ಬಳ್ಳಾರಿ, ಕೋಲಾರ, ಶಿವಮೊಗ್ಗ, ದಾವಣಗೆರೆ ಕೊರೊನಾ ವೈರಸ್ ಅಪ್ ಡೇಟ್
ಬಳ್ಳಾರಿ, ಮೇ 29: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಇಂದು ಮತ್ತೆ ಒಂಬತ್ತು ಕೊರೊನಾ ವೈರಸ್ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಮಹಾರಾಷ್ಟ್ರ, ತಮಿಳುನಾಡು ಹಾಗೂ ರಾಜಸ್ಥಾನದಿಂದ ಒಂಬತ್ತು ಮಂದಿಯಲ್ಲಿ ಮಹಾಮಾರಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಕಳೆದ ವಾರ ಜಿಲ್ಲೆಯ ಹಡಗಲಿ ತಾಲೂಕಿನ ತಂಬ್ರಹಳ್ಳಿ, ಬಳ್ಳಾರಿ ತಾಲೂಕಿನ ಸೋಮಸಮುದ್ರ ಹಾಗೂ ನೆರೆಯ ಆಂಧ್ರ ಪ್ರದೇಶ ರಾಜ್ಯದ ಗುಂತಕಲ್ಲು ಮೂಲದಿಂದ ಗಣಿ ಜಿಲ್ಲೆಗೆ ಇವರು ಆಗಮಿಸಿದ್ದರು. ಉದ್ಯೋಗ ಅರಸಿ ಆ ರಾಜ್ಯಗಳಿಗೆ ತೆರಳಿದ್ದ ಇವರನ್ನು ಜಿಲ್ಲೆಯ ಕುರುಗೋಡು ತಾಲೂಕಿನ ಮುಷ್ಠಗಟ್ಟೆ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ನಿನ್ನೆಯ ದಿನ ಗಂಟಲು ದ್ರವ ಪರೀಕ್ಷೆ ವರದಿ ಬಂದಿದ್ದು, ಇವರಲ್ಲಿ ಕೊರೊನಾ ಸೋಂಕು ಇರುವುದಾಗಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.
ಬ್ರೇಕಿಂಗ್: ಕರ್ನಾಟಕದಲ್ಲಿ ಒಂದೇ ದಿನ 248 ಮಂದಿಗೆ ಕೊರೊನಾ ವೈರಸ್!
ಶಿವಮೊಗ್ಗದಲ್ಲಿ ಒಂದು ಕೊರೊನಾ ವೈರಸ್ ಸೋಂಕು ಪ್ರಕರಣ: ಕಳೆದ ಎರಡು ದಿನಗಳಿಂದ ಶಿವಮೊಗ್ಗದಲ್ಲಿ ಯಾವುದೇ ಹೊಸ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬಂದಿರಲಿಲ್ಲ. ಆದರೆ ಹೊರರಾಜ್ಯದಿಂದ ಬಂದು ಕ್ವಾರೈಂಟೈನ್ ನಲ್ಲಿದ್ದ ಮಹಿಳೆಯಲ್ಲಿ ಇಂದು ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ದೆಹಲಿಯಿಂದ ಬಂದಿದ್ದ 35 ವರ್ಷದ ಮಹಿಳೆಗೆ ಸೋಂಕು ಇರುವುದು ಧೃಡಪಟ್ಟಿದೆ. ಸೋಂಕಿತರಿಗೆ ಕೋವಿಡ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಶಿವಮೊಗ್ಗದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 35ಕ್ಕೆ ಏರಿದೆ.
ಕೋಲಾರದಲ್ಲಿ ಐವರು ಗುಣಮುಖ: ಕೋಲಾರ ಜಿಲ್ಲೆಯಲ್ಲಿ ಇಂದು ಐದು ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಮುಳಬಾಗಲು ತಾಲೂಕಿನ 5 ಜನ ಸೋಂಕಿತರನ್ನು ಸರ್ಕಾರಿ ಕೋವಿಡ್ ಆಸ್ಪತ್ರೆಯಿಂದ ಇಂದು ಬಿಡುಗಡೆ ಮಾಡಲಾಯಿತು. ಮೇ.12 ರಂದು ಇವರು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಬಿಡುಗಡೆಯಾದ ರೋಗಿಗಳಿಗೆ ಜಿಲ್ಲಾಡಳಿತ ಹೂ ಮಳೆ ಸುರಿಸಿ ಬೀಳ್ಕೊಡುಗೆ ನೀಡಿತು. ಸದ್ಯ ಕೋಲಾರದಲ್ಲಿ ಒಟ್ಟು 14 ಕೊರೊನಾ ಪಾಸಿಟಿವ್ ಪ್ರಕರಣಗಳಿವೆ.
ದಾವಣಗೆರೆಯಲ್ಲಿ ನಾಲ್ವರಿಗೆ ಕೊರೊನಾ: ದಾವಣಗೆರೆಯಲ್ಲಿಂದು ನಾಲ್ವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಮೂರು ಮಂದಿ ವೃದ್ಧ ಮಹಿಳೆಯರು ಹಾಗೂ ಒಬ್ಬ ಬಾಲಕನಿಗೆ ಸೋಂಕು ತಗುಲಿದೆ. ದಾವಣಗೆರೆ ಜಿಲ್ಲೆಯಲ್ಲಿ ಸದ್ಯ 63 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೂ 79 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.