ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಂದೆ ನಿಧನ
ವಿಜಯನಗರ, ಜುಲೈ.18: ಬಳ್ಳಾರಿ ಜಿಲ್ಲಾ ಉಸ್ತುವಾರಿ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ರವರ ತಂದೆ ಪೃಥ್ವಿರಾಜ್ ಸಿಂಗ್ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ರಾಣಿಪೇಟೆಯ ತಮ್ಮ ನಿವಾಸದಲ್ಲಿ ಸಚಿವ ಆನಂದ್ ಸಿಂಗ್ ರವರ ತಂದೆ ಪೃಥ್ವಿರಾಜ್ ಸಿಂಗ್ (84) 12:30 ರ ಸುಮಾರಿಗೆ ನಿಧನರಾಗಿದ್ದಾರೆ.
ಇವರು ಕಳೆದ ಕೆಲ ತಿಂಗಳುಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಹೊಸಪೇಟೆ ರಾಣಿಪೇಟೆಯ ಮನೆಗೆ ಕರೆ ತರಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಮೃತರಿಗೆ ಇಬ್ಬರು ಪತ್ನಿಯರಿದ್ದು, ಮೊದಲನೇ ಪತ್ನಿ ಮೃತಪಟ್ಟಿದ್ದಾರೆ. ಮೊದಲನೇ ಪತ್ನಿಗೆ ಇಬ್ಬರು ಗಂಡು, ಒಬ್ಬ ಪುತ್ರಿ ಇದ್ದಾರೆ. ಎರಡನೇ ಪತ್ನಿಯ ಮಗ ಆನಂದ ಸಿಂಗ್ ಹಾಲಿ ಸಚಿವರಾಗಿದ್ದಾರೆ.
ಪೃಥ್ವಿರಾಜ್ ಸಿಂಗ್ ಅವರ ಕಣ್ಣುಗಳನ್ನು ಆಸ್ಪತ್ರೆಗೆ ದಾನ ಮಾಡಲು ನಿರ್ಧರಿಸಲಾಗಿದೆ. ರಾಣಿಪೇಟೆಯಲ್ಲಿ ಇಂದು ಸಂಜೆ 5 ಗಂಟೆಗೆ ಅವರ ತಮ್ಮ ಗೃಹದ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.