ಜಿಂದಾಲ್ಗೆ 3667 ಎಕರೆ ಭೂಮಿ ಪರಭಾರೆಗೆ ವಿರೋಧಿಸಿದ ಆನಂದ್ ಸಿಂಗ್
ವಿಜಯನಗರ, ಏಪ್ರಿಲ್ 28: ಜಿಂದಾಲ್ಗೆ 3667 ಎಕರೆ ಭೂಮಿಯನ್ನು ಸಚಿವ ಸಂಪುಟದಲ್ಲಿ ಪರಭಾರೆ ಮಾಡಿರುವುದಕ್ಕೆ ನನ್ನ ವಿರೋಧವಿದೆ ಎಂದು ವಕ್ಫ್ ಮತ್ತು ಮೂಲಭೂತ ಸೌಕರ್ಯಗಳ ಸಚಿವ ಆನಂದ್ ಸಿಂಗ್ ಹೇಳಿದರು.
ಹೊಸಪೇಟೆ ನಗರದ ತಾಲ್ಲೂಕು ಕಚೇರಿಯ ಆವರಣದಲ್ಲಿ ಬುಧವಾರ ಕರೆದಿದ್ದ ಕೋವಿಡ್ ನಿಯಂತ್ರಣಕ್ಕಾಗಿ ಅಧಿಕಾರಿಗಳ ಸಭೆ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಸರ್ಕಾರಗಳಿರಲಿ, ಭೂಮಿಯನ್ನು ಕಾರ್ಖಾನೆಗಳಿಗೆ ಲೀಜ್ ಕೊಡಬೇಕು. ಸರಕಾರದ ಭೂಮಿ ಸರಕಾರಕ್ಕೆ ಬರುವ ರೀತಿಯಲ್ಲಿ ಕಾಯ್ದೆ ಮಾಡಬೇಕು, ಕಾರ್ಖಾನೆ ನಡೆಯುತ್ತಿರುವಾಗ ಏನೋ ತಾಂತ್ರಿಕ ತೊಂದರೆ ಬಂದು ಮುಚ್ಚಿದರೆ ಮತ್ತೆ ಸರಕಾರಕ್ಕೆ ಹಿಂತಿರುಗಿ ಬರುವ ರೀತಿಯಲ್ಲಿರಬೇಕು ಎಂದರು.
ನಾನು ಈ ಹಿಂದೆ ಸಮ್ಮಿಶ್ರ ಸರಕಾರದಲ್ಲಿದ್ದಾಗ ಇದೆ ಮಾತು ಹೇಳಿದ್ದೆ, ಈಗಲೂ ನಾನು ನನ್ನ ಮಾತಿಗೆ ಬದ್ಧ, ಭೂಮಿ ವಾಪಸ್ ಪಡೆಯೋ ಅಧಿಕಾರ ಇದ್ದಿದ್ದರೆ ನಾನು ವಾಪಸ್ ಪಡೆಯುತ್ತಿದೆ. ಆದರೆ ಆ ಅಧಿಕಾರ ನನಗೆ ಇಲ್ಲ ಎಂದರು.
ಇತ್ತೀಚಿಗೆ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದಾರೆ, ನನಗೂ ಸಹ ಅಜೆಂಡಾ ಕಳಿಸಿದ್ದರು, ನಾನು ಕೋವಿಡ್ ವಿಚಾರದಲ್ಲಿದ್ದೆ. ಬೇರೆ ಬೇರೆ ತಾಲೂಕುಗಳಿಗೆ ಸಂಚಾರ ಮಾಡಿದ್ದೆ. ಹಾಗಾಗಿ ನಾನು ನೋಡೋಕೆ ಆಗಿಲ್ಲ. ಭೂಮಿಗಿಂತ ಹೆಚ್ಚಾಗಿ ಜನರ ಜೀವ ಮುಖ್ಯವಾಗಿತ್ತು. ಆದ್ದರಿಂದ ನಾನು ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗಿಲ್ಲ. ಒಂದು ವೇಳೆ ನಾನು ಸಚಿವ ಸಂಪುಟಕ್ಕೆ ಭಾಗಿಯಾಗಿದ್ದರೆ ಖಂಡಿತ ವಿರೋಧ ಮಾಡುತ್ತಿದ್ದೆ. ಯಾವುದೇ ಸರ್ಕಾರ ಆ ರೀತಿ ಮಾಡಬಾರದು. ಈಗಲೂ ಸಹ ನಾನು ನನ್ನ ಮಾತಿನ ಮೇಲೆ ಬದ್ಧನಿದ್ದೇನೆ ಎಂಮದು ಸಚಿವ ಆನಂದ್ ಸಿಂಗ್ ಹೇಳಿದರು.