ಬಳ್ಳಾರಿಯಲ್ಲಿ ಬಿಜೆಪಿ ಗೆಲುವಿನ ಸಿಕ್ಸರ್ ಬಾರಿಸಲಿದೆ: ದೇವೇಂದ್ರಪ್ಪ
ಬಳ್ಳಾರಿ ಏಪ್ರಿಲ್ 7: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಸಿಕ್ಸರ್ ಬಾರಿಸಲಿದೆ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ವೈ ದೇವೇಂದ್ರಪ್ಪ ವಿಶ್ವಾಸವ್ಯಕ್ತಪಡಿಸಿದರು.
ಬಳ್ಳಾರಿ ನಗರದ ಬಿಡಿಎ ಮೈದಾನ, ಮೆಡಿಕಲ್ ಕಾಲೇಜು ಮೈದಾನ ಹಾಗೂ ಸ್ಟೇಡಿಯಂ ಮೈದಾನದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು. ಅಲ್ಲದೆ, ಅಲ್ಲಿಪುರ ಮಠ, ಕಲ್ಯಾಣಸ್ವಾಮಿ ಮಠ, ಬಾಲಾಂಜನೇಯ ಸ್ವಾಮಿ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ವಕೀಲರ ಸಂಘದವರನ್ನೂ ಭೇಟಿ ಮಾಡಿ ಮಾತನಾಡಿದರು.
ಬಳ್ಳಾರಿಯಲ್ಲಿ ವಿಶೇಷ : ಬಿಜೆಪಿ ಅಭ್ಯರ್ಥಿ ಪರ ಕಾಂಗ್ರೆಸ್ ಸದಸ್ಯೆ ಪಾದಯಾತ್ರೆ
ನಂತರ ಮಾತನಾಡಿದ ಅವರು, ರಾಜ್ಯದಷ್ಟೇ ಅಲ್ಲ ದೇಶದ ಮೂಲೆ ಮೂಲೆಗಳಲ್ಲೂ ಮೋದಿ ಹವಾ ಇದೆ. ಯಾವುದೇ ಪ್ರದೇಶದಲ್ಲಿ ಪ್ರಚಾರ ನಡೆಸಿದರೂ ಕೂಡಾ ಪ್ರಧಾನಿ ಮೋದಿ ಅವರ ಆಡಳಿತದ ಬಗ್ಗೆ ಒಳ್ಳೆಯ ಭಾವನೆ ಇದೆ. ಈ ಭಾವನೆ ಹಾಗೂ ಸರಳ ಹಾಗೂ ಜನರ ನಾಡಿಮಿಡಿತ ಅರಿತಿರುವ ನನಗೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಮತದಾರ ಹೆಚ್ಚಿನ ಅಂತರದಿಂದ ಗೆಲುವು ನೀಡಲಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಸಿಕ್ಸರ್ ಬಾರಿಸಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ 24 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವು: ಶ್ರೀರಾಮುಲು
ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿ. ಇವರಿಗೆ ಇರುವ ಅನುಭವ ಬಹಳ ದೊಡ್ಡದು. ಈ ಅನುಭವ ಹಾಗೂ ಮೋದಿ ಅವರ ಆಡಳಿತದ ವೈಖರಿ ನಮ್ಮ ಕೈ ಹಿಡಿಯಲಿದೆ. ಮುಂಬರುವ ದಿನಗಳಲ್ಲಿ ಕ್ಷೇತ್ರದಾದ್ಯಂತ ಇನ್ನೂ ಬಿರುಸಾದ ಪ್ರಚಾರ ಕೈಗೊಳ್ಳಲಿದ್ದೇವೆ. ಪ್ರತಿಯೊಬ್ಬ ಮತದಾರರನ್ನೂ ತಲುಪಲಿದ್ದು ನರೇಂದ್ರ ಮೋದಿ ಅವರ ಆದರ್ಶಗಳನ್ನು ತಲುಪಿಸಲಿದ್ದೇವೆ ಎಂದರು. ಪ್ರಚಾರದ ವೇಳೆಯಲ್ಲಿ ಶಾಸಕ ಸೋಮಶೇಖರ ರೆಡ್ಡಿ ಹಾಗೂ ವೈ ದೇವೇಂದ್ರಪ್ಪ ಕ್ರಿಕೆಟ್ ಆಡಿದ್ದು ಎಲ್ಲರ ಗಮನ ಸೆಳೆಯಿತು.