ಬಿ ಶ್ರೀರಾಮುಲು ರಾಜೀನಾಮೆಗೆ ಕೆಪಿಸಿಸಿ ವಕ್ತಾರರು ಆಗ್ರಹಿಸಿದ್ದೇಕೆ?
ಬಳ್ಳಾರಿ, ಡಿಸೆಂಬರ್ 18: "ಆರೋಗ್ಯ ಸಚಿವ ಶ್ರೀರಾಮುಲುರವರನ್ನು ಬಲಿಪಶುವಾಗಿಸುವ ಮೂಲಕ ಹಿಂದುಳಿದವರ್ಗಗಳ ನಾಯಕರನ್ನು ತುಳಿಯುವ ಹುನ್ನಾರ ನಡೆಸಲಾಗಿದೆ. ಆರೋಪದಿಂದ ಮುಕ್ತರಾಗುವ ತನಕ ಸಚಿವ ಶ್ರೀರಾಮುಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ ಆಗ್ರಹಿಸಿದ್ದಾರೆ.
''ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಹಿಂದುಳಿದ ವರ್ಗಗಳ ಮುಖಂಡರನ್ನು ಮತ್ತು ಅವರ ಪ್ರಭಾವವನ್ನು ಬಳಸಿಕೊಂಡಿದ್ದಾರೆ. ಆದರೆ, ನಂತರ ಉನ್ನತ ಹುದ್ದೆ ನೀಡುವ ಸಂದರ್ಭ ಬಂದಾಗ ಹಿಂದೆ ಸರಿದಿದ್ದಾರೆ. ಈಗ ಸರ್ಕಾರಿ ಸಂಸ್ಥೆಗಳಿಗೆ ಸುಪಾರಿ ನೀಡಿ ಅವರ ವಿರುದ್ಧದ ಪ್ರಕರಣಗಳಿಗೆ ಮರುಜೀವ ನೀಡಲಾಗುತ್ತಿದೆ. ಉನ್ನತ ಹುದ್ದೆಯಿಂದ ವಂಚಿಸುವ ಹುನ್ನಾರ ನಡೆದಿದೆ. ಆರೋಗ್ಯ ಸಚಿವ ಶ್ರೀರಾಮುಲುರವರನ್ನು ಬಲಿಪಶುವಾಗಿಸುವ ಮೂಲಕ ಹಿಂದುಳಿದ ವರ್ಗಗಳ ನಾಯಕರನ್ನು ತುಳಿಯುವ ಯತ್ನವಾಗಿದೆ'' ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ ಆರೋಪಿಸಿದರು
ಸಚಿವ ಶ್ರೀರಾಮುಲುಗೆ ಡಿಸಿಎಂ ಹುದ್ದೆ ನೀಡುವಂತೆ ಒತ್ತಾಯ
ಬಳ್ಳಾರಿ ಹೊರವಲಯದ ಬೆಲೆಬಾಳುವ ಜಮೀನನ್ನು ಹಿಂದೆ ಸಚಿವರಾಗಿದ್ದಾಗ ಕಬಳಿಸಿದ ಆರೋಪದ ಮೇಲೆ ಭೂಕಬಳಿಕೆ ತಡೆ ವಿಶೇಷ ನ್ಯಾಯಾಲಯ ಸಚಿವ ಶ್ರೀರಾಮುಲು ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಸಮಗ್ರ ವರದಿ ನೀಡಲು ಆದೇಶಿಸಿದ್ದು ಅಧಿಕಾರಿಗಳ ಮೇಲೆ ಪ್ರಭಾವ ಬೀರದಂತೆ ವರದಿ ಸಲ್ಲಿಕೆಯಾಗುವವರೆಗೂ ಸಚಿವ ಶ್ರೀರಾಮುಲು ರಾಜೀನಾಮೆ ನೀಡಲು ಪತ್ರೇಶ್ ಹಿರೇಮಠ ಆಗ್ರಹಿಸಿದ್ದಾರೆ
ಸಚಿವ ಶ್ರೀರಾಮುಲು ಪ್ರಭಾವಿ ಹಿಂದುಳಿದ ವರ್ಗಗಳ ನಾಯಕರಾಗಿದ್ದು ರಾಜೀನಾಮೆ ನೀಡಿ ಆರೋಪದಿಂದ ಮುಕ್ತರಾದಲ್ಲಿ ಮುಂದೆ ಉಪಮುಖ್ಯಮಂತ್ರಿಯಾಗಬಹದಾಗಿದೆ. ಇಲ್ಲದಿದ್ದರೆ ಇದೇ ಆರೋಪದ ಮೇಲೆ ರಾಜಕೀಯ ಭವಿಷ್ಯ ಮಂಕಾಗಬಹುದು. ರಾಜಕೀಯ ಮೌಲ್ಯ ಎತ್ತಿ ಹಿಡಿಯಲು ಹಾಗೂ ರಾಜಕಾರಣದಲ್ಲಿ ನೈತಿಕತೆ ಇರುವ ನಾಯಕನಾಗಿ ಬೆಳೆಯಲು ತಕ್ಷಣವೇ ರಾಜೀನಾಮೆ ನೀಡಿ ತನಿಖೆ ಎದುರಿಸಲು ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ ಆಗ್ರಹಿಸಿದ್ದಾರೆ