ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ವಿತರಣೆಗೆ ಆಗ್ರಹಿಸಿ: ಕೆಪಿಸಿಸಿ ವಕ್ತಾರ
ಬೆಂಗಳೂರು, ಅಕ್ಟೋಬರ್ 30: ಎಪಿಎಲ್, ಬಿಪಿಎಲ್ ಸೇರಿದಂತೆ ಎಲ್ಲಾ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ವಿತರಣೆ ಬಂದ್ ಆಗಿವೆ. ರಾಜ್ಯದಲ್ಲಿ ಅಡುಗೆ ಅನಿಲವನ್ನು ಬಹಳಷ್ಟು ಕುಟುಂಬಗಳಿಗೆ ಒದಗಿಸಿದ ನಂತರ ಆಹಾರ ಇಲಾಖೆ ಅಡುಗೆ ಅನಿಲ ಪಡೆದ ಕುಟುಂಬಗಳೂ ಸೇರಿದಂತೆ ಎಲ್ಲಾ ಪಡಿತರ ಚೀಟಿದಾರರಿಗೂ ಸೀಮೆಎಣ್ಣೆ ವಿತರಣೆ ನಿಲ್ಲಿಸಿದ್ದು ಗ್ರಾಮೀಣ ಭಾಗದ ಜನರಿಗೆ ತುಂಬಾ ತೊಂದರೆಯಾಗಿದೆ ಎಂದು ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಲ್ ಪಿಜಿ ನಂತರ, ಸೀಮೆ ಎಣ್ಣೆ ಮೇಲಿನ ಸಬ್ಸಿಡಿ ತೆರವಿಗೆ ನಿರ್ಧಾರ
ಮಳೆಗಾಳಿಯ ಸಂದರ್ಭದಲ್ಲಿ ಅನಿಯಮಿತ ವಿದ್ಯುತ್ ಕಡಿತವಾದಾಗ, ಮಕ್ಕಳ ಪರೀಕ್ಷೆ ಸಮಯದಲ್ಲಿ ಬೆಳಕಿಗಾಗಿ ಸೀಮೆಎಣ್ಣೆಗಾಗಿ ಹಳ್ಳಿಗಳಲ್ಲಿ ಮನೆಮನೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮದುವೆ ಉಪನಯನ ಸೀಮಂತ ನಾಮಕರಣದಂತಹ ಸಂಭ್ರಮದ ದೊಡ್ಡ ಭೋಜನ ತಯಾರಿಸುವ ಸಮಯದಲ್ಲಿ ಬೆಂಕಿ ಹಚ್ಚುವಷ್ಟು ಸೀಮೆಎಣ್ಣೆ ಇರದೇ ಜನತೆ ಕಂಗಾಲಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಚಿತಾಗಾರ ಇದ್ದು ಗ್ರಾಮೀಣ ಪರಿಸರದಲ್ಲಿ ವಿಶೇಷವಾಗಿ ಶವ ಸುಡುವ ಸಮಯದಲ್ಲೂ ಅಗತ್ಯವಾಗಿರುವ ಸೀಮೆಎಣ್ಣೆ ಎಲ್ಲಿಯೂ ಸಿಗದಿರುವುದು ಶೋಚನೀಯ. ಪಡಿತರ ಚೀಟಿದಾರರಿಗೆ ಒಂದು ಎಲ್ಇಡಿ ಬಲ್ಬ್ ಇಲ್ಲವೇ ಒಂದು ಲೀ ಸೀಮೆಎಣ್ಣೆ ನೀಡುವ ಐಚ್ಛಿಕ ಅವಕಾಶವನ್ನು ನೀಡಿ ಗ್ರಾಮಪಂಚಾಯಿತಿಗಳಿಗೆ ಪಟ್ಟಿ ಮಾಡಲು ಸೂಚಿಸಲಾಗಿತ್ತು ಆ ಕೆಲಸವು ಕಾರ್ಯರೂಪಕ್ಕೆ ಬಂದಿಲ್ಲ.
ಹಿಂದಿನ ಸರ್ಕಾರದಲ್ಲಿ ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಪ್ರತಿ ಪಡಿತರಚೀಟಿಗೆ ತಿಂಗಳಿಗೊಮ್ಮೆಯಾದರೂ ಒಂದು ಲೀಟರ್ ಸೀಮೆಎಣ್ಣೆ ನೀಡುವ ಪ್ರಸ್ತಾವ ಇಲಾಖೆ ಸಿದ್ಧಪಡಿಸಿ ಸರ್ಕಾರದ ಮುಂದೆ ಸಲ್ಲಿಸಿತ್ತು. ಆದರೆ ಸರ್ಕಾರ ಪತನಗೊಂಡ ಬಳಿಕ ಪ್ರಸ್ತಾವ ಸ್ಥಗಿತಗೊಂಡಿದೆ. ತಕ್ಷಣವೇ ಆಹಾರ ಖಾತೆ ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಪ್ರಸ್ತಾವಕ್ಕೆ ಮರುಜೀವ ನೀಡಿ ತಿಂಗಳಿಗೆ ಪ್ರತಿ ಪಡಿತರಚೀಟಿಗೆ ಒಂದು ಲೀಟರ್ ಸೀಮೆಎಣ್ಣೆ ವಿತರಣೆಗೆ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇನೆ ಎಂದು ಪತ್ರೇಶ್ ಹಿರೇಮಠ್ ಹೇಳಿದರು.