ಎಲ್ಲೈಸಿ ಉದ್ಯೋಗದಿಂದ ಕೆಎಂಎಫ್ ಅಧ್ಯಕ್ಷ ಗಾದಿವರೆಗೆ ಸೋಮಶೇಖರ್ ರೆಡ್ಡಿ
ಬಳ್ಳಾರಿ, ಏಪ್ರಿಲ್ 17: "ಎಲ್ಲೈಸಿಯಲ್ಲಿ ಸಾಮಾನ್ಯ ಗುಮಾಸ್ತನಾಗಿದ್ದೆ. ತಾಯಿಯ ಆಶೀರ್ವಾದ, ಸಹೋದರನ ಪ್ರೇರಣೆ, ಮಿತ್ರನ ಪ್ರೋತ್ಸಾಹ, ಮತದಾರರ ಹೃದಯಪೂರ್ವಕ ಬೆಂಬಲದ ಕಾರಣ ಶಾಸಕನಾದೆ. ಕೆಎಂಎಫ್ ಅಧ್ಯಕ್ಷನಾದೆ. ರಾಜಕೀಯದಲ್ಲಿ ಏಳುಬೀಳುಗಳನ್ನು ಅನುಭವಿಸಿದ್ದೇನೆ. ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡಬಾರದು ಎಂದು ಸಂಕಲ್ಪ ತೊಟ್ಟಿದ್ದೇನೆ".
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
-ಇದು ಬಳ್ಳಾರಿ ನಗರ ಬಿಜೆಪಿ ಅಭ್ಯರ್ಥಿ ಜಿ. ಸೋಮಶೇಖರ ರೆಡ್ಡಿ ತಮ್ಮ ಬಗ್ಗೆ ಹೇಳಿಕೊಳ್ಳುವ ಸಂಕ್ಷಿಪ್ತ ಪರಿಚಯ. ಆದರೆ ಅವರು ಅಷ್ಟೇನಾ ಎಂಬ ಪ್ರಶ್ನೆ ಕೇಳಿದರೆ, ಮತ್ತಷ್ಟು ಉತ್ತರಗಳು ತಾವಾಗಿಯೇ ಹೊಳೆಯುತ್ತವೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಅನಿಲ್ ಲಾಡ್ ಗೆ ಸೋಲಿನ ರುಚಿ ತೋರಿಸಿದವರು ಸೋಮಶೇಖರ್ ರೆಡ್ಡಿ.
ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಹವಾ ಎಬ್ಬಿಸಿದ ಜನಾರ್ದನ ರೆಡ್ಡಿ ಅವರ ಸೋದರ ಈತ. ಬಿಜೆಪಿಯ ರಾಜ್ಯಾಧ್ಯಕ್ಷರಾಗಿ, ಪಕ್ಷದಲ್ಲಿ ಒಳ್ಳೆ ಕೆಲಸಗಾರ ಎಂದೆಲ್ಲ ಹೆಸರು ಮಾಡಿದ ಡಿ.ವಿ.ಸದಾನಂದ ಗೌಡರನ್ನು ಪಕ್ಕಕ್ಕೆ ಸರಿಸಿ, ಕೆಎಂಎಫ್ ನ ಅಧ್ಯಕ್ಷ ಗಾದಿಗೆ ಏರಿದವರು ಇದೇ ಸೋಮಶೇಖರ್ ರೆಡ್ಡಿ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ
ಆದರೆ, ಈ ಬಾರಿ ಚುನಾವಣೆ ಹೊತ್ತಿಗೆ ಮಾಗಿದ ರಾಜಕಾರಣಿಯಂತೆ ಪದಗಳನ್ನು ತೂಕ ಮಾಡಿ, ಮಾತನಾಡುವ ಸೋಮಶೇಖರ್ ರೆಡ್ಡಿ ಬಹಳ ಬದಲಾಗಿದ್ದಾರೆ. ಅವರ ಜತೆಗಿನ ಒನ್ಇಂಡಿಯಾ ಕನ್ನಡದ ಸಂದರ್ಶನ ಇಲ್ಲಿದೆ.
ಪ್ರಶ್ನೆ: ನಿಮ್ಮ ಕುಟುಂಬದ ಹಿನ್ನೆಲೆ ಏನು, ಪರಿಚಯ ಹೇಳಿಕೊಳ್ತೀರಾ?
