ಬಳ್ಳಾರಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರಿಚಯ
ಬಳ್ಳಾರಿ, ಏಪ್ರಿಲ್ 20 : ಬಳ್ಳಾರಿ ಜಿಲ್ಲೆಯ ಒಂಭತ್ತು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದು, ಎನ್.ವೈ. ಗೋಪಾಲಕೃಷ್ಣ ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರುತ್ತಿರುವುದು ಬಿಜೆಪಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಸಂಡೂರು ಕ್ಷೇತ್ರಕ್ಕೆ ಹೊಸಮುಖ ಡಿ. ರಾಘವೇಂದ್ರ ಸ್ಪರ್ಧೆ ಫಲಿತಾಂಶದ ಮೇಲೆ ಕಣ್ಣಿಡುವಂತೆ ಮಾಡಿದೆ.
ಪ್ರಾದೇಶಿಕ ಪಕ್ಷಗಳಿಗೆ ಮತ ಹಾಕಿ: ಹೊತ್ತೂರು ಇಕ್ಬಾಲ್ ಅಹ್ಮದ್
ಟಿಕೆಟ್ ಪಡೆದವರ ಪೈಕಿ ಹೂವಿನ ಹಡಗಲಿಯ ಚಂದ್ರಾನಾಯ್ಕ, ಹಗರಿಬೊಮ್ಮನಹಳ್ಳಿಯ ನೇಮಿರಾಜ ನಾಯ್ಕ, ಬಳ್ಳಾರಿ ನಗರದ ಜಿ. ಸೋಮಶೇಖರರೆಡ್ಡಿ, ಸಿರಗುಪ್ಪದ ಎಂ.ಎಸ್. ಸೋಮಲಿಂಗಪ್ಪ, ಕಂಪ್ಲಿಯ ಟಿ.ಎಚ್. ಸುರೇಶ್ ಬಾಬು, ವಿಜಯನಗರ ಕ್ಷೇತ್ರದ ಎಚ್.ಆರ್. ಗವಿಯಪ್ಪ ಅನುಭವಿಗಳು. ಶಾಸಕರಾಗಿ ವಿಧಾನಸೌಧ ಬಲ್ಲವರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಸಣ್ಣ ಫಕ್ಕೀರಪ್ಪ ರಾಯಚೂರಿನ ಸಂಸದರಾಗಿ ಪಾಲಿಮೆಂಟ್ ತಿಳಿದವರು. ಎನ್.ವೈ. ಗೋಪಾಲಕೃಷ್ಣ ಅವರು ಬಿಜೆಪಿಯಿಂದ ಸ್ಪರ್ಧಿಸಿದಲ್ಲಿ ಅತ್ಯಂತ ಅನುಭವಿ, ಮುತ್ಸದ್ದಿ. 2018ರ ವಿಧಾನಸಭಾ ಚುನಾವಣಾ ಅಖಾಡಕ್ಕೆ ಸಜ್ಜಾಗುತ್ತಿರುವ ಇವರೆಲ್ಲರ ಸಂಕ್ಷಿಪ್ತ ಪರಿಚಯ ಇಲ್ಲಿದೆ...
ಗಣಿ ನಾಡಿಗೆ ಸರ್ಕಾರ ಕೊಟ್ಟದ್ದೆಷ್ಟು? ಬಾಕಿ ಉಳಿದದ್ದೆಷ್ಟು?
ಚಂದ್ರಾನಾಯ್ಕ
ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ 2004 ರ ಚುನಾವಣೆ ವರೆಗೆ ಸಾಮಾನ್ಯ ಕ್ಷೇತ್ರ. ಕ್ಷೇತ್ರ ಪುನರ್ ವಿಂಗಡಣೆಯ ನಂತರ ಎಸ್ಸಿ ಮೀಸಲು ಕ್ಷೇತ್ರ. ಚಂದ್ರಾನಾಯ್ಕ ಬಿಜೆಪಿ ಟಿಕೆಟ್ ಪಡೆದು ಸಮೀಪ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಟಿ.ಟಿ. ಪರಮೇಶ್ವರ ನಾಯ್ಕ ವಿರುದ್ಧ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ಮತ್ತೇ 2013ರಲ್ಲಿ ನಡೆದ ಚುನಾವಣೆಯಲ್ಲಿ ಪಿ.ಟಿ.ಪರಮೇಶ್ವರ ನಾಯ್ಕ ಅವರಿಂದ ಸೋಲು ಕಂಡರು.
ಇದೀಗ 2018ರ ಚುನಾವಣೆಯಲ್ಲಿ ಪರಮೇಶ್ವರ ನಾಯ್ಕ ಮತ್ತು ಚಂದ್ರಾನಾಯ್ಕ ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ. ಸಂಪ್ರದಾಯ ಎದುರಾಳಿಗಳ ಜೊತೆ ಇನ್ನಿತರರ ಸ್ಪರ್ಧೆ. ಸೋಲು - ಗೆಲುವು ಅಸ್ಪಷ್ಟ.
ನೇಮಿರಾಜ ನಾಯ್ಕ
ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರ. 2008ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆಯ ಸಂದರ್ಭ ಸೃಷ್ಟಿಯಾದ ಕ್ಷೇತ್ರ. ಮೊದಲ ಚುನಾವಣೆಯಲ್ಲಿ ನೇಮಿರಾಜ ನಾಯ್ಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ನ ಭೀಮಾನಾಯ್ಕ ವಿರುದ್ಧ ಗೆಲುವು ಸಾಧಿಸಿ, 2013ರಲ್ಲಿ ಜರುಗಿದ ಚುನಾವಣೆಯಲ್ಲಿ ಕೇವಲ 125 ಮತಗಳಿಂದ ಸೋಲು ಕಂಡರು.
ಇದೀಗ 2018 ಚುನಾವಣೆಯಲ್ಲಿ ಮತ್ತೊಮ್ಮೆ ನೇಮಿರಾಜನಾಯ್ಕ ಮತ್ತು ಭೀಮಾನಾಯ್ಕ ಮುಖಾಮುಖಿಯಾಗಲಿದ್ದು, ಜೆಡಿಎಸ್ ಸೇರಿದಂತೆ ವಿವಿಧ ಅಭ್ಯರ್ಥಿಗಳು ತೀವ್ರ ಪೈಪೋಟಿ ಕೊಡಲಿದ್ದಾರೆ.
ಜಿ.ಸೋಮಶೇಖರ ರೆಡ್ಡಿ
ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಹಿರಿಯ ಸಹೋದರ. ನಗರಸಭೆ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ, ಮೇಯರ್ ಆಗಿ, ಶಾಸಕರಾಗಿ, ಕೆಎಂಎಫ್ ಅಧ್ಯಕ್ಷರಾಗಿ ಅನುಭವ ಪಡೆದಿರುವ ಜಿ. ಸೋಮಶೇಖರ ರೆಡ್ಡಿ 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದಾಗ ಬಳ್ಳಾರಿ ನಗರ ಸಾಮಾನ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಪ್ರಯಾಸದಿಂದ ಗೆಲುವು ಸಾಧಿಸಿದ್ದರು.
ಮಿತ್ರ ಬಿ. ಶ್ರೀರಾಮುಲು ಅವರ ಬಿಎಸ್ಸಾರ್ ಪಕ್ಷದ ಸ್ಥಾಪನೆ, ಬೇಲ್ ಡೀಲ್ ವಿವಾದ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ಕೆಜೆಪಿ ಪಕ್ಷದ ಮಧ್ಯೆ