ. ಇದಕ್ಕಾಗಿ ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿವಿಧ ಮೂಲಸೌಕರ್ಯವನ್ನು ಉದ್ಘಾಟನೆ ಹಾಗೂ ಕಾಮಗಾರಿ ಚಾಲನೆ ಕಾರ್ಯಕ್ರಮದಲ್ಲಿ ಉಡುಪಿಯಿಂದ ವರ್ಚುವಲ್ ಆಗಿ ಪಾಲ್ಗೊಂಡು ಸಚಿವರು ಮಾತನಾಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ. ಮೂರು ಹಂತಗಳ ಆರೋಗ್ಯ ಸೇವೆಯನ್ನು ಬಲಪಡಿಸಲಾಗುತ್ತಿದೆ. ಪಿಎಚ್ ಸಿಗಳಿಗೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ. ರೋಗಗಳ ಬಂದ ನಂತರ ಔಷಧಿ ನೀಡುವುದಕ್ಕಿಂತ ಮುಂಚಿತವಾಗಿ ರೋಗ ಬಾರದಂತೆ ಮಾಡುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ವೈದ್ಯರು ಕೆಲಸ ಮಾಡುವುದನ್ನು ಉತ್ತೇಜಿಸಲು ಕಾನೂನುಗಳಲ್ಲಿ ಬದಲಾವಣೆ ತರಲಾಗುತ್ತಿದೆ. ಹಳ್ಳಿಗಳಲ್ಲಿ ಹೆಚ್ಚು ಜನರು ವಾಸಿಸುತ್ತಿದ್ದು, ವೈದ್ಯರ ಸೇವೆ ಅಗತ್ಯ ಎಂದರು.
ರಾಜ್ಯದ ನಾಲ್ಕು ಕಡೆಗಳಲ್ಲಿ ಈಗಾಗಲೇ ವೈದ್ಯಕೀಯ ಕಾಲೇಜು ನಿರ್ಮಾಣ ಆರಂಭವಾಗಿದೆ. ದೇಶದಲ್ಲಿ 157 ಮೆಡಿಕಲ್ ಕಾಲೇಜುಗಳ ನಿರ್ಮಾಣವಾಗುತ್ತಿದೆ. ಇದು ಪೂರ್ಣವಾದರೆ ಸುಮಾರು 27 ಸಾವಿರ ವಿದ್ಯಾರ್ಥಿಗಳಿಗೆ ವ್ಯಾಸಂಗದ ಅವಕಾಶ ಸಿಗಲಿದೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ವೈದ್ಯರ ನೇರ ನೇಮಕ ನಡೆಯುತ್ತಿದೆ ಎಂದರು.
ಬಳ್ಳಾರಿಯ ವಿಮ್ಸ್ನಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗ್ರಂಥಾಲಯ, ಉಪನ್ಯಾಸ ಮತ್ತು ಪರೀಕ್ಷಾ ಹಾಲ್, 300 ಆಸನಗಳ ಸಾಮರ್ಥ್ಯದ ಉಪನ್ಯಾಸ ಥೀಯೇಟರ್ ಹಾಗೂ ಪಿಜಿ ಹಾಸ್ಟೆಲ್ನ ಭೂಮಿ ಪೂಜೆ ನೆರವೇರಿಸಿ, ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್ ಹಾಗೂ MRI ಸ್ಕಾನಿಂಗ್ ಯಂತ್ರವನ್ನು ಆನ್ಲೈನ್ ಮೂಲಕ ಲೋಕಾರ್ಪಣೆ ಮಾಡಲಾಯಿತು.
ಸಚಿವರಾದ ಆನಂದ್ ಸಿಂಗ್, ಶಾಸಕರಾದ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ, ಸಂಸದರಾದ ವೈ. ದೇವೇಂದ್ರಪ್ಪ, ಸಫಾಯಿ ಕರ್ಮಾಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹನುಮಂತಪ್ಪ, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.