ಸೋಮಶೇಖರ್ ರೆಡ್ಡಿ: ನಮ್ಮ ಅಪ್ಪ ಪೊಲೀಸ್ ಕಾನ್ ಸ್ಟೇಬಲ್. ಮಧ್ಯಮ ವರ್ಗದ ಕುಟುಂಬ. ತಾಯಿ ರುಕ್ಮಿಣಮ್ಮ. ಮಕ್ಕಳು ಸರಕಾರಿ ನೌಕರಿ ಮಾಡಬೇಕು ಎನ್ನುವುದು ನನ್ನ ಹೆತ್ತವರ ಕನಸು. ಆದರೆ ನಾವು ಮೂವರು ಮಕ್ಕಳು ರಾಜಕಾರಣಿಗಳಾದೆವು. ಇಬ್ಬರು ಸಚಿವರಾದರು. ನಾನು ರಾಜ್ಯಮಟ್ಟದ ಹಾಲು ಒಕ್ಕೂಟದ ಅಧ್ಯಕ್ಷನಾದೆ. ನಮ್ಮಲ್ಲಿ ಯಾರಲ್ಲೂ ರಾಜಕೀಯದ ಕನಸುಗಳಾಗಲೀ ಗುರಿಗಳಾಗಲೀ ಇರಲಿಲ್ಲ. ನನ್ನ ತಮ್ಮ ಜಿ. ಜನಾರ್ದನರೆಡ್ಡಿ ಹಾಗೂ ಬಿ. ಶ್ರೀರಾಮುಲು ಗೆಳೆತನ ನಮ್ಮನ್ನು ಈ ಹಂತಕ್ಕೆ ತಂದಿದೆ.
ಪ್ರಶ್ನೆ: ನಿಮ್ಮ ವ್ಯಾಸಂಗ, ರಾಜಕೀಯಕ್ಕೆ ಬಂದಿದ್ದು ಎಲ್ಲಾ ಆಕಸ್ಮಿಕವೇ?
ಸೋಮಶೇಖರ್ ರೆಡ್ಡಿ: ಇಲ್ಲ. ಸಹೋದರನ ಇಚ್ಛೆಯಂತೆ ರಾಜಕೀಯ ಪ್ರವೇಶ ಮಾಡಿದೆ. ಎಂ.ಕಾಂ., ಓದಿ ಎಲ್ಲೈಸಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಎನ್ನೋಬಲ್ ಇಂಡಿಯಾ ಇನ್ವೆಸ್ಟ್ ಮೆಂಟ್ ಕಂಪನಿಗೆ ಸೇರಿದೆ. ನಗರಸಭೆ ಸದಸ್ಯನಾದೆ, ಉಪಾಧ್ಯಕ್ಷನಾದೆ, ಕೊನೆಯ ಅಧ್ಯಕ್ಷನಾದೆ, ಮೊದಲ ಮೇಯರ್ ಕೂಡ ನಾನಾದೆ. ಆ ನಂತರ ಶಾಸಕನೂ ಆದೆ. ಎಲ್ಲವದಕ್ಕೂ ಕಸಾಪುರ ಆಂಜನೇಯ ಸ್ವಾಮಿ ಮಾರ್ಗದರ್ಶನವಿದೆ.
ಪ್ರಶ್ನೆ: ನಿಮ್ಮ ರಾಜಕೀಯ ಜೀವನದ ತಿರುವು ಯಾವುದು?
ಸೋಮಶೇಖರ್ ರೆಡ್ಡಿ: 1994ರಲ್ಲಿ ನಗರಸಭೆ ಸದಸ್ಯರಾಗಿದ್ದ ಬಿ. ಶ್ರೀರಾಮುಲು 1999ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ, ಸೋತಿದ್ದರು. ಆ ನಂತರ ಅವರು ನಗರಸಭೆಗೆ ಸ್ಪರ್ಧಿಸಿದರೆ ಘನತೆಗೆ ಚ್ಯುತಿ ಬರುತ್ತದೆ ಎಂದು ಜನಾರ್ದನ ರೆಡ್ಡಿ ನನಗೆ ಸ್ಪರ್ಧಿಸುವಂತೆ ಹೇಳಿದರು. ಇದಕ್ಕೆ ಮೊದಲು ನಾನು ಒಪ್ಪಲಿಲ್ಲ. ಆದರೆ ನನ್ನ ತಾಯಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೇಳಿ, ಆಶೀರ್ವಾದ ಮಾಡಿದರು. 2001ರಲ್ಲಿ 34ನೇ ವಾರ್ಡ್ ನಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದೆ. ನನ್ನ ರಾಜಕೀಯಕ್ಕೆ ಮಹತ್ತರವಾದ ತಿರುವು ಸಿಕ್ಕಿತು. ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಿದೆ.
ಪ್ರಶ್ನೆ: ಆದರೆ, ನೀವು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದು ಹಾಗೂ ಶಾಸಕರಾಗಿದ್ದು ಹೇಗೆ?
