ಐತಿಹಾಸಿಕ ಧ್ವಜಾರೋಹಣ ನೆರವೇರಿಸಿದ ಸಚಿವ ಆನಂದ್ ಸಿಂಗ್
ಬಳ್ಳಾರಿ, ಆಗಸ್ಟ್ 15: ವಿಜಯನಗರ ಕ್ಷೇತ್ರದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ದಾಖಲೆಗಳಲ್ಲಿ ನಮೂದಿಸುವ ಧ್ವಜಾರೋಹಣ ಈ ದಿನ ನಡೆದದ್ದು ಪ್ರಜೆಗಳ ಸಹಕಾರದಿಂದ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಅವರು ಹರ್ಷ ವ್ಯಕ್ತಪಡಿಸಿದರು.
74ನೇ ಸ್ವಾತಂತ್ರೋತ್ಸವದ ಅಂಗವಾಗಿ ನಗರದ ರೋಟರಿ ವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ 150 ಅಡಿ ಎತ್ತರದ ಬೃಹತ್ ಧ್ವಜಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. "ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟಗಾರರು ತಮ್ಮ ಜೀವವನ್ನೇ ಕೊಟ್ಟರು. ಅವರನ್ನು ನೆನಪಿಸಿಕೊಂಡು, ಅವರನ್ನು ಗೌರವಿಸುತ್ತ ಮುಂದಿನ ಪೀಳಿಗೆಗೂ ಹೋರಾಟಗಾರರ ಬಲಿದಾನದ ಕುರಿತು ತಿಳಿಸಬೇಕು. ಈ ನಿಟ್ಟಿನಲ್ಲಿ ಹೋರಾಟಗಾರರ ಬಲಿದಾನದ ಸ್ಮರಣೆಯಲ್ಲಿ ಧ್ವಜಸ್ತಂಭವನ್ನು ಸ್ಥಾಪಿಸಲಾಗಿದೆ" ಎಂದರು.
ರಾಜ್ಯದೆಲ್ಲೆಡೆ 74ರ ಸ್ವಾತಂತ್ರ್ಯ ಭಾರತದ ಸಂಭ್ರಮ...
ಕ್ಷೇತ್ರದ ತಾಲೂಕು ಆಡಳಿತಾಧಿಕಾರಿ, ನಗರಸಭೆ ಪೌರಾಯುಕ್ತರು ಹಾಗೂ ಆರಕ್ಷಕ ಇಲಾಖೆಯ ಅಧಿಕಾರಿಗಳು ಹಲವು ಇಲಾಖೆಗಳ ಜತೆಗೂಡಿ ಹಗಲಿರುಳು ಕೋವಿಡ್19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ವಹಿಸಿದ ಶ್ರಮ ಅಭಿನಂದನಾರ್ಹವಾದದು ಎಂದರು. ನಗರದ ಮುನ್ಸಿಪಲ್ ಮೈದಾನದಲ್ಲಿ ಮುಂದಿನ ಸ್ವಾತಂತ್ಯೋತ್ಸವದ ಹೊತ್ತಿಗೆ ಅತಿದೊಡ್ಡ ಧ್ವಜಸ್ತಂಭ ನಿರ್ಮಿಸುವ ಇಚ್ಚೆಯಿದ್ದು ದೇಶದಲ್ಲಿರುವ ಅತಿದೊಡ್ಡ ಧ್ವಜಸ್ತಂಭಕ್ಕಿಂತಲೂ ಎತ್ತರದ ಸ್ತಂಭವನ್ನು ನಿರ್ಮಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷರಾದ ಅಶೋಕ್ ಜೀರೆ, ತಹಶೀಲ್ದಾರ್ ಎಚ್.ವಿಶ್ವನಾಥ್, ಡಿವೈಎಸ್ಪಿ ವಿ.ರಘುಕುಮಾರ್ ಸೇರಿದಂತೆ ಹಲವು ಮುಖಂಡರು, ಸಾರ್ವಜನಿಕರು ಇದ್ದರು.