ST-SC ಸಮುದಾಯಕ್ಕೆ ಶೀಘದಲ್ಲೇ ಸಿಹಿಸುದ್ದಿ ಕೊಡುತ್ತೇವೆ: ಶ್ರೀರಾಮುಲು
ಬಳ್ಳಾರಿ, ಸೆಪ್ಟೆಂಬರ್ 1 : ರಾಜ್ಯದಲ್ಲಿನ ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಕೊಟ್ಟ ಮಾತಿಗೆ ಬದ್ಧರಿದ್ದೇವೆ. ಶೀಘ್ರದಲ್ಲೇ ಸಿಹಿ ಸುದ್ದಿ ನೀಡುತ್ತೇವೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ಬಳಿ ಏತ ನೀರಾವರಿ ಯೋಜನೆಯ ಕಾಮಗಾರಿ ಉದ್ಘಾಟಿಸಿ ಸುದ್ದಿಗಾರರ ಜೊತೆ ಮಾತನಾಡಿದರು.
ಸದ್ಯ ಎಸ್ಸಿಗಳಿಗೆ ಶೇ 15 ಇರುವ ಮೀಸಲಾತಿ ಪ್ರಮಾಣವನ್ನು ಶೇ 17 ಕ್ಕೆ ಹಾಗೂ ಎಸ್ಟಿಗಳಿಗೆ ಇರುವ ಶೇ 3ರ ಪ್ರಮಾಣವನ್ನು 7.5 ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದರು.
ಎಸ್ಟಿ ಮೀಸಲಾತಿ ವಿಚಾರದಲ್ಲಿ ನನ್ನ ಮಾತಿಗೆ ನಾನು ಬದ್ಧವಾಗಿದ್ದೇನೆ ಅವರೇನು ಮುಖ್ಯಮಂತ್ರಿ ( ಸಿದ್ದರಾಮಯ್ಯ) ಇದ್ದಾಗ ಮೀಸಲಾತಿ ಮಾಡಲಿಲ್ಲವೋ ಅದನ್ನು ನಾವು ಮಾಡುತ್ತೇವೆ. ಸದ್ಯದಲ್ಲೇ ಜನತಗೆ ಸರ್ಕಾರ ಸಿಹಿ ಸುದ್ದಿ ನೀಡಲಿದ್ದೇವೆ ಎಂದು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ರೈತರನ್ನು ಕಾಡುತ್ತಿರುವ ಸವಳು-ಜವಳು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ:ನಿರಾಣಿ
ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತಂತೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಟ್ವಿಟ್ ಗೆ ಪ್ರತಿಯಾಗಿ ತಾವು ಮಾಡಿದ ಟ್ವೀಟನ್ನು ಸಮರ್ಥಿಸಿಕೊಂಡ ರಾಮುಲು. ಅದನ್ನು ಡೀಲಿಟ್ ಮಾಡಲಾಗಿದೆ ಎಂಬುದು ಸಹ ಸುಳ್ಳು. ಮೂವತ್ತು ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ ನನಗೆ ಯಾರು ಬುದ್ದಿ ಕಲಿಸೋದು ಬೇಕಿಲ್ಲ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಸಿ ಚಿತ್ರದುರ್ಗದ ಮುರುಘಾ ಶ್ರೀಗಳ ಬಂಧನ ಕುರಿತಂತೆ ಕೇಳಿದ ಪ್ರಶ್ನೆಗೆ, ಪ್ರಕರಣ ನ್ಯಾಯಾಲಯಲ್ಲಿರುವುದರಿಂದ ಇದಕ್ಕೆ ಪ್ರತಿಕ್ರಿಯೆ ನೀಡುವುದು ತಪ್ಪಾಗುತ್ತದೆ ಎಂದರು.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಮೈಸೂರು ದಸರಾ ಪ್ರವಾಸ ಪ್ಯಾಕೇಜ್: ಇಲ್ಲಿದೆ ಮಾಹಿತಿ
ಏತ ನೀರಾವರಿ
ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರು ಬಳಿ 7.13 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕೋಳೂರು ಏತ ನೀರಾವರಿ(ಡಿ-7 ಕಾಲುವೆ) ಪುನಶ್ಚೇತನಾ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಗುರುವಾರ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿ ಈ ಕೋಳೂರು ಏತನೀರಾವರಿ ಯೋಜನೆಯ ವಿತರಣಾ ಕಾಲುವೆ-07ರ ಕೊನೆಯ ಭಾಗದ ನೀರಾವರಿ ಭಾದಿತ ಅಚ್ಚುಕಟ್ಟು ಪ್ರದೇಶವಾಗಿರುವ ಬೈಲೂರು, ಸಿಂಧಿಗೇರಿ, ಶಾನವಾಸಪುರ,ಡಿ. ಕಗ್ಗಲ್ಲು, ಕೊಂಚಿಗೇರಿ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಸುಮಾರು 3750 ಎಕರೆ ಜಮೀನು ಪ್ರದೇಶಕ್ಕೆ ಜುಲೈನಿಂದ ಡಿಸೆಂಬರ್ವರೆಗೆ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ. ಈ ಭಾಗದ ರೈತರ ಬಹುದಿನಗಳ ಬೇಡಿಕೆಯನ್ನು ನಮ್ಮ ಸರಕಾರ ಈಡೇರಿಸಿದೆ ಎಂದರು.3750 ಎಕರೆ ಜಮೀನು ಪ್ರದೇಶಕ್ಕೆ ನೀರು
ತುಂಗಾಭದ್ರಾ ಬಲದಂಡೆ ಮೇಲ್ಪಟ್ಟ ಕಾಲುವೆಯ ವಿತರಣಾ ಕಾಲುವೆ-07ರ ಕೊನೆಯ ಭಾಗದ ನೀರಾವರಿ ಬಾಧಿತ ಜಮೀನುಗಳಿಗೆ ಸಮರ್ಪಕ ನೀರು ಒದಗಿಸಲು ಅನಾನುಕೂಲವಾಗುತ್ತಿದೆ. ಜೊತೆಗೆ ಐದು ಗ್ರಾಮಗಳ 3750 ಎಕರೆ ಜಮೀನು ಪ್ರದೇಶಕ್ಕೆ ನೀರು ಸರಬರಾಜು ವ್ಯತ್ಯಯ ಉಂಟಾಗಿರುವುದನ್ನು ಗಮನಿಸಿ ಕೋಳೂರು ಹಳ್ಳ (ತುಂಗಾಭದ್ರಾ ಯೋಜನೆಯ ಪುನರುತ್ಪತ್ತಿ ನೀರು)ದಲ್ಲಿ ಹರಿಯುತ್ತಿರುವ ಪುನರುತ್ಪತ್ತಿ ನೀರನ್ನು ಬಳಸಿಕೊಂಡು ಏತನೀರಾವರಿ ಪುನಶ್ಚೇತನಾ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ 50 ಕ್ಯೂಸೆಕ್ ನೀರು ಬೇಕಾಗಲಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರೈತ ಕಾರ್ಯಕ್ರಮ ಜಾರಿ
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅನೇಕ ಏತನೀರಾವರಿ ಯೋಜನೆಗಳ ಮೂಲಕ ರೈತರ ಜಮೀನುಗಳಿಗೆ ನೀರಾವರಿಗೆ ಒಳಪಡಿಸುವ ಕೆಲಸ ನಮ್ಮ ಸರಕಾರ ಮಾಡುತ್ತಿದೆ ಎಂದು ಹೇಳಿದ ಅವರು ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಅನೇಕ ಏತನೀರಾವರಿ ಯೋಜನೆಗಳಿಗೆ ಸಾಕಷ್ಟು ಪ್ರಮಾಣದ ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡುವುದರ ಮೂಲಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಈ ಮೂಲಕ ರೈತರ ಕಲ್ಯಾಣಕ್ಕೆ ಶ್ರಮಿಸುತ್ತಿದೆ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ,ರೈತ ವಿದ್ಯಾನಿಧಿ ಸೇರಿದಂತೆ ಅನೇಕ ರೈತಪರ ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೊಳಿಸಿವೆ ಎಂದು ಅವರು ಹೇಳಿದರು.
ರಾಮುಲು ವಿರುದ್ಧ ಶಾಸಕ ಗಣೇಶ್ ವಾಗ್ದಾಳಿ
ಸಚಿವ ಶ್ರೀರಾಮುಲು ಮಾತು ಮುಗಿಸಿ ಹೋಗಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಗಣೇಶ, "ರಾಜಕಾರಣಿಯಾದವರು ಒಮ್ಮೆಯಾದ್ರೂ ಸತ್ಯ ಹೇಳಬೇಕು. ಕಳೆದ ಹತ್ತು ವರ್ಷದಿಂದ ಇದನ್ನೇ ಮಾಡ್ತಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಮೀಸಲಾತಿ ಕೊಡುತ್ತೇವೆ. ರಕ್ತದಲ್ಲಿ ಬರೆದುಕೊಡ್ತೀವೆ ಕೊನೆಗೆ ರಾಜೀನಾಮೆ ನೀಡುತ್ತೇನೆ ಎಂದಿದ್ರು ಶ್ರೀರಾಮುಲು. ಮೀಸಲಾತಿ ಕೋಡುತ್ತಾರೆ ಎಂಬ ಕಾರಣಕ್ಕೆ ವಾಲ್ಮಿಕಿ ಜನಾಂಗ ಬಿಜೆಪಿಗೆ ಮತ ಹಾಕಿದೆ. ಬಿಜೆಪಿ 105 ಕ್ಷೇತ್ರದಲ್ಲಿ ಗೆಲ್ಲಲು ಪರೋಕ್ಷವಾಗಿ ವಾಲ್ಮೀಕಿ ಸ್ವಾಮೀಜಿ ಸಪೋರ್ಟ್ ಮಾಡಿದ್ದಾರೆ. ಆದರೆ ಇವರು ಮಾಡುತ್ತಿರೋದೇನು," ಎಂದು ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದರು.
"ಮಾತು ಕೊಟ್ಟು ಹತ್ತು ವರ್ಷಗಳಾಯಿತು, ಜನರು ಧಿಕ್ಕಾರ ಹೇಳಲಿದ್ದಾರೆ ಎಂದು ಶಾಸಕ ಗಣೇಶ್ ಹೇಳಿದರು. ಸಮಾಜಕ್ಕೆ ಸುಳ್ಳು ಹೇಳಿ ಮತ ಪಡೆದ ಶ್ರೀರಾಮುಲು ಮತ್ತು ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಜನ ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ. ಇದರಿಂದ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ," ಎಂದು ಗಣೇಶ್ ಹೇಳಿದರು.