ಸೋಮಶೇಖರ್ ರೆಡ್ಡಿ: 2007ರಲ್ಲಿ 1ನೇ ವಾರ್ಡ್ ನಲ್ಲಿ ಸ್ಪರ್ಧಿಸಿ ಗೆದ್ದೆ. 2008ರ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಬಳ್ಳಾರಿ ನಗರ ಮತ್ತು ಗ್ರಾಮೀಣ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದವು. ನಗರ ಕ್ಷೇತ್ರ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದ್ದರಿಂದ ಸ್ಪರ್ಧಿಸುವಂತೆ ಶ್ರೀರಾಮುಲು ಹೇಳಿದರು. ಮಿತ್ರನ ಮಾತಿಗೆ ಬದ್ಧವಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದೆ.
ಪ್ರಶ್ನೆ: 2013ರ ಚುನಾವಣೆಯಲ್ಲಿ ಏಕೆ ಸ್ಪರ್ಧಿಸಲಿಲ್ಲ?
ಸೋಮಶೇಖರ್ ರೆಡ್ಡಿ: ನಾನು ಕಾನೂನಿನ ಇಕ್ಕಟ್ಟಿನಲ್ಲಿ ಸಿಲುಕಿದ್ದೆ. ಅಲ್ಲದೇ, ಮಿತ್ರ ಬಿ. ಶ್ರೀರಾಮುಲು ಬಿಎಸ್ ಆರ್ ಪಕ್ಷ ಕಟ್ಟಿದ್ದರು. ಪಕ್ಷದಿಂದ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಉಮೇದು ಎಲ್ಲರಲ್ಲೂ ಇತ್ತು. ಆ ಕಾರಣಕ್ಕೆ ಸ್ಪರ್ಧಿಸಲಿಲ್ಲ. ಈ ಬಾರಿ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದೇನೆ.
ಪ್ರಶ್ನೆ: ಈ ಸಲ ಬಿಜೆಪಿ ಟಿಕೆಟ್ ಗಾಗಿ ಸಾಕಷ್ಟು ಪ್ರಯಾಸಪಟ್ಟಿದ್ದೀರಾ?
ಸೋಮಶೇಖರ್ ರೆಡ್ಡಿ: ಹಾಗೇನಿಲ್ಲ. ಸ್ಪರ್ಧೆ ಎಲ್ಲ ಕಡೆಗೂ ಇರುತ್ತದೆ. ಪಕ್ಷ ನನಗೆ ಟಿಕೆಟ್ ನೀಡಿದೆ. ನಾನು ಸ್ಪರ್ಧಿಸುತ್ತಿದ್ದೇನೆ. ಪಕ್ಷದ ರಾಜ್ಯ - ರಾಷ್ಟ್ರಮಟ್ಟದ ಎಲ್ಲ ಮುಖಂಡರು ಚುನಾವಣೆ ಪ್ರಚಾರಕ್ಕೆ ಬರಲಿದ್ದಾರೆ. ನನಗೆ ಪಕ್ಷ ಮುಖ್ಯ.
ಪ್ರಶ್ನೆ: ನಿಮ್ಮ ಮೇಲಿನ ಆರೋಪಗಳು ಏನಾದವು ಹಾಗೂ ನಿಮ್ಮ ಗೆಲುವಿನ ವಿಶ್ವಾಸಕ್ಕೆ ಕಾರಣಗಳು ಏನು?
ಸೋಮಶೇಖರ್ ರೆಡ್ಡಿ: ರಾಜಕೀಯ ಪ್ರೇರಿತ ಕೆಲ ಆರೋಪಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ನಗರಸಭೆ ಸದಸ್ಯನಾಗಿ, ಉಪಾಧ್ಯಕ್ಷನಾಗಿ, ಅಧ್ಯಕ್ಷನಾಗಿ, ಮೇಯರ್ ಆಗಿ, ಶಾಸಕನಾಗಿ ಮಾಡಿರುವ ಕೆಲಸಗಳು- ಜನಸಂಪರ್ಕ ಮತ್ತು ನನ್ನ ಸರಳತೆಯೇ ಗೆಲುವಿಗೆ ಕಾರಣಗಳು. ಅನೇಕ ದಿನಗಳಿಂದ ಪ್ರಚಾರದಲ್ಲಿ ತೊಡಗಿದ್ದೇನೆ. ಉತ್ತಮವಾದ ಸ್ಪಂದನೆ ಸಿಕ್ಕಿದೆ. ಬಹುತೇಕರು, 'ನಮ್ಮ ಮತ ನಿಮಗೇ, ನಿರಾಯಾಸವಾಗಿ ಗೆಲ್ಲುತ್ತೀರಿ' ಎಂದು ಹಾರೈಸುತ್ತಿದ್ದಾರೆ.