ಸಚಿವ ಶ್ರೀರಾಮುಲು ಸೋದರಳಿಯ ಸುರೇಶ್ ಬಾಬು ವಿರುದ್ಧ ಅಕ್ರಮ ಆಸ್ತಿ ಕೇಸ್
ಬೆಂಗಳೂರು, ಸೆ. 28: ಬಳ್ಳಾರಿ ಗಾಲಿ ರೆಡ್ಡಿ ಸೋದರರ ಆತ್ಮೀಯ, ಸಚಿವ ಶ್ರೀರಾಮುಲು ಸೋದರಳಿಯ ಟಿ.ಎಚ್ ಸುರೇಶ್ ಬಾಬುಗೆ ಮತ್ತೊಮ್ಮೆ ಅಕ್ರಮ ಆಸ್ತಿ ಪ್ರಕರಣ ಕಾಡತೊಡಗಿದೆ. ಸುರೇಶ್ ಬಾಬು ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಗೆ ಕೆಪಿಸಿಸಿ ಪರವಾಗಿ ಕಾಂಗ್ರೆಸ್ ವಕ್ತಾರ ಸೂರ್ಯ ಮುಕುಂದರಾಜ್ ದೂರು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ವಿಧಾನಸಭೆಯಲ್ಲಿ ತೋಳೇರಿಸಿ, ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಲು ಕಾರಣವಾಗಿದ್ದ ಕಂಪ್ಲಿಯ ಮಾಜಿ ಶಾಸಕ ಸುರೇಶ್ ಬಾಬು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ನಾಮಪತ್ರದಲ್ಲಿ ತಾವು ಗಳಿಸಿದ ಆದಾಯಕ್ಕೆ ಸರಿಯಾದ ಮೂಲ ತೋರಿಸಿಲ್ಲ.
2008ರಲ್ಲಿ ಕೇವಲ 4000 ಚದರ ಅಡಿ ನಿವೇಶನ ಹಾಗೂ ಒಂದು ಮೋಟಾರ್ ಬೈಕ್ ಮಾಲೀಕ ಶಾಸಕನಾದ ಐದು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ, 6 ಲಕ್ಷದ ಬೈಕ್ ಒಡೆಯನಾಗಿದ್ದು ಹೇಗೆ? 84 ಲಕ್ಷಕ್ಕೆ ಆದಾಯದ ಮೂಲ ತೋರಿಸಿಲ್ಲ ಎಂದು ಸ್ವತಃ ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ನಾಮಪತ್ರದಲ್ಲೇ ಹೇಳಿಕೊಂಡಿರುವಾಗ ಜಾರಿ ನಿರ್ದೇಶನಾಲಯವು ಯಾಕೆ ಪ್ರಕರಣ ದಾಖಲು ಮಾಡಿಲ್ಲ? ಎಂದು ಮುಕುಂದರಾಜ್ ಪ್ರಶ್ನಿಸಿದ್ದಾರೆ.
2013ರಲ್ಲೂ ದೂರು ದಾಖಲು: ಸುರೇಶ್ ಬಾಬು ಅವರ ಆಸ್ತಿ 2008ರಲ್ಲಿ 1.65 ಕೋಟಿ ರೂಪಾಯಿ ಇತ್ತು. ಆದರೆ 2013ರಲ್ಲಿ 6.5 ಕೋಟಿ ರೂಪಾಯಿಗೆ ಏರಿದೆ ಎಂದು ಆರೋಪಿಸಿ 2013ರ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಗುಜ್ಜಲ್ ನಾಗರಾಜ್ ಅವರು ಅಂದಿನ ಲೋಕಾಯುಕ್ತ ಎಡಿಜಿಪಿ ಸತ್ಯನಾರಾಯಣ ರಾವ್ ಅವರಿಗೆ ದೂರು ನೀಡಿದ್ದರು.
ಯಾರೀತ ಕಂಪ್ಲಿ ಸುರೇಶ್
ಗಾಲಿ ಜನಾರ್ದನ ರೆಡ್ಡಿ ಅವರ ರಿಪಬ್ಲಿಕ್ ಆಫ್ ಬಳ್ಳಾರಿಯ ಮುಖ್ಯ ಸೇನಾನಿಗಳಲ್ಲಿ ಕಂಪ್ಲಿ ಶಾಸಕ ಟಿಎಚ್ ಸುರೇಶ್ ಬಾಬು ಕೂಡಾ ಒಬ್ಬರು. ವಸೂಲಿ ದಂಧೆಯಿಂದ ಹಿಡಿದು, ಬಂದ ಹಣವನ್ನು ಯಾವ ರೀತಿ, ಎಲ್ಲಿಗೆ, ಹೇಗೆ ಸಾಗಿಸಬೇಕು ಎಂಬ ಲೆಕ್ಕಾಚಾರವನ್ನು ನಿರ್ವಹಿಸುತ್ತಿದ್ದ ರೆಡ್ಡಿ ಆಪ್ತ ಅಲಿಖಾನ್ ಗೆ ಸುರೇಶ್ ಬಾಬು ಸಾಥ್ ಇದ್ದೇ ಇರುತ್ತಿತ್ತು. ಈ ಕಿಲಾಡಿ ಜೋಡಿ, ರೆಡ್ಡಿ ದಂಧೆಯ ಸಕಲ ನಿರ್ವಹಣೆ ಹೊಣೆ ಹೊತ್ತಿದ್ದರು.
ರೆಡ್ಡಿಗಳ ವಿದೇಶಿ ಕಂಪನಿಗಳಿಗೆ ಅಕ್ರಮ ಅದಿರು ಸಾಗಾಟದಿಂದ ಹಿಡಿದು ವಿದೇಶಿ ಹಣ ಬದಲಾವಣೆ ಅಕ್ರಮದ ಬಗ್ಗೆ ಕೂಡಾ ತನಿಖೆ ನಡೆಸಿರಲಿಲ್ಲ. ಈ ಬಗ್ಗೆ ಜಾರಿ ನಿರ್ದೇಶನಾಲಯ ಇನ್ನೂ ಆಸಕ್ತಿ ವಹಿಸಲಿಲ್ಲ. ಸಿಬಿಐ ಮಾತ್ರ ಪ್ರಕರಣ ಮುಂದುವರೆಸಿ ಗಾಲಿ ರೆಡ್ಡಿ ಹಾಗೂ ಅಲಿಯನ್ನು ಜೈಲಿಗೆ ತಳ್ಳಿದ್ದರು. ಸದ್ಯ ಗಾಲಿ ರೆಡ್ಡಿ ಸೇರಿದಂತೆ ಹಲವರು ಷರತ್ತುಬದ್ಧ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ರೆಡ್ಡಿ ಹೆಲಿಕಾಪ್ಟರ್ ಸಾಗಾಟ ನಿರ್ವಹಣೆ
ಆರಂಭದಲ್ಲಿ ಗಾಲಿ ರೆಡ್ಡಿ ಪ್ರವಾಸದ ವೇಳೆ ಅಗತ್ಯವಿರುವ ವಾಹನ, ವಸತಿ, ಹೆಲಿಕಾಪ್ಟರ್ ವ್ಯವಸ್ಥೆ ಮಾಡುವ ಕೆಲಸ ಅಲಿ ನೋಡಿಕೊಳ್ಳುತ್ತಿದ್ದ. ನಂತರ ರೆಡ್ಡಿಯ ಅಂತರಂಗ ಬಹಿರಂಗ ಅರಿತು ಬಲಗೈ ಬಂಟನಾದ. ಆಪ್ತ ಸ್ನೇಹಿತ ಸುರೇಶ್ ಕೂಡಾ ಜೊತೆ ಸೇರಿಕೊಂಡ ಬೇಲೇಕೇರಿ ಸೇರಿದಂತೆ ಪ್ರಮುಖ ಬಂದರುಗಳಿಗೆ ಅಕ್ರಮವಾಗಿ ಕಬ್ಬಿಣದ ಅದಿರುವ ಸಾಗಾಟದ ನಿರ್ವಹಣೆಯನ್ನು ಇಬ್ಬರೂ ನೋಡಿಕೊಳ್ಳತೊಡಗಿದರು. ಬಳ್ಳಾರಿಯಿಂದ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಗೆ ಬಂದು ಉಪ್ಪಿಟ್ಟು ಚಹಾ ಕುಡಿದು ಹೋಗುತ್ತಿದ್ದ ಈ ಜೋಡಿ ಬಗ್ಗೆ ಸಿಬಿಐ ವರದಿಯಲ್ಲೂ ಉಲ್ಲೇಖವಿದೆ
ಆದರೆ, ಕಂಪ್ಲಿ ಸುರೇಶ್ ಎಂದರೆ ಬಳ್ಳಾರಿ ಜನಕ್ಕೆ ಅವರ ಮದುವೆ ವೈಭವ ನೆನಪಾಗುತ್ತದೆ. 2009ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಕಾಲ, ಆಗಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೂ ಕೂಡಾ ಶಾಸಕ ಸುರೇಶ್ ಮದುವೆಗೆ ಬಂದಿದ್ದರು. ಯಡಿಯೂರಪ್ಪ ಹಾಗೂ ಸಂಗಡಿಗರನ್ನು ಜಕ್ಕೂರು ವಿಮಾನ ನಿಲ್ದಾಣದಿಂದ ಪಿಕ್ ಮಾಡಿಕೊಂಡು ಬಳ್ಳಾರಿಗೆ ನಾಲ್ಕು ಹೆಲಿಕಾಪ್ಟರ್ ಮೂಲಕ ಕರೆದೊಯ್ಯಲಾಯಿತು.
ಮದುವೆ ವೈಭವದ ಬಗ್ಗೆ ಪ್ರತ್ಯೇಕ ತನಿಖೆ ಆಗಿಲ್ಲ
ವಿಐಪಿಗಳನ್ನು ನಾಲ್ಕು ಚಾಪರ್ ಗಳು ಹೊತೊಯ್ದವು. ಸುಮಾರು 200ಕ್ಕೂ ಅಧಿಕ ಅಡುಗೆ ಭಟ್ಟರು ನೆರೆದಿದ್ದ 10,000ಕ್ಕೂ ಅಧಿಕ ಮಂದಿಗೆ ಭೋಜನದ ವ್ಯವಸ್ಥೆ ಮಾಡಿದ್ದರು. ಭರ್ಜರಿ ಬಜೆಟ್ ನ ತೆಲುಗು ಸಿನಿಮಾದ ಸೆಟ್ ವೊಂದರಲ್ಲಿ ನಡೆದ್ದಂತಿದೆ ಎಂದು ಕರ್ನಾಟಕದ ಸಚಿವರು ಅಂದು ಉದ್ಗರಿಸಿದ್ದರು. ಕಡು ಬಿಸಿಲಿನ ಬಳ್ಳಾರಿಯಲ್ಲಿ ಹೊರಗಡೆ 38 ರಿಂದ 40 ಡಿಗ್ರಿ ತಾಪಮಾನ ಇದ್ದರೂ ಮದುವೆ ಹಾಲ್ ನಲ್ಲಿ ಎಲ್ಲವೂ ಕೂಲ್ ಕೂಲ್ ಆಗಿತ್ತು. 10 ಸಾವಿರ ಮಂದಿ ಅಂದು ಎಸಿ ಸುಖ ಅನುಭವಿಸಿದ್ದರು. ಮದುವೆ ವೆಚ್ಚ ಸುಮಾರು 20ಕೋಟಿ ರು ಮೀರಿತ್ತು ಎಂದು ವರದಿಯಾಗಿತ್ತು.
ಬೇಲ್ ಗಾಗಿ ಡೀಲ್ ಪ್ರಕರಣದಲ್ಲಿ ಸಾಕ್ಷಿ
'ಡೀಲ್ ಮಾಡುವ ಮುನ್ನ ನಾನು ಆಗ ಹೈದರಾಬಾದ್ನಲ್ಲಿರುವ ಚಂಚಲಗುಡ ಜೈಲಿನಲ್ಲಿದ್ದ ಜನಾರ್ದನ ರೆಡ್ಡಿ ಅವರನ್ನೂ ಭೇಟಿ ಮಾಡಿದ್ದೆ. ನನ್ನ ಸೋದರಮಾವ ಬಿ. ಶ್ರೀರಾಮುಲು ಅವರ ಜತೆಗೂ ಚರ್ಚಿಸಿದ್ದೆ. ಡೀಲ್ನಲ್ಲಿ ಇನ್ನೊಬ್ಬ ಮಧ್ಯವರ್ತಿಯಾಗಿದ್ದ ರೆಡ್ಡಿ ಆಪ್ತ ರಿಯಲ್ ಎಸ್ಟೇಟ್ ಉದ್ಯಮಿ ದಶರಥರಾಮಿ ರೆಡ್ಡಿ ಅವರೂ ನನಗೆ ಪರಿಚಿತರಾಗಿದ್ದರು. ರೌಡಿ ಯಾದಗಿರಿ ರಾವ್ ಮೂಲಕ ಪಟ್ಟಾಭಿ ಪುತ್ರನ ಸಂಪರ್ಕ ಸಾಧಿಸಿ ಈ ಕಾರ್ಯ ನಡೆಸಲಾಯಿತು' ಎಂದು ಸುರೇಶ್ ಬಾಬು ತಿಳಿಸಿದ್ದಾರೆ.
ಕಂಪ್ಲಿ ಬಾಬು ಕೊಟ್ಟಿರುವ ಲಂಚದ ಸ್ಫೋಟಕ ವಿವರ: ಒಟ್ಟು ಜಾಮೀನು ಲಂಚ 20 ಕೋಟಿ ರೂ. ಜಡ್ಜ್ ಪಟ್ಟಾಭಿ, ಚಲಪತಿಗೆ ತಲಾ 5 ಕೋಟಿ ಮಧ್ಯವರ್ತಿ ರೌಡಿಶೀಟರ್ ಯಾದಗಿರಿರಾವ್ಗೆ 5 ಕೋಟಿ ಆಂಧ್ರ ಹೈಕೋರ್ಟ್ನಲ್ಲಿ ಜಾಮೀನು ವ್ಯವಹಾರಕ್ಕಾಗಿ 5 ಕೋಟಿ ಕಂಪ್ಲಿ ಬಾಬು ವಿರುದ್ಧ ದಾಖಲಾಗಿರುವ ಪ್ರಕರಣಗಳು: ಐಪಿಸಿ ಸೆಕ್ಷನ್ 120ಬಿ, 34, 109 ಮತ್ತು 219 ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 8, 9 ಮತ್ತು 13(2) ಅಡಿ 13 (1) (ಡಿ)
ಕಾಂಗ್ರೆಸ್ ಸೇರುವ ಸಾಧ್ಯತೆ ಇತ್ತು
2018ರ ವಿಧಾನಸಭೆ ಚುನಾವಣೆ ವೇಳೆ ಕರ್ನಾಟಕ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಟಿ.ಎಚ್. ಸುರೇಶಬಾಬು ಅವರನ್ನು ಪಕ್ಷಕ್ಕೆ ಸ್ವಾಗತಿಸುವ ಉತ್ಸಾಹದಲ್ಲಿತ್ತು. ಬಿ. ನಾಗೇಂದ್ರ, ಬಿ.ಎಸ್. ಆನಂದಸಿಂಗ್ ಅವರನ್ನು ಬಿ. ಶ್ರೀರಾಮುಲು - ಜಿ. ಜನಾರ್ದನರೆಡ್ಡಿ ಅವರ ಬಿಗಿ ಹಿಡಿತದಿಂದ ಬಿಡಿಸಿಕೊಂಡು, ಕಾಂಗ್ರೆಸ್ಸಿಗೆ ಸೇರಿಸಿಕೊಂಡ ಬಳಿಕ ಪಕ್ಷದ ಹೈಕಮಾಂಡ್, ಟಿ.ಎಚ್. ಸುರೇಶಬಾಬು ಅವರನ್ನು ಪಕ್ಷಕ್ಕೆ ಸೆಳೆದುಕೊಂಡಲ್ಲಿ ಬಿಜೆಪಿಗೆ ಜಿಲ್ಲೆಯಲ್ಲಿ ತೀವ್ರ ಆಘಾತ ನೀಡಲಿದೆ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಸುರೇಶ್ ಕಾಂಗ್ರೆಸ್ ಸೇರ್ಪಡೆ ರದ್ದಾಯಿತು. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಜೆಎನ್ ಗಣೇಶ್ ಅವರು ಜಯಭೇರಿ ಬಾರಿಸಿ ಹಾಲಿ ಶಾಸಕರಾಗಿದ್ದಾರೆ.