ತುಂಗಭದ್ರಾ ಡ್ಯಾಂಗೆ ಕೈಗಾರಿಕಾ ಭದ್ರತಾ ಪಡೆ ರಕ್ಷಣೆ
ವಿಜಯನಗರ, ಜುಲೈ 07; ಹೊಸಪೇಟೆಯಲ್ಲಿರುವ ತುಂಗಭದ್ರಾ ಅಣೆಕಟ್ಟು ಭದ್ರತೆಗಾಗಿ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಕೈಗಾರಿಕೆ ಭದ್ರತಾ ಪಡೆಯನ್ನು ನಿಯೋಜಿಸಿದೆ. ಕೈಗಾರಿಕಾ ಭದ್ರತಾ ಪಡೆಯ 32 ಜನ ಪೊಲೀಸ್ ಸಿಬ್ಬಂದಿಗಳು ಕಾವಲು ಕಾಯಲಿದ್ದಾರೆ.
ತುಂಗಭದ್ರಾ ಜಲಾಶಯ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಜೀವನಾಡಿ. ಉತ್ತರ ಕರ್ನಾಟಕಕ್ಕೆ ಅಂಟಿಕೊಂಡಿರುವ ಈ ಮೂರು ಜಿಲ್ಲೆಗಲ ಜನರು ತುಂಗಭದ್ರಾ ನದಿಯ ನೀರನ್ನು ಅವಲಂಬಿಸಿದ್ದಾರೆ.
ತುಂಗಭದ್ರಾ ಜಲಾಶಯ ಕೂಗಳತೆಯ ದೂರದಲ್ಲಿದ್ದರೂ ಕುಡಿಯೋ ನೀರಿಗೆ ಬರ ತಪ್ಪಿಲ್ಲ
1633 ಅಡಿ ಎತ್ತರವಿರುವ ಜಲಾಶಯದಲ್ಲಿ 133 ಟಿಎಂಸಿ ಅಡಿ ನೀರನ್ನು ಸಂಗ್ರಹ ಮಾಡಬಹುದಾಗಿದೆ. 33 ಕ್ರೆಸ್ಟ್ ಗೇಟ್ಗಳನ್ನು ಜಲಾಶಯ ಹೊಂದಿದ್ದು, ಗೇಟ್ಗಳನ್ನು ತೆರೆದರೆ ಆಂಧ್ರ ಪ್ರದೇಶದ ಕರ್ನೂಲ್, ಮೆಹಬೂಬ್ ನಗರ ಮುಂತಾದ ಜಿಲ್ಲೆಗಳಿಗೂ ನೀರು ಹೋಗುತ್ತದೆ.
ಬಳ್ಳಾರಿ; ಏಕಾಏಕಿ ಕುಸಿದ ತುಂಗಭದ್ರಾ ನದಿ ಸೇತುವೆ ರಸ್ತೆ
ರಾಜ್ಯದ ಪ್ರಮುಖ ಜಲಾಶಯವಾಗಿರುವ ತುಂಗಭದ್ರಾ ರೈತರಿಗೆ ಮತ್ತು ಜನತೆಯ ಜೀವನಾಡಿಯಾಗಿದೆ. ಅಣೆಕಟ್ಟುಗಳ ಭದ್ರತೆಗೆ ಸರ್ಕಾರ ಹೆಚ್ಚಿನ ಗಮನಹರಿಸಿದ್ದು, ಇದಕ್ಕಾಗಿ ಕರ್ನಾಟಕ ರಾಜ್ಯ ಕೈಗಾರಿಕೆ ಭದ್ರತಾ ಪಡೆಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ: ಹಂಪಿಯ ಹಲವು ಸ್ಮಾರಕಗಳು ಮುಳುಗಡೆ
ಎಲ್ಲೆಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ ಭದ್ರತಾ ಪಡೆ?
ಪ್ರಸ್ತುತ ತುಂಗಭದ್ರಾ ಜಲಾಶಯದ ಮುಖ್ಯದ್ವಾರ, ಮೇಲ್ಭಾಗದಲ್ಲಿನ ಅಣೆಕಟ್ಟೆಯ ಗೇಟ್, ಪವರ್ ಹೌಸ್ ಬಳಿ ಕೆಎಸ್ಐಎಸ್ಎಫ್ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೊದಲು ಈ ಸ್ಥಳದಲ್ಲಿ ಡಿಆರ್ ಪೊಲೀಸರು ರಕ್ಷಣೆಗೆ ನಿಯೋಜನೆಗೊಂಡಿದ್ದರು.
ಅಣೆಕಟ್ಟೆಯ ಎಡದಂಡೆ, ಬಲದಂಡೆ ಸೇರಿದಂತೆ ಅಗತ್ಯವಿರುವ ಕಡೆಗಳಲ್ಲಿ ಡಿಆರ್, ಸಿವಿಲ್, ಖಾಸಗಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಆದರೆ, ತುಂಗಭದ್ರಾ ಅಣೆಕಟ್ಟು ಮಂಡಳಿ ಮನವಿ ಹಿನ್ನಲೆಯಲ್ಲಿ ಮೊದಲನೆ ಹಂತದಲ್ಲಿ 23 ಭದ್ರತಾ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಎರಡನೇ ಹಂತದಲ್ಲಿ 20 ಸಿಬ್ಬಂದಿಗಳು ಬರಲಿದ್ದಾರೆ.
128 ಸಿಬ್ಬಂದಿಯ ಅವಶ್ಯಕತೆ
ತುಂಗಭದ್ರಾ ಜಲಾಶಯದ ಎಲ್ಲ ಹಂತದಲ್ಲಿನ ಭದ್ರತೆಗೆ ಕೆಎಸ್ಐಎಸ್ಎಫ್ನ 128 ಸಿಬ್ಬಂದಿಯ ಅವಶ್ಯಕತೆ ಇದೆ. ಇದರಲ್ಲಿ ಇಬ್ಬರು ಪಿಎಸ್ಐಗಳಿರಲಿದ್ದಾರೆ. ಎಡದಂಡೆ ಕಾಲುವೆ, ಪವರ್ ಹೌಸ್ ಹತ್ತಿರ ಕೊಪ್ಪಳ ಡಿಆರ್, ಸಿವಿಲ್ ಪೊಲೀಸ್ ಹಾಗೂ ಖಾಸಗಿ ಭದ್ರತಾ ಸಂಸ್ಥೆಗಳ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಬದಲಿಗೆ ಒಟ್ಟಾರೆ ಕೆಎಸ್ಐಎಸ್ಎಫ್ ಪೊಲೀಸ್ ಸಿಬ್ಬಂದಿ ನಿಯೋಜಿಸುವುದಾದರೆ 128 ಕ್ಕೂ ಹೆಚ್ಚು ಸಿಬ್ಬಂದಿ ಅವಶ್ಯಕತೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭದ್ರತಾ ಸಿಬ್ಬಂದಿಗೆ ಬಂದೂಕು
ಬಲದಂಡೆ ಕಾಲುವೆಯ ಕೊನೇ ಹಂತದ ತನಕ ಸಿಬ್ಬಂದಿ ವಾಹನದ ಮೂಲಕ ಗಸ್ತು ತಿರಗಲಿದ್ದಾರೆ. ಈ ಮೊದಲು ಇದ್ದ ಸಿವಿಲ್ ಪೊಲೀಸರು ಲಾಠಿ ಹಿಡಿದು ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಸಿಬ್ಬಂದಿಗೆ ಬಂದೂಕು ನೀಡಲಾಗಿದೆ. ಇದರಿಂದ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆಗಳು ನಡೆಯಯುವುದನ್ನೂ ತಪ್ಪಿಸಬಹುದಾಗಿದೆ.
ಸಿವಿಲ್, ಡಿಆರ್ ಪೊಲೀಸರಿಗೆ ತರಬೇತಿ ನೀಡಲಾಗಿತ್ತು. ಆದರೆ ಈ ಕೆಎಸ್ಐಎಸ್ಎಫ್ ಪೊಲೀಸರಿಗೆ ಹೆಚ್ಚಿನ ತರಬೇತಿ ನೀಡಲಾಗಿರುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಅನುಮತಿ ಪಡೆದರೆ ಮಾತ್ರ ಅವಕಾಶ
ಅಣೆಕಟ್ಟೆ ಪ್ರವೇಶ ದ್ವಾರದ ಬಳಿ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ. ಪ್ರವೇಶ ದ್ವಾರದಿಂದ ಅಣೆಕಟ್ಟೆ ಬಳಿ ತೆರಳಲು ಈ ಮೊದಲು ಟಿಬಿ ಬೋರ್ಡ್ ಅನುಮತಿ ಪಡೆದ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಕೆಎಸ್ಐಎಸ್ಎಫ್ ಭದ್ರತೆ ನಿಯೋಜಿಸಿದ್ದರಿಂದ ಭದ್ರತೆಯ ಕಾರ್ಯವೈಖರಿ ಬದಲಾಗಿದೆ. ಯಾವುದೇ ಖಾಸಗಿ ವಾಹನಗಳ ಪ್ರವೇಶಕ್ಕೆ ಪೊಲೀಸ್ ಪಡೆಯ ಮುಖ್ಯಸ್ಥರ ಅನುಮತಿ ಕಡ್ಡಾಯವಾಗಿದೆ.
ರಾಜ್ಯದ ಜಲಾಶಯಗಳ ಭದ್ರತೆ ದೃಷ್ಟಿಯಿಂದ ಬೆಂಗಳೂರು, ಶಿವಮೊಗ್ಗ ಹಾಗೂ ಧಾರವಾಡದಲ್ಲಿ ಕೆಎಸ್ಐಎಸ್ಎಫ್ ತುಕಡಿ ಇವೆ. ಈಗಾಗಲೇ ಕೆಆರ್ಎಸ್, ಕಬಿನಿ, ವಿಜಯಪುರದ ಆಲಮಟ್ಟಿ, ಹಾರಂಗಿ ಜಲಾಶಯಕ್ಕೆ ಕೆಎಸ್ಐಎಸ್ಎಫ್ ಭದ್ರತೆ ನೀಡಲಾಗಿದೆ.
ಹೆಚ್ಚಿನ ಭದ್ರತೆ ಸಿಕ್ಕಿದಂತಾಗಿದೆ
"ಕೆಎಸ್ಐಎಸ್ಎಫ್ ಪಡೆಯಿಂದ ಹೆಚ್ಚಿನ ಭದ್ರತೆ ದೊರೆತಂತಾಗಿದೆ. ಒಟ್ಟಾರೆ ಭದ್ರತೆ ಜವಾಬ್ದಾರಿ ಈ ಪಡೆಯದ್ದಾಗಿರುತ್ತದೆ. ಯಾವುದೇ ಜನಪ್ರತಿನಿಧಿಗಳಾಗಲಿ, ಇನ್ನೊಬ್ಬರ ಕಡೆಯಿಂದ ಕರೆ ಮಾಡಿಸಿ ವಾಹನಗಳ ಪ್ರವೇಶಕ್ಕೆ ಕೇಳುವುದಕ್ಕೆ ಇನ್ನು ಮುಂದೆ ಅವಕಾಶವಿರುವುದಿಲ್ಲ. ಸದ್ಯಕ್ಕೆ ಬಲದಂಡೆ ಕಾಲುವೆಯ ಕಾವಲು ಜವಾಬ್ದಾರಿಯನ್ನೂ ಪಡೆಗೆ ವಹಿಸಲಾಗುತ್ತದೆ" ಎಂದು ತುಂಗಭದ್ರಾ ಅಣೆಕಟ್ಟು ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್ ಹೇಳಿದ್ದಾರೆ.