ಹೊಸಪೇಟೆ ಕೋರ್ಟ್ ಆವರಣದಲ್ಲೇ ವಕೀಲ ಬರ್ಬರ ಹತ್ಯೆ !
ಹೊಸಪೇಟೆ ಫೆಬ್ರವರಿ, 27: ಹೊಸಪೇಟೆಯ ಜೆಎಂಎಫ್ ಸಿ ನ್ಯಾಯಾಲಯದ ಆವರಣದಲ್ಲಿ ವಕೀಲರೊಬ್ಬರಿಗೆ ಆತನ ಸಂಬಂಧಿಯೇ ಲಾಂಗ್ ನಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿರುವ ಘಟನೆ ಶನಿವಾರ ನಡೆದಿದೆ. ಆರೋಪಿ ಮನೋಜ್ ನನ್ನು ಪೊಲೀಸರು ಬಂಧಿಸಿದ್ದು, ಕೌಟುಂಬಿಕ ಹಾಗೂ ವೈಯಕ್ತಿಕ ದ್ವೇಷದಿಂದ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಹೊಸಪೇಟೆ ಕೋರ್ಟ್ ಆವರಣದಲ್ಲಿ ವಕೀಲರಾದ ತಾರಿಹಳ್ಳಿ ವೆಂಕಟೇಶ್ (48) ಕೊಲೆಯಾದ ವ್ಯಕ್ತಿ. ಇಪ್ಪತ್ತು ವರ್ಷ ವಯಸ್ಸಿನ ಮನೋಜ್ ತಾರಿಹಳ್ಳಿ ವೆಂಕಟೇಶ್ ಇದ್ದ ಜಾಗಕ್ಕೆ ಬಂದು ಲಾಂಗು ಬೀಸಿ ಕೊಲೆ ಮಾಡಿದ್ದಾನೆ. ಘಟನೆ ನೋಡಿ ವಕೀಲರು ದಿಕ್ಕು ಪಾಲಾಗಿ ಓಡಿ ಹೋಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದ ತಾರಿಹಳ್ಳಿ ವೆಂಕಟೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಕೊಲೆ ಮಾಡಿದ ಆರೋಪಿ ಯುವಕ ಮನೋಜ್ ನನ್ನು ಕೂಡಲೇ ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ನಡೆಸಿದಾಗ, ತಾರಿಹಳ್ಳಿ ವೆಂಕಟೇಶ್ ಸಂಬಂಧಿಯಾಗಿದ್ದು, ನಾಲ್ಕು ಕಡೆ ಕೆಲಸ ಮಾಡುತ್ತಿದ್ದೆ. ನಾಲ್ಕೂ ಕಡೆ ದುಡಿದು ತಿನ್ನುವ ಬದುಕನ್ನು ಕಸಿದುಕೊಂಡಿದ್ದಕ್ಕೆ ಹತ್ಯೆ ಮಾಡಿರುವದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಭೂ ವಿವಾದದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಸಂಗತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.