ಜನ ಸಾಗರದ ನಡುವೆ ಸಾಗಿತು ಕೊಟ್ಟೂರೇಶ್ವರನ ವೈಭವದ ತೇರು
ಬಳ್ಳಾರಿ, ಫೆಬ್ರವರಿ 19: ಸಮಾನತೆಯ ಹರಿಕಾರ, ಪವಾಡ ಪುರುಷ, ಕೊಟ್ಟೂರು ಪಟ್ಟಣದ ಆರಾಧ್ಯ ದೈವ ಗುರು ಕೊಟ್ಟೂರೇಶ್ವರ ಸ್ವಾಮಿಯ ಮಹಾ ರಥೋತ್ಸವ ನಿನ್ನೆ ಸಂಜೆ ಸಂಭ್ರಮದಿಂದ ಜರುಗಿತು. ಬಳ್ಳಾರಿ ಜಿಲ್ಲೆಯ ಕೊಟ್ಟೂರು ಪಟ್ಟಣದ ಬಸ್ ನಿಲ್ದಾಣದ ಬಳಿಯ ತೇರು ಬಯಲು ಪ್ರದೇಶದಲ್ಲಿ ಅದ್ಧೂರಿ ರಥೋತ್ಸವ ನಡೆಯಿತು.
ರಥೋತ್ಸವದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗಿದ್ದರು. ಬಳ್ಳಾರಿ ಜಿಲ್ಲೆಯಲ್ಲದೇ ದಾವಣಗೆರೆ, ಹಾವೇರಿ, ಗದಗ, ಮುಂಡರಗಿ, ಹಾಸನ ಸೇರಿದಂತೆ ನಾನಾ ಭಾಗಗಳಿಂದ 30 ಸಾವಿರಕ್ಕೂ ಹೆಚ್ಚು ಭಕ್ತರು ಕಾಲ್ನಡಿಗೆಯಲ್ಲಿ ಜಾತ್ರೆಗೆ ಆಗಮಿಸಿದ್ದರು. ಈ ಬಾರಿಯೂ 85 ವರ್ಷದ ಸಂತೆಬೆನ್ನೂರಿನ ಅಜ್ಜಿ ಕಮಲಮ್ಮ 58 ಕಿ.ಮೀ ಪಾದಯಾತ್ರೆ ಮಾಡಿ ಬಂದಿದ್ದು ವಿಶೇಷವಾಗಿತ್ತು.
ರಾಜ್ಯದ ಪ್ರಸಿದ್ದ ಸಾಗರ ಮಾರಿಕಾಂಬಾ ಜಾತ್ರೆಗೆ ಇಂದು ಚಾಲನೆ
ಇಲ್ಲಿ ಮೂಲ ನಕ್ಷತ್ರದಲ್ಲಿ ರಥೋತ್ಸವ ನಡೆಯುವುದು ಒಂದು ವಿಶೇಷವಾದರೆ, ಕೊಟ್ಟೂರೇಶ್ವರ ಸ್ವಾಮಿಗೆ ದಲಿತ ಮಹಿಳೆ ಆರತಿ ಬೆಳಗುವುದು ಮತ್ತೂ ಒಂದು ವಿಶೇಷ. ಗುರು ಕೊಟ್ಟೂರೇಶ್ವರ ಸ್ವಾಮಿಯ ದೇಗುಲದಿಂದ ಹೊರಡುವ ಪಲ್ಕಕ್ಕಿ ದಲಿತ ಕೇರಿಯ ಬಳಿ ಬಂದಾಗ, ದಲಿತ ಮಹಿಳೆ ಆರತಿ ಬೆಳಗುತ್ತಾರೆ.
80 ಅಡಿ ಎತ್ತರದಲ್ಲಿ ಸ್ವಾಮಿಯ ಮೂರ್ತಿ ಆಸೀನವಾಗುತ್ತಿದ್ದಂತೆ, ಭಕ್ತರು, ರಥ ಎಳೆದರು. 2017ರ ಫೆಬ್ರವರಿ 21ರಂದು ರಥ ಆಕಸ್ಮಿಕವಾಗಿ ಉರುಳಿ ಬಿದ್ದಿತ್ತು, 2018 ರಲ್ಲೇ ಹೊಸ ತೇರನ್ನು 2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿ ಎಳೆಯಲಾಯಿತು.