ಇನ್ಮುಂದೆ ಕೆ ಜೆ ಜಾರ್ಜ್ ನೆಪ ಮಾತ್ರಕ್ಕೆ ಗೃಹ ಸಚಿವರು!
ಬಳ್ಳಾರಿ, ಆ 4: ಗೃಹ ಇಲಾಖೆಯನ್ನು ನಿಭಾಯಿಸುವಲ್ಲಿ ಕೆ ಜೆ ಜಾರ್ಜ್ ಸಂಪೂರ್ಣ ವಿಫಲರಾಗಿದ್ದಾರೆ. ಇನ್ನು ಮುಂದೆ ಜಾರ್ಜ್ ನೆಪ ಮಾತ್ರಕ್ಕೆ ಗೃಹ ಸಚಿವರು ಎಂದು ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಜಾರ್ಜ್ ವೈಫಲ್ಯದಿಂದ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟು ಹೋಗಿದೆ. ಅದಕ್ಕಾಗಿಯೇ, ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯನವರನ್ನು ಸಲಹೆಗಾರರನ್ನಾಗಿ ನೇಮಿಸಿದ್ದು.
ಇನ್ನು ಮುಂದೆ ಗೃಹ ಸಚಿವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ವಿಧಾನಪರಿಷತ್ ನಲ್ಲಿ ಪ್ರತಿಪಕ್ಷದ ನಾಯಕ ಈಶ್ವರಪ್ಪ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ಕೆಜೆ ಜಾರ್ಜ್ ಚಾರ್ಚ್ ತಗೊಳ್ಳಿ, ಇಲ್ಲ ರಾಜೀನಾಮೆ ಕೊಡಿ)
ಬಳ್ಳಾರಿಯಲ್ಲಿ ಭಾನುವಾರ (ಆ 3) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಈಶ್ವರಪ್ಪ, ರಾಜ್ಯದಲ್ಲಿ ಮಹಿಳೆಯರ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಪ್ರಕರಣ, ಕಾಶಪ್ಪನವರ್, ರವೀಂದ್ರನಾಥ್ ಮುಂತಾದ ಘಟನೆಗಳಿಂದ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ ಎಂದು ಈಶ್ವರಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕ ಕಾಶಪ್ಪನವರ್ ಮತ್ತು ಅವರ ಜೊತೆಗಿದ್ದ ರೌಡಿ ಶೀಟರ್ ಮೇಲೆ ಸರಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ರಾಜ್ಯ ಸರಕಾರವೇ ಇವರನ್ನು ರಕ್ಷಿಸುತ್ತಿದೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ.
ಈಶ್ವರಪ್ಪ ನಾಲಿಗೆ ಮೆದುಳು ಕನೆಕ್ಷನ್ ಆವಾಗಾವಾಗ ತಪ್ಪುತ್ತೆ. ಮುಂದೆ ಓದಿ..
ಜಾರ್ಜ್ ಗೆ ಸೋನಿಯಾ ಅಭಯ ಹಸ್ತ
ಗೃಹ ಸಚಿವರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಭಯ ಹಸ್ತವಿದೆ. ಅವರ ಅನುಗ್ರಹವಿಲ್ಲದಿದ್ದರೇ ಜಾರ್ಜ್ ಎಲ್ಲೋ ಇರುತ್ತಿದ್ದರು. ಇನ್ನು ಮುಂದೆ ನಿಜವಾದ ಗೃಹ ಸಚಿವರೆಂದರೆ ಕೆಂಪಯ್ಯನವರು - ಈಶ್ವರಪ್ಪ.
ಯಡಿಯೂರಪ್ಪ ಕೇಂದ್ರ ಸಚಿವರಾಗ ಬೇಕಿತ್ತು
ಯಡಿಯೂರಪ್ಪನವರನ್ನು ಕೇಂದ್ರದ ಕೃಷಿ ಸಚಿವರನ್ನಾಗಿ ನೋಡಲು ನಾವು ಬಯಸಿದ್ದೆವು. ಯಡಿಯೂರಪ್ಪನವರು ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ರಾಜ್ಯದೆಲ್ಲಡೆ ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ - ಈಶ್ವರಪ್ಪ.
ಈಶ್ವರಪ್ಪ ನಾಲಿಗೆ ಮೆದುಳು ಕನೆಕ್ಷನ್ ಆವಾಗವಾಗ ತಪ್ಪುತ್ತೆ
ಈಶ್ವರಪ್ಪನವರ ನಾಲಿಗೆಗೂ ಮೆದುಳಿಗೂ ಇರುವ ಕನೆಕ್ಷನ್ ಆವಾಗವಾಗ ತಪ್ಪುತ್ತಿರುತ್ತದೆ. ಹಾಗಾಗಿ ಕೆಲವೊಮ್ಮೆ ಏನೇನೋ ಹೇಳಿಕೆ ನೀಡುತ್ತಾರೆಂದು ಸಚಿವ ಕಿಮ್ಮನೆ ರತ್ನಾಕರ ತಮಾಷೆ ಮಾಡಿದ್ದಾರೆ.
ಈಶ್ವರಪ್ಪ ಹಗುರವಾಗಿ ಮಾತನಾಡುತ್ತಾರೆ
ಈಶ್ವರಪ್ಪ ಸರಕಾರದ ವಿರುದ್ದ ಹಗುರವಾಗಿ ಮಾತನಾಡುತ್ತಾರೆ. ಮುಖ್ಯಮಂತ್ರಿಗಳ ಬಗ್ಗೆ ಯಾವ ರೀತಿ ಮಾತನಾಡ ಬೇಕೆಂದು ಅವರಿಗೆ ಕೆಲವೊಮ್ಮೆ ತಿಳಿಯುವುದಿಲ್ಲ ಎಂದು ಸಚಿವ ಕಿಮ್ಮನೆ, ಈಶ್ವರಪ್ಪ ಬಗ್ಗೆ ಬೇಸರದ ಮಾತನ್ನಾಡಿದ್ದಾರೆ.
ಅತ್ಯಾಚಾರಿಗಳಿಗೆ ಕಠಿಣ ಸಂದೇಶ
ಅತ್ಯಾಚಾರಿಗಳಿಗೆ ಕಠಿಣ ಸಂದೇಶ ನೀಡುವ ಸಲುವಾಗಿ ಗೂಂಡಾ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ. ಸಚಿವರ ಮಕ್ಕಳ ಮೇಲೆ ಅತ್ಯಾಚಾರವಾದರೆ ಸುಮ್ಮನಿರುತ್ತಾರೋ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಾರೆಂದರೆ ಅವರು ಸರಿಯಿಲ್ಲ ಎಂದೇ ಅರ್ಥ - ಕಿಮ್ಮನೆ ರತ್ನಾಕರ.