ತುಂಗಾಭದ್ರಾ ಜಲಾಶಯ ವೀಕ್ಷಿಸಿದ ಉಪ ರಾಷ್ಟ್ರಪತಿಗಳು
ವಿಜಯನಗರ, ಆಗಸ್ಟ್ 20; ಕರ್ನಾಟಕದ ಪ್ರವಾಸದಲ್ಲಿರುವ ಭಾರತದ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ತುಂಗಾಭದ್ರಾ ಜಲಾಶಯವನ್ನು ಶುಕ್ರವಾರ ಸಂಜೆ ವೀಕ್ಷಿಸಿದರು. ಎರಡು ದಿನಗಳ ಕಾಲ ಅವರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಶನಿವಾರ ಹಂಪಿಗೆ ಭೇಟಿ ಕೊಡಲಿದ್ದಾರೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಎಂ. ವೆಂಕಯ್ಯ ನಾಯ್ಡು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಹೊಸಪೇಟೆ ಮುನ್ಸಿಪಲ್ ಮೈದಾನಕ್ಕೆ ಆಗಮಿಸಿದರು. ಅಲ್ಲಿಂದ ರಸ್ತೆ ಮಾರ್ಗವಾಗಿ ಜಲಾಶಯಕ್ಕೆ ಆಗಮಿಸಿದರು. ವೆಂಕಯ್ಯ ನಾಯ್ಡು ಪತ್ನಿ ಎಂ. ಉಷಾ, ಕುಟುಂಬಸ್ಥರು ಜಲಾಶಯ, ಜಲಾಶಯದಲ್ಲಿ ಸಂಗ್ರಹವಾದ ಅಪಾರ ಪ್ರಮಾಣದ ಜಲರಾಶಿ, ಜಲಾಶಯದ ಸುತ್ತಲಿನ ಹಸಿರನ್ನು ಕಣ್ತುಂಬಿಕೊಂಡರು.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ವೈಯಕ್ತಿಕ ಟ್ವಿಟ್ಟರ್ ಖಾತೆಗೆ ಮತ್ತೆ ಬಂತು ಬ್ಲ್ಯೂ ಟಿಕ್ ಮಾರ್ಕ್
ಜಲಾಶಯ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ವೆಂಕಯ್ಯ ನಾಯ್ಡು, "ಕಲ್ಯಾಣ ಕರ್ನಾಟಕ, ರಾಯಲಸೀಮಾ, ತೆಲಂಗಾಣದ ಪ್ರದೇಶಗಳ ಜೀವನಾಡಿಯಾಗಿರುವ ತುಂಗಾಭದ್ರಾ ಜಲಾಶಯ ತುಂಬಿರುವುದನ್ನು ನೋಡಿ ಸಂತಸಗೊಂಡಿರುವೆ" ಎಂದು ಹೇಳಿದರು. ಜಲಾಶಯದ ಮುಂದುಗಡೆಯ ಉದ್ಯಾನಕ್ಕೂ ಜೀವಕಳೆ ಬಂದಿದ್ದು, ಹಸಿರಿನಿಂದ ಮದುಮಗಳಂತೆ ಕಂಗೊಳಿಸುತ್ತಿರುವ ಉದ್ಯಾನವನವನ್ನು ವೀಕ್ಷಣೆ ಮಾಡಿದರು.
ತಿಪ್ಪಗೊಂಡನಹಳ್ಳಿ ಡ್ಯಾಂ ನೀರು ಬೆಂಗಳೂರಿಗೆ ಬರುವುದು ಮತ್ತಷ್ಟು ವಿಳಂಬ
ಸುಮಾರು ಅರ್ಧಗಂಟೆ ಸಮಯವನ್ನು ಜಲಾಶಯದ ಪರಿಸರದಲ್ಲಿ ಕಳೆದ ಉಪರಾಷ್ಟ್ರಪತಿಗಳು, ಕ್ರಸ್ಟ್ ಗೇಟ್ಗಳ ಮೂಲಕ ನೀರು ಹರಿದು ಹೋಗುತ್ತಿರುವುದನ್ನು ವೀಕ್ಷಿಸಿದರು ಮತ್ತು ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಮೂಲಕ ನೀರು ಹರಿದು ಹೋಗುತ್ತಿರುವುದನ್ನು ವೀಕ್ಷಿಸಿದರು.
ವಿಡಿಯೋ; ತುಂಗಭದ್ರಾ ಡ್ಯಾಂನಿಂದ ನದಿಗೆ ನೀರು ಬಿಡುಗಡೆ
ಅಧಿಕಾರಿಗಳಿಂದ ವಿವರಣೆ
ತುಂಗಾಭದ್ರಾ ಜಲಾಶಯ ಮಂಡಳಿಯ ಅಧಿಕಾರಿಗಳು ಹಾಗೂ ತುಂಗಾಭದ್ರಾ ಜಲಾಶಯದ ವಾರ್ಷಿಕ ವರದಿಯನ್ನು ಉಪರಾಷ್ಟ್ರಪತಿಗಳಿಗೆ ಅಧಿಕಾರಿಗಳು ಸಲ್ಲಿಸಿದರು ಮತ್ತು ತುಂಗಾಭದ್ರಾ ಜಲಾಶಯ ನೀರಿನ ಸಂಗ್ರಹದ ಪ್ರಮಾಣ, ಎಷ್ಟು ಹೆಕ್ಟೇರ್ ಪ್ರಮಾಣದ ಕೃಷಿ ಭೂಮಿಗೆ ನೀರುಣಿಸಲಾಗುತ್ತಿದೆ ಎಂಬುದು ಸೇರಿದಂತೆ ಜಲಾಶಯಕ್ಕೆ ಸಂಬಂಧಿಸಿದ ವಿವಿಧ ಪ್ರಮುಖ ವಿಷಯಗಳನ್ನು ಅಧಿಕಾರಿಗಳು ವಿವರಿಸಿದರು. ನಂತರ ತುಂಗಾಭದ್ರಾ ಮಂಡಳಿಯಿಂದ ಉಪರಾಷ್ಟ್ರಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಣ್ಣ-ಸಣ್ಣ ಅಣೆಕಟ್ಟು ನಿರ್ಮಾಣ
"ನದಿ ನೀರಿನ ಮೂಲಗಳಿರುವ ಕಡೆ ಎಲ್ಲೆಲ್ಲಿ ಯಾವುದೇ ರೀತಿಯ ಸಮಸ್ಯೆಗಳು, ವ್ಯಾಜ್ಯಗಳು ಇಲ್ಲವೋ ಮತ್ತು ನಿರ್ಮಾಣಕ್ಕೆ ಸಾಧ್ಯವಿದೆಯೋ ಅಂತ ಕಡೆಗಳಲ್ಲೆಲ್ಲಾ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ನೀರು ಸಂಗ್ರಹಿಸುವ ಮತ್ತು ಕೃಷಿ ಹಾಗೂ ಇನ್ನಿತರ ಕಾರ್ಯಗಳಿಗೆ ಬಳಸುವ ಕೆಲಸವಾಗಬೇಕು" ಎಂದು ಎಂ. ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.
ಎಲ್ಲಾ ರಾಜ್ಯಗಳು ಕೈ ಜೋಡಿಸಬೇಕು
"ನದಿಗಳ ಜೋಡಣಾ ಯೋಜನೆ ಜಾರಿಯಾದರೇ ಎಲ್ಲ ರಾಜ್ಯಗಳು ಅಭಿವೃದ್ಧಿಯಾಗಲಿವೆ. ಇದಕ್ಕೆ ಎಲ್ಲ ರಾಜ್ಯಗಳು ಕೈಜೋಡಿಸಬೇಕಿದೆ. ಈ ಯೋಜನೆ ಜಾರಿಯಾದರೆ ಗೋದಾವರಿ, ಮಹಾನದಿ, ಕೃಷ್ಣ, ಕಾವೇರಿ, ತುಂಗಾಭದ್ರಾ ಸೇರಿದಂತೆ ಇನ್ನಿತರ ನದಿಗಳ ನೀರು ವ್ಯರ್ಥವಾಗಿ ಸಮುದ್ರ ಸೇರುವುದಕ್ಕೆ ತಡೆ ಬಿಳಲಿದೆ" ಎಂದು ವೆಂಕಯ್ಯ ನಾಯ್ಡು ಹೇಳಿದರು.
ನಾನೂ ಕೂಡ ರೈತನ ಮಗ
"ನಾನು ಕೂಡ ರೈತನ ಮಗ, ಕೃಷಿ ಕೆಲಸಗಳನ್ನು ಮಾಡುತ್ತಲೇ ದೆಹಲಿಯಲ್ಲಿರುವ ಸಂವಿಧಾನದ ಉನ್ನತ ಹುದ್ದೆಗೇರಿರುವೆ. ಆದರೂ ಮನಸ್ಸು ಕೃಷಿ, ಕೃಷಿಕರ ಕಲ್ಯಾಣದ ಬಗ್ಗೆ ಚಿಂತಿಸುತ್ತಿರುತ್ತದೆ" ಎಂದು ಉಪ ರಾಷ್ಟ್ರಪತಿಗಳು ಹೇಳಿದರು.
"ನೀರಿನ ಮಿತಬಳಕೆ, ಮರುಬಳಕೆ ನಮ್ಮ ಮಂತ್ರವಾಗಬೇಕು. ನೀರಿನ ಸಂರಕ್ಷಣೆ, ನೀರಿನ ಸಂಗ್ರಹಣೆ, ವೈಯಕ್ತಿಕವಾಗಿ ಮಳೆ ನೀರು ಕೊಯ್ಲು ಕಾರ್ಯಗಳಿಗೆ ಜನರು ಕೈ ಜೋಡಿಸಬೇಕು" ಎಂದು ವೆಂಕಯ್ಯ ನಾಯ್ಡು ಕರೆ ನೀಡಿದರು.