ಕೆಎಂಎಫ್ ಲಾಭದಲ್ಲಿದ್ದರೂ ಹಾಲಿನ ಬೆಲೆ ಇಳಿಕೆ ಇಲ್ಲ!
ಬಳ್ಳಾರಿ, ಜ.24 : ಕರ್ನಾಟಕ ಹಾಲು ಒಕ್ಕೂಟ ನಷ್ಟದಲ್ಲಿದ್ದಾಗ ಅಥವಾ ಡೀಸೆಲ್, ಪೆಟ್ರೋಲ್ ಬೆಲೆ ಜಾಸ್ತಿಯಾಗಿ ಹಾಲು ಸಾಗಾಟ ವೆಚ್ಚ ಜಾಸ್ತಿಯಾದಾಗ ಹಾಲಿನ ದರ ಏರಿಸಿದ್ದ ಕೆಎಂಎಫ್, ಈಗ ಭರ್ಜರಿ ಲಾಭದಲ್ಲಿದ್ದರೂ ಹಾಲಿನ ಬೆಲೆ ಇಳಿಸುವ ಗೋಜಿಗೆ ಹೋಗಿಲ್ಲ. ಬದಲಾಗಿ ರೈತರಿಗೆ ಹೆಚ್ಚಿನ ಸಹಾಯ ಧನ ನೀಡುವುದಾಗಿ ಹೇಳಿದೆ.
ಈ ಸುದ್ದಿಯನ್ನು ಹಂಚಿಕೊಂಡಿರುವ ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಅವರು, ರಾಜ್ಯದ ಎಲ್ಲಾ 13 ಒಕ್ಕೂಟಗಳು ಲಾಭದಲ್ಲಿದ್ದು, ಹಾಲು ಉತ್ಪಾದಕ ರೈತರಿಗೆ ಫೆ.1ರ ಶನಿವಾರದಿಂದ ಪ್ರತಿ ಲೀಟರ್ಗೆ 4 ರುಪಾಯಿ ಸಹಾಯ ಧನ ನೀಡಲಾಗುತ್ತದೆ. ಗ್ರಾಹಕರಿಗೆ ಅದೇ ಬೆಲೆಯಲ್ಲಿ ಹಾಲು ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ಆಕಳ ಹಾಲು ಲೀಟರ್ಗೆ ರು.26.75 ಪೈಸೆ ಇದ್ದು ಸಹಾಯ ಧನ ರೂ.4 ಸೇರಿ ರು.30.75 ಪೈಸೆ, ಎಮ್ಮೆ ಹಾಲು ರು.28 ಇದ್ದು, ಇದೀಗ ರು.35 ನಂತೆ ಮಾರಾಟ ಮಾಡಿ ಬಂದ ಲಾಭದ ಹಣವನ್ನು ರೈತರಿಗೆ ನೀಡುವುದಾಗಿ ಹೇಳಿದರು.
ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಹಾಕು ಒಕ್ಕೂಟ ಸೆಪ್ಟೆಂಬರ್ ನಂತರ ರೂ.1.75 ಕೋಟಿ ಲಾಭ ಗಳಿಕೆ ಮಾಡಿದೆ. ಪ್ರಸ್ತುತ ಒಕ್ಕೂಟ ನಿವ್ವಳ ಆರು ಕೋಟಿ ರುಪಾಯಿ ಲಾಭದಲ್ಲಿದೆ. ಪ್ರತಿ ಲೀಟರ್ಗೆ ರುಪಾಯಿ 3ರಂತೆ ರೈತರಿಗೆ ಬೋನಸ್ ನೀಡಲಾಗುತ್ತದೆ ಎಂದರು. [ಕಳೆದ ಬಾರಿ ಹಾಲು ದರ ಏರಿದ್ದು]
ಗ್ರಾಹಕರಿಗೆ ಈಗ ಇರುವ ಬೆಲೆಯಲ್ಲಿಯೇ ಹಾಲು ಮಾರಾಟ ಮಾಡಲಾಗುತ್ತದೆ. ರಾಜ್ಯದ ಎಲ್ಲ 13 ಒಕ್ಕೂಟಗಳು ಲಾಭದಲ್ಲಿವೆ. ಕೊಪ್ಪಳದಲ್ಲಿ 5 ಕೋಟಿ ರುಪಾಯಿ ವೆಚ್ಚದಲ್ಲಿ ನೂತನ ಘಟಕ ನಿರ್ಮಾಣವಾಗುತ್ತಿದೆ. ಬಳ್ಳಾರಿಯಲ್ಲಿ ಮೈಸೂರು ಪಾಕ್, ರಾಯಚೂರಲ್ಲಿ ಖೋವಾ ತಯಾರಿಸುವ ಯೋಜನೆ ಇದೆ ಎಂದು ಸೋಮಶೇಖರ ರೆಡ್ಡಿ ನುಡಿದರು.
ಆರ್ಬಿಕೆಎಂಯು ಅಡಿ 3 ಕೋಟಿ ರು. ವೆಚ್ಚದ ಸೀಡ್ಸ್ ಪ್ಲಾಂಟ್ ನಿರ್ಮಾಣ ಮತ್ತು ಐಸ್ಕ್ರೀಂ ಘಟಕ ನಿರ್ಮಾಣ ಕಾರ್ಯ ನಡೆದಿದೆ. ಹೊಸ ಬಸ್ ನಿಲ್ದಾಣದಲ್ಲಿ ಎಟಿಎಂ ಮಾದರಿಯಲ್ಲಿ ನಂದಿನಿ ಪಾರ್ಲರ್ ಆರಂಭಿಸಲಾಗುತ್ತದೆ. ಗಡಿಗೆ ಚೆನ್ನಪ್ಪ ವೃತ್ತ ಸೇರಿ ವಿವಿಧೆಡೆ ಎಟಿಎಂ ಮಾದರಿಯಲ್ಲಿ ನೂತನ ಮಾರಾಟ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಅವರು ವಿವರಿಸಿದರು.
ಡೀಲರುಗಳ ಲೈಸನ್ಸ್ ರದ್ದು : 'ನಂದಿನಿ' ಹಾಲು ಮಾರಾಟ ಕೇಂದ್ರಗಳಲ್ಲಿ ಖಾಸಗಿ ಹಾಲು ಮಾರುವ ಡೀಲರುಗಳ ಲೈಸನ್ಸ್ ರದ್ದು ಮಾಡಲು ನಿರ್ಧರಿಸಲಾಗಿದೆ. ಕಲಬೆರಕೆ ಹಾಲು, ಮೊಸರು ಮಾರಾಟ ಮಾಡುವ ಜಾಲವನ್ನು ನಿಯಂತ್ರಿಸಲಾಗುತ್ತಿದೆ ಎಂದರು.
ಆರ್ಬಿಕೆಎಂಯು ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಕುಮಾರ್ ಮಾತನಾಡಿ, ಖಾಸಗಿ ಡೈರಿಗಳು ಮಾರಾಟಗಾರರಿಗೆ ಹೆಚ್ಚಿನ ಕಮೀಷನ್ ನೀಡುವ ಆಸೆ ತೋರಿಸಿ 'ನಂದಿನಿ' ಹಾಲಿನ ಬದಲಾಗಿ ಬೇರೆ ಬೇರೆ ಹಾಲು ಮಾರಾಟ ಮಾಡುವಂತೆ ಪ್ರೇರೇಪಿಸುತ್ತಿವೆ. ಗ್ರಾಹಕರು ಎಚ್ಚೆತ್ತುಕೊಳ್ಳಬೇಕು ಎಂದರು.
ಬರಾಕೊ ಹಾಲು ಒಕ್ಕೂಟದ ಅಧ್ಯಕ್ಷ ಎಂ. ಸತ್ಯನಾರಾಯಣ, ನಿರ್ದೇಶಕರಾದ ಬಲಸು ಸೂರ್ಯನಾರಾಯಣ, ಸುಧಾ ಪ್ರಾಣೇಶ್, ವ್ಯವಸ್ಥಾಪಕ ಸುನೀಲ್ ಇನ್ನಿತರರು ಈ ಸಂದರ್ಭದಲ್ಲಿ ಇದ್ದರು.