ಬಲವಂತದ 'ಬಳ್ಳಾರಿ ಬಂದ್' ಮಾಡಿದರೆ ಕ್ರಮ: ಸಚಿವ ಆನಂದ ಸಿಂಗ್
ಬಳ್ಳಾರಿ, ನವೆಂಬರ್ 19: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಂದ್ ಮಾಡುವುದಕ್ಕೆ ಮತ್ತು ಹೋರಾಟ ಮಾಡುವುದಕ್ಕೆ ಸ್ವಾತಂತ್ರ್ಯವಿದೆ. ಆದರೆ ಬಲವಂತದ ಬಂದ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ವಿವಿಧ ಸಂಘಟನೆಗಳು ನ.26ರಂದು ಬಳ್ಳಾರಿ ಬಂದ್ ಕರೆ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಆನಂದ್ ಸಿಂಗ್, "ಬಲವಂತದ ಮತ್ತು ಜನರಿಗೆ ತೊಂದರೆಯಾಗುವಂಥ ಹೋರಾಟ ಅಥವಾ ಬಂದ್ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಸಾಂಕೇತಿಕ ಹೋರಾಟವನ್ನು ಮಾಡಲಿ" ಎಂದು ಹೇಳಿದರು.
ವಿಜಯನಗರ ಜಿಲ್ಲೆ ರಚನೆ; ನ.26ರಂದು ಬಳ್ಳಾರಿ ಬಂದ್ಗೆ ಕರೆ
ಸಾರ್ವಜನಿಕರಿಗೆ ಆಡಳಿತಾತ್ಮಕವಾಗಿ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ದೊಡ್ಡ ದೊಡ್ಡ ಜಿಲ್ಲೆಗಳನ್ನು ವಿಭಜಿಸಲಾಗುತ್ತದೆ. ರಾಮನಗರ, ಯಾದಗಿರಿ ಜಿಲ್ಲೆಗಳನ್ನು ಮಾಡಿದಂತೆ ವಿಜಯನಗರ ಜಿಲ್ಲೆ ಮಾಡುವುದಕ್ಕೆ ಸರ್ಕಾರ ತೀರ್ಮಾನಿಸಿದೆ. ವಿಜಯನಗರ ಜಿಲ್ಲೆಯ ಕೂಗು ಇಂದು ನಿನ್ನೆಯದಲ್ಲ. ಬಹಳ ದಿನಗಳಿಂದಲೂ ಇತ್ತು. ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ ಎಂದರು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಸಮಾಧಾನವಾಗಿಯೇ ಇದ್ದಾರೆ. ಮಾಧ್ಯಮದವರೇ ಅವರನ್ನು ಪ್ರಚೋದಿಸುತ್ತಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಕುಳಿತು ಚರ್ಚಿಸಿ ಯಾವ ತಾಲೂಕುಗಳನ್ನು ಯಾವ್ಯಾವ ಜಿಲ್ಲೆಗೆ ಸೇರಿಸಬೇಕು ಅಂತ ಚರ್ಚಿಸಿ ತೀರ್ಮಾನಿಸಲಿದ್ದಾರೆ. ನೂತನ ಜಿಲ್ಲೆಯ ಮ್ಯಾಪ್ ಇನ್ನೂ ಸಿದ್ಧವಾಗಿಲ್ಲ. ಕೆಲವರು ತಮ್ಮ ಬೆಳೆ ಬೇಯಿಸಿಕೊಳ್ಳಲು ಪ್ರಚೋದಿಸುತ್ತಿದ್ದಾರೆ ಎಂದು ಟೀಕಿಸಿದರು.