ಶ್ರೀಮತಿ ಸುಭದ್ರಮ್ಮ ಮನ್ಸೂರ್ ಪರಿಚಯ ಓದಿ
ಕೃಷ್ಣ ದೇವರಾಯ ವಿವಿಯಿಂದ ಗೌರವ ಡಾಕ್ಟರೇಟ್ ಪಡೆಯುತ್ತಿರುವ ಸುಭದ್ರಮ್ಮ ಮನ್ಸೂರ್ ಅವರು, ಬಳ್ಳಾರಿಯಲ್ಲಿ 1939ರಲ್ಲಿ ಜನಿಸಿದರು. ಕಡು ಬಡತನದ ಹಿನ್ನೆಲೆಯಿಂದ ಬಂದ ಇವರು 6ನೇ ತರಗತಿಗೆ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ನಾಟಕ ರಂಗಕ್ಕೆ ಪಾದಾರ್ಪಣೆ ಮಾಡಿದರು.
12ನೇ ವಯಸ್ಸಿನಲ್ಲಿ ಮಂಗಳೂರಿನ ಸುಮಂಗಳ ನಾಟ್ಯ ಸಂಘವನ್ನು ಸೇರಿದ ಸುಭ್ರಮ್ಮ ಅವರು, ಕರ್ನಾಟಕದ ಪ್ರಸಿದ್ಧ ನಾಟಕ ತಂಡಗಳಾದ ಏಣಿಗಿ ಬಾಳಪ್ಪನವರ ಕಲಾವೈಭವ ನಾಟ್ಯ ಸಂಘ ಹಾಗೂ ಮಾಸ್ಟರ್ ಹಿರಣ್ಣಯ್ಯರವರ ನಾಟ್ಯ ಸಂಘ ಹಾಗೂ ಬೆನ್ನಟ್ಟಿ ನಾಟ್ಯ ಸಂಘ ಮುಂತಾದವುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶರಣರ ಕಲಾಬಳಗ ಎಂಬ ನಾಟಕ ತಂಡವನ್ನು ಕಟ್ಟಿ ಬೆಳಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಸುಭದ್ರಮ್ಮ ಮನ್ಸೂರ್ ಅವರು, 1000ಕ್ಕೂ ಹೆಚ್ಚೂ ನಾಟಕಗಳಲ್ಲಿ ಲೆಕ್ಕವಿಲ್ಲದಷ್ಟು ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಪುರಾಣ ನಾಟಕಗಳಿಂದ ತೊಡಗಿ ಸಾಮಾಜಿಕ ನಾಟಕಗಳ ವಿವಿಧ ಪಾತ್ರಗಳಲ್ಲಿ ಇವರು ತಮ್ಮ ಅಭಿನಯದ ಛಾಪನ್ನು ಮೂಡಿಸಿರುತ್ತಾರೆ.
ಮಹಾಭಾರತದ ದ್ರೌಪದಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಪಾತ್ರಗಳು ಇವರ ಮೇರು ಅಭಿನಯದ ಹೆಗ್ಗರುತುಗಳಾಗಿ ಪ್ರಶಂಸೆಗೆ ಪಾತ್ರವಾಗಿವೆ. ಇವರ ಅಭಿನಯ ಚಾತುರ್ಯವನ್ನು ಕರ್ನಾಟಕ, ಆಂಧ್ರ ಹಾಗೂ ತಮಿಳು ನಾಡಿನ ಗ್ರಾಮೀಣ ಪ್ರೇಕ್ಷಕರು ತುಂಬು ಹೃದಯದಿಂದ ಪ್ರಶಂಸಿಸಿ ಪ್ರೊತ್ಸಾಹಿಸಿದ್ದಾರೆ.
ಸುಭದ್ರಮ್ಮ ಮನ್ಸೂರ್ ಅವರ ಸಾಧನೆಗಾಗಿ 1996ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1986ರಲ್ಲಿ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, 2013ರಲ್ಲಿ ನಾಡೋಜಾ ಮತ್ತು ಚಿಂದೋಡಿ ಲೀಲಾ ಪ್ರಶಸ್ತಿಯನ್ನು ಪಡೆದಿದ್ದಾರೆ. ಖ್ಯಾತ ಲೇಖಕರಾದ ಕುಂ.ವೀರಭದ್ರಪ್ಪನವರು ಇವರ ಜೀವನದ ಕುರಿತು ಸುಭದ್ರಮ್ಮ ಮನ್ಸೂರ್ ಎಂಬ ಜೀವನಚರಿತ್ರೆಯನ್ನು ಬರೆದಿದ್ದಾರೆ. ಇವರ ಎಲ್ಲಾ ಸೇವೆಯನ್ನು ಪರಿಗಣಿಸಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸುತ್ತಿದೆ.