ಹೂವಿನಹಡಗಲಿಯಲ್ಲಿ ಮರಕ್ಕೆ ನೇಣು ಹಾಕಿಕೊಂಡು ಪ್ರೇಮಿಗಳ ಆತ್ಮಹತ್ಯೆ
ಬಳ್ಳಾರಿ, ಫೆಬ್ರವರಿ 27: ಮನೆಯವರು ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಪ್ರೇಮಿಗಳು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ನಡೆದಿದೆ.
ಮೃತ ಪ್ರೇಮಿಗಳನ್ನು ನಿಂಗಮ್ಮ (26) ಹಾಗೂ ಗುರುರಾಜ್ (30) ಎಂದು ಗುರುತಿಸಲಾಗಿದೆ. ನಿಂಗಮ್ಮ ಹಗರಿಬೊಮ್ಮನಹಳ್ಳಿ ತಾಲೂಕಿನ ಸೊನ್ನ ಗ್ರಾಮದವರು. ಗುರುರಾಜ್ ಹೂವಿನಹಡಗಲಿ ತಾಲೂಕಿನ ಚಿಲುಗೋಡ್ ಗ್ರಾಮದವರು. ಇಬ್ಬರೂ ಕಾಲೇಜಿನಲ್ಲಿ ಓದುವಾಗ ಇಬ್ಬರಿಗೂ ಪರಿಚಯವಾಗಿ, ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಜಾತಿ ಬೇರೆ ಬೇರೆಯಾದ ಕಾರಣ ಮನೆಯವರು ಇವರ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ.
ಹೀಗಾಗಿ ನಿನ್ನೆ ಇಬ್ಬರೂ ಮನೆಯಿಂದ ಓಡಿ ಹೋಗಿದ್ದರು. ಆದರೆ ಮನೆಯಿಂದ ಓಡಿ ಹೋದ ಈ ಜೋಡಿ ಗ್ರಾಮದ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದೆ. ಬೆಳಗ್ಗಿನ ಜಾವ ಕುರಿಗಾರರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದ ಹೂವಿನಹಡಗಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.