ಲಾಕ್ಡೌನ್ ಘೋಷಣೆ; ಮದ್ಯದಂಗಡಿಗಳತ್ತ ಹರಿದು ಬಂದ ಜನರ ದಂಡು
ವಿಜಯನಗರ, ಏಪ್ರಿಲ್ 27: ಕೊರೊನಾ ವೈರಸ್ 2ನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಟಫ್ ರೂಲ್ಸ್ ಜತೆಗೆ ಲಾಕ್ಡೌನ್ ಘೋಷಣೆ ಮಾಡುತ್ತಿದ್ದಂತೆಯೇ ಮದ್ಯದಂಗಡಿಗಳತ್ತ ಜನರ ದಂಡು ಹರಿದು ಬರುತ್ತಿದೆ.
ಸೋಮವಾರ ರಾಜ್ಯ ಸರಕಾರ ಏ.27 ರಿಂದ ಕೊರೊನಾ ನಿಯಂತ್ರಣ ಮಾಡುವ ಸಲುವಾಗಿ ಇಡೀ ರಾಜ್ಯದಲ್ಲಿ ಲಾಕ್ಡೌನ್ ಘೋಷಣೆ ಮಾಡುತ್ತಿದ್ದಂತೆ, ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನ ಹೊಸಪೇಟೆಯಲ್ಲಿ ಮದ್ಯ ಪ್ರಿಯರು ವೈನ್ ಶಾಪ್ಗಳತ್ತ ಮುಖ ಮಾಡಿದರು.
ಕೊರೊನಾ 2ನೇ ಅಲೆ, ಮಕ್ಕಳಿಗೂ ಹೆಚ್ಚು ಅಪಾಯಕಾರಿ: ವೈದ್ಯರ ಎಚ್ಚರಿಕೆ
ನಗರದಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳು ಫುಲ್ ಬಿಸಿಯಾಗಿದ್ದವು. ರಾತ್ರಿ 8 ಗಂಟೆಯಾಗಿದ್ದರೂ ಸಹ ಜನರು ಮಾತ್ರ ಅಂಗಡಿಗಳ ಮುಂದೆ ಮುಗಿಬಿದ್ದಿದ್ದರು. ಮದ್ಯ ಕೊಂಡುಕೊಳ್ಳುವುದಕ್ಕೆ ಮಹಿಳೆಯರೂ, ಯುವಕರು ಮತ್ತು ಮುದುಕರೂ ಸೇರಿದಂತೆ ಖರೀದಿ ಮಾಡುವುದಕ್ಕೆ ಮುಂದಾದರು.
ಕೆಲವರು ಮದ್ಯ ಖರೀದಿಸಿ ಮನೆಕಡೆ ತೆಗೆದುಕೊಂಡು ಹೊರಟರೆ, ಇನ್ನು ಕೆಲವರು ಹೊಸಪೇಟೆಯ ಎಂಎಸ್ಐಎಲ್ ಮದ್ಯದಂಗಡಿಯಲ್ಲಿ ಮದ್ಯ ಖರೀದಿ ಮಾಡುವುದಕ್ಕೆ ಮುಂದಾದರು.
ಲಾಕ್ಡೌನ್ ಘೋಷಣೆ ಮಾಡುತ್ತಿದ್ದಂತೆ ನಿತ್ಯ ವ್ಯಾಪಾರಕ್ಕಿಂತ ಇಂದು ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದು, ಇದಕ್ಕೆ ಕಾರಣ ಲಾಕ್ಡೌನ್ ಮಾಡುತ್ತಾರೆ ಅಂತ ಸುದ್ದಿ ತಿಳಿದು ಬಹಳಷ್ಟು ಮದ್ಯ ಖರೀದಿ ಮಾಡಿಕೊಂಡು ಜನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ನಾವು ವೈನ್ ವ್ಯಾಪರ ಬಿಟ್ಟರೆ ನಮಗೆ ಬೇರೆ ಏನು ಗೊತ್ತಿಲ್ಲ. ಹಾಗಾಗಿ. ನಮ್ಮ ವೈನ್ ಶಾಪ್ಗಳನ್ನು ಅಗತ್ಯ ವಸ್ತಗಳ ಪಟ್ಟಿಗೆ ಸೇರಿಸಿದರೆ ಚೆನ್ನಾಗಿರುತ್ತೆ. ಸರಕಾರ ದಿನದಲ್ಲಿ ನಾಲ್ಕು ಗಂಟೆ ಅಂಗಡಿಗಳನ್ನು ತೆರೆಯುವುದಕ್ಕೆ ಹೇಳಿದೆ.
ಸರಕಾರ ಏನು ಆದೇಶ ನೀಡುತ್ತದೆ ನಾವು ಅದನ್ನು ಪಾಲನೆ ಮಾಡುತ್ತೇವೆ ಎಂದು ಮರಿಯಮ್ಮನಹಳ್ಳಿಯ ನವರಂಗ ವೈನ್ ಶಾಪ್ ಮಾಲೀಕ ಗೊಲ್ಲರಹಳ್ಳಿ ಮಂಜುನಾಥ ಹೇಳಿದರು.