ಬಳ್ಳಾರಿಯಲ್ಲಿ ಮಾಜಿ ಸಚಿವರ ಮಗನ ಮದುವೆಯಲ್ಲಿ ಜನಜಂಗುಳಿ; ನಿಯಮ ಉಲ್ಲಂಘನೆ ಆರೋಪ
ಬಳ್ಳಾರಿ, ಜೂನ್ 15: ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಆದರೆ ಈ ಸಮಯದಲ್ಲಿ ಮಾಜಿ ಸಚಿವ, ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ ಅವರ ಮಗನ ಮದುವೆಯಲ್ಲಿ ಜನ ಜಾತ್ರೆಯೇ ಸೇರಿದ್ದು, ಮದುವೆಯಲ್ಲಿ ಲಾಕ್ ಡೌನ್ ನಿಯಮಗಳು ಉಲ್ಲಂಘನೆಯಾಗಿವೆ ಎಂಬ ಆರೋಪ ಕೇಳಿಬಂದಿದೆ.
Recommended Video
ಪರಮೇಶ್ವರ್ ನಾಯ್ಕ ಅವರ ಮಗ ಅವಿನಾಶ್ ಅವರ ಮದುವೆಯು ಬಳ್ಳಾರಿ ಜಿಲ್ಲೆ ಲಕ್ಷ್ಮೀಪುರದಲ್ಲಿ ಇಂದು ನಡೆಯುತ್ತಿದ್ದು, ಮದುವೆಗೆ ಗಣ್ಯರ ದಂಡೇ ಆಗಮಿಸಿದೆ. ಮದುವೆ ವೇದಿಕೆಯು ಜನರಿಂದ ತುಂಬಿದೆ. ಮದುವೆಗೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಜಿ ಪರಮೇಶ್ವರ್ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದು, ಹೆಲಿಕಾಪ್ಟರ್ ನೋಡಲು ಜನ ಮುಗಿಬಿದ್ದ ದೃಶ್ಯವೂ ಕಂಡುಬಂದಿದೆ.
ಮದುವೆ ಆಮಂತ್ರಣ ಪತ್ರಿಕೆ ಕೊಡ್ತಿವಿ ಆದ್ರೆ ಮದುವೆಗೆ ಬರಬೇಡಿ
ಸಾಮಾಜಿಕ ಅಂತರವಿಲ್ಲದೇ ಜಾತ್ರೆಯಂತೆ ಜನ ಮದುವೆಗೆ ಸೇರಿದ್ದರು. ಸಾಮಾಜಿಕ ಅಂತರವಿಲ್ಲದೇ ಕಾಂಗ್ರೆಸ್ ಮುಖಂಡರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಈ ಕುರಿತು ಸ್ಪಷ್ಟೀಕರಣ ನೀಡಿರುವ ಪಿ.ಟಿ. ಪರಮೇಶ್ವರ್ ನಾಯ್ಕ್, "ನನ್ನ ಮಗನ ಮದುವೆಗೆ ಕಡಿಮೆ ಜನ ಬನ್ನಿ ಎಂದು ಮನವಿ ಮಾಡಿದ್ದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದೆ. ಆದರೆ ನನ್ನ ಮೇಲಿನ ಪ್ರೀತಿಯಿಂದ ಜನರು ಜಾಸ್ತಿ ಬಂದಿದ್ದಾರೆ. ಜನರು ಬರುವುದನ್ನು ತಡೆಯಲು ಸಾಧ್ಯವಾಗುತ್ತಾ?" ಎಂದಿದ್ದಾರೆ.
ಎಲ್ಲರಿಗೂ ಮಾಸ್ಕ್, ಸ್ಯಾನಿಟೈಜರ್, ಥರ್ಮಲ್ ಸ್ಕಾನಿಂಗ್ ಮಾಡಲು ಹೇಳಿದ್ದೆ. ಆದರೆ ಜನ ಹೆಚ್ಚಾದ ಹಿನ್ನೆಲೆ ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಮಾಹಿತಿ ಇಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನನಗೂ ಪೊಲೀಸರು ನೋಟೀಸ್ ನೀಡಿದ್ದಾರೆ. ನಾನು ಯಾರ ಮೇಲೆ ಏನನ್ನೂ ಹೇಳುವುದಿಲ್ಲ. ಯಾರ ಮೇಲೂ ಆರೋಪ ಮಾಡುವುದಿಲ್ಲ ಎಂದಷ್ಟೆ ತಿಳಿಸಿದ್ದಾರೆ.