ಸಚಿವ ಶಿವಳ್ಳಿ ಡಿಸ್ಚಾರ್ಜ್:ಫೋರೆನ್ಸಿಕ್ ವರದಿ ಕಾಯುತ್ತಿರುವ ವೈದ್ಯರು
ಬಳ್ಳಾರಿ, ಫೆಬ್ರವರಿ 07:ವಿಷಯುಕ್ತ ಉಪ್ಪಿಟ್ಟು ಸೇವಿಸಿ ಅಸ್ವಸ್ಥಗೊಂಡು ಇಲ್ಲಿನ ಕಿಮ್ಸ್ ಆಸ್ಪತ್ರೆಗೆ ಭಾನುವಾರ ರಾತ್ರಿ (ಫೆ.03)ದಾಖಲಾಗಿದ್ದ ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಮಂಗಳವಾರ ರಾತ್ರಿ (ಫೆ.07)ಡಿಸ್ಚಾರ್ಜ್ ಆಗಿದ್ದಾರೆ.
ಕಿಮ್ಸ್ ವೈದ್ಯರ ತಂಡ ಚಿಕಿತ್ಸೆ ನೀಡಿದ್ದು, ಮಂಗಳವಾರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಫೋರೆನ್ಸಿಕ್ ವರದಿ ಇನ್ನೂ ಬಂದಿಲ್ಲ. ಘಟನೆಯ ಕುರಿತು ಮಾತನಾಡಿರುವ ಶಿವಳ್ಳಿ ನನಗೆ ಯಾರ ಬಗ್ಗೆಯೂ ಅನುಮಾನವಿಲ್ಲ. ಆದರೆ ಫೋರೆನ್ಸಿಕ್ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಶಿವಳ್ಳಿ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ವೈದ್ಯರು ಫೋರೆನ್ಸಿಕ್ ವರದಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಭಾನುವಾರ ಸಂಜೆ ಹುಬ್ಬಳ್ಳಿ ತಾಲೂಕು ಕರಡಿಕೊಪ್ಪ ಗ್ರಾಮದಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಚಿವ ಶಿವಳ್ಳಿ ಶಂಕುಸ್ಥಾಪನೆ ನೆರವೇರಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 200 ಜನ ಉಪ್ಪಿಟ್ಟು ಸೇವಿಸಿದ್ದರು.
ಅದೇ ಆಹಾರವನ್ನೇ ಸಚಿವರು, ಅವರ ಗನ್ ಮ್ಯಾನ್ ಚನ್ನಪ್ಪ ಮುದ್ದನ್ನವರ, ಆಪ್ತ ಸಹಾಯಕ ಮುತ್ತು ಗೊರವರ ಹಾಗೂ ಕಾರ್ಯಕರ್ತ ಕಾಂತು ಸೇವಿಸಿದ್ದರು. ಸ್ವಲ್ಪ ಸಮಯದ ನಂತರ ಸಚಿವರು ಮತ್ತು ಇತರ ಮೂವರಿಗೂ ತೀವ್ರ ವಾಂತಿ, ಬಾಯಾರಿಕೆ ಹಾಗೂ ತಲೆನೋವು ಕಾಣಿಸಿಕೊಂಡಿದೆ.
ಆದರೆ, ಅದೇ ಉಪ್ಪಿಟ್ಟು ಸೇವಿಸಿದ ಇತರರಿಗೆ ಏನೂ ಆಗಿಲ್ಲ ಎಂದು ಸಚಿವರ ಜತೆಗಿದ್ದ ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ. ಆದರೆ, ನಾಲ್ವರಿಗೆ ಮಾತ್ರ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.