ಬಳ್ಳಾರಿ-ಆಂಧ್ರ ಗಡಿ ಜಿಲ್ಲೆಯ ಮದ್ಯ ಪ್ರಿಯರಿಗೆ ಶಾಕ್
ಬಳ್ಳಾರಿ, ಮೇ 13: ಬಳ್ಳಾರಿ ಮತ್ತು ಆಂಧ್ರಪ್ರದೇಶ ಗಡಿ ಭಾಗದ ಮದ್ಯದಂಗಡಿಗಳನ್ನು ಬಂದ್ ಮಾಡುವ ಮೂಲಕ ಮದ್ಯಪ್ರಿಯರಿಗೆ ಬಳ್ಳಾರಿ ಜಿಲ್ಲಾಡಳಿತವು ಶಾಕ್ ನೀಡಿದೆ.
ಆಂಧ್ರಪ್ರದೇಶದ ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳಲ್ಲಿ ಹೆಚ್ಚು ಕೊರೊನಾ ವೈರಸ್ ಪ್ರಕರಣ ಹಿನ್ನೆಲೆಯಲ್ಲಿ ಗಡಿ ಭಾಗದ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ.
ಬಳ್ಳಾರಿ ಜಿಲ್ಲೆಯ ಗಡಿಭಾಗದ ಮದ್ಯದಂಗಡಿಗಳು ಬಂದ್- ಆನಂದ್ ಸಿಂಗ್
ಆಂಧ್ರಪ್ರದೇಶದಲ್ಲಿ ಮದ್ಯದ ಮೇಲೆ ಹೆಚ್ಚು ತೆರಿಗೆ ಇರುವ ಕಾರಣದಿಂದಾಗಿ, ಕರ್ನೂಲ್ ಹಾಗೂ ಅನಂತಪುರ ಜಿಲ್ಲೆಯಿಂದ ಮದ್ಯವ್ಯಸನಿಗಳು ಅಡ್ಡದಾರಿ ಹಿಡಿದು ಕರ್ನಾಟಕ ಗಡಿ ಪ್ರವೇಶ ಮಾಡುತ್ತಿದ್ದರು.
ಈ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮತ್ತು ಶಾಸಕ ನಾಗೇಂದ್ರ ಇಬ್ಬರ ನಡುವೆ ಜಟಾಪಟಿ ಕೂಡ ನಡೆದಿತ್ತು. ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಗಡಿಯಂಚಿನ 5 ಕಿ.ಮೀ ವ್ಯಾಪ್ತಿಯ ಎಲ್ಲ ಮದ್ಯದಂಡಿಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ.
ಆಂಧ್ರಪ್ರದೇಶ ಮತ್ತು ಕರ್ನಾಟಕ ಗಡಿಭಾಗದ ಗ್ರಾಮಗಳಿಗೆ ಬಿಗಿ ಭದ್ರತೆ ಕೊರತೆ ಹಿನ್ನೆಲೆಯಲ್ಲಿ ಜನರು ನುಸುಳಿ ಬರುತ್ತಿದ್ದಾರೆ. ಚೆಕ್ ಪೋಸ್ಟ್ ಗಳು ಕೇವಲ ರಸ್ತೆಗಳಲ್ಲಿ ಮಾತ್ರ ಇವೆ. ಉಳಿದ ಅಡ್ಡರಸ್ತೆಗಳಿಂದ ಪೊಲೀಸರ ಕಣ್ತಪ್ಪಿಸಿ ಬೇಕಾಬಿಟ್ಟಿಯಾಗಿ ಜನರು ತಿರುಗಾಡುತ್ತಿದ್ದಾರೆ.
ಆಂಧ್ರದ ಕರ್ನೂಲ್ ಜಿಲ್ಲೆಯ ಮೆದಹಾಳ್ ಗ್ರಾಮದಿಂದ ಬಳ್ಳಾರಿ ಜಿಲ್ಲೆ ಬೊಮ್ಮನಾಳ ಗ್ರಾಮಕ್ಕೆ ಜನರು ಓಡಾಡುತ್ತಿದ್ದಾರೆ. ಈಗಾಗಲೇ ಕರ್ನೂಲ್ ಜಿಲ್ಲೆ ಕೆಂಪು ವಲಯವೆಮದು ಗುರುತಿಸಲಾಗಿದೆ. ಕರ್ನೂಲ್ ಜಿಲ್ಲೆಯಲ್ಲಿ 575 ಕೇಸ್ ದಾಖಲಾಗಿದ್ದು, 295 ಪ್ರಕರಣ ಜೀವಂತವಾಗಿವೆ. 16 ಜನ ಸಾವನ್ನಪ್ಪಿದ್ದಾರೆ.