ಬಳ್ಳಾರಿ: 300 ಕ್ಕೂ ಹೆಚ್ಚು ಮಾವು ತಳಿಗಳ ಪ್ರದರ್ಶನ, ಮಾರಾಟ ಮೇಳ
ಬಳ್ಳಾರಿ,ಮೇ 26: ತೋಟಗಾರಿಕೆ ಇಲಾಖೆಯಿಂದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕಿಸಾನ್ ಭಾಗಿದಾರಿ ಪ್ರಾಥಮಿಕ ಹಮಾರಿ ಕ್ಯಾಂಪೈನ್ ಆಶಯದಂತೆ ತೋಟಗಾರಿಕೆ ಇಲಾಖೆ ಹಾಗೂ ಹಾಪ್ ಕಾಮ್ಸ್ ಸಹಯೋಗದಲ್ಲಿ ಮೇ 30ರಿಂದ ಜೂನ್1ವರೆಗೆ ತಾಲೂಕು ಕಚೇರಿ ಆವರಣದಲ್ಲಿ ಮಾವು ಮೇಳ-2022 ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರಾದ ಎಸ್.ಪಿ ಭೋಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ರೈತರು ಬೆಳೆದಿರುವ ಮಾವು ಬೆಳೆಯನ್ನು ಗ್ರಾಹಕರಿಗೆ ನೇರ ಮಾರಾಟ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಮಾವಿನ ಮೇಳದಲ್ಲಿ ಮಾವಿನ ಹಣ್ಣಿನ ಉತ್ಕೃಷ್ಟ ತಳಿಗಳಾದ ಆಲ್ಫಾನ್ಸೋ, ಮಲ್ಲಿಕಾ, ಮಲಗೋವ, ರಸಪುರಿ, ದಶೆಹರಿ, ಬೆನೆಶನ್ ಸೇರಿದಂತೆ ವಿವಿಧ ಬಗೆಯ ಮಾವಿನ ಹಣ್ಣಿನ ತಳಿಗಳನ್ನು ಜಿಲ್ಲೆಯ ಹಣ್ಣಿನ ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ತಳಿಗಳನ್ನು ಪರಿಚಯಿಸಿ ಮತ್ತು ತಲುಪಿಸಲು ಹಾಗೂ ಮಾವಿನ ಹಣ್ಣಿನ ಸ್ವಾದದ ಸವಿಯನ್ನು ಸವಿಯಲು ಅನುವಾಗಲು ಉದ್ದೇಶಿಸಲಾಗಿದೆ ಎಂದು ಭೋಗಿ ತಿಳಿಸಿದ್ದಾರೆ.
ಈ ಮೇಳದಲ್ಲಿ ದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ಹಾಗೂ ಕರ್ನಾಟಕ ರಾಜ್ಯಾದ್ಯಂತ ಪ್ರಚಲಿತದಲ್ಲಿರುವ ಸುಮಾರು 300 ಕ್ಕೂ ಹೆಚ್ಚು ತಳಿಗಳ ಪ್ರದರ್ಶನ, ರೈತರ ಹಿತದೃಷ್ಟಿಯಿಂದ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ.
ಆದ್ದರಿಂದ ಸದರಿ ಮಾವಿನ ಮೇಳದಲ್ಲಿ ರೈತರು, ಹಣ್ಣಿನ ಗ್ರಾಹಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ತೋಟಗಾರಿಕೆ ಇಲಾಖೆ ಕಚೇರಿ ಹಾಗೂ ದೂ.08392-278179ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
75ನೇ ಅಜಾದಿ ಕಾ ಅಮೃತ್ ಮಹೋತ್ಸವ
ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೊಸಪೇಟೆ ನಗರಸಭೆ ಸಹಯೋಗದಲ್ಲಿ 75 ನೇ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನವನ್ನು ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆಯ ಮುನ್ಸಿಪಲ್ ಮೈದಾನದಲ್ಲಿ ಮೇ 28ರಂದು ಸಂಜೆ 5.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ್ ಕೆ. ರಂಗಣ್ಣನವರ ಅವರು ತಿಳಿಸಿದ್ದಾರೆ.
ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವರು ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ಉದ್ಘಾಟನೆ ಮಾಡಲಿದ್ದಾರೆ. ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ಸಿಂಗ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದರಾದ ವೈ.ದೇವೆಂದ್ರಪ್ಪ, ಜಿ.ಎಂ.ಸಿದ್ದೇಶ್ವರ, ಸೈಯದ್ ನಾಸಿರ್ ಹುಸೇನ್, ಶಾಸಕರಾದ ಪಿ.ಟಿ.ಪರಮೇಶ್ವರ ನಾಯ್ಕ, ಎನ್.ವೈ ಗೋಪಾಲಕೃಷ್ಣ, ಭೀಮನಾಯ್ಕ ಎಲ್.ಬಿ.ಪಿ, ಅಲ್ಲಂ ವೀರಭದ್ರಪ್ಪ, ಜಿ.ಕರುಣಾಕರರೆಡ್ಡಿ, ಎಸ್.ವಿ.ರಾಮಚಂದ್ರ, ಡಾ.ಚಂದ್ರಶೇಖರ್ ಬಿ.ಪಾಟೀಲ, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ನಗರಸಭೆಯ ಅಧ್ಯಕ್ಷರಾದ ಸುಂಕಮ್ಮ, ಹುಡಾ ಅಧ್ಯಕ್ಷರಾದ ಅಶೋಕ್ ಜೀರೆ ಸೇರಿದಂತೆ ಇನ್ನಿತತರು ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರಾದ ಮಂಜುಳಾ ಅವರು ಹಾಗೂ ನಿವೃತ್ತ ಪ್ರಾಧ್ಯಪಕರಾದ ಎನ್. ಬಸವರಾಜ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಭವ್ಯ ಮೆರವಣಿಗೆ: ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದ ನಿಮಿತ್ತ ಇದಕ್ಕೂ ಮುಂಚೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೇತೃತ್ವದಲ್ಲಿ ವಿವಿಧ ಜಾನಪದ ಕಲಾತಂಡಗಳಿಂದ ಭವ್ಯ ಮೆರವಣಿಗೆ ನಡೆಯಲಿದೆ.
ಮೆರವಣಿಗೆಯು ಮಧ್ಯಾಹ್ನ 3ಕ್ಕೆ ವಡಕರಾಯನ ದೇವಸ್ಥಾನದಿಂದ ಆರಂಭವಾಗಿ ಮುಖ್ಯ ಮಾರುಕಟ್ಟೆ, ಗಾಂಧಿ ವೃತ್ತ, ಮುಖ್ಯ ಬಸ್ ನಿಲ್ದಾಣ, ಶ್ಯಾನಭಾಗ್ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಮುನ್ಸಿಪಲ್ ಮೈದಾನದವರೆಗೆ ನಡೆಯಲಿದೆ. ವೇದಿಕೆ ಕಾರ್ಯಕ್ರಮದ ನಂತರ ಸ್ಥಳೀಯ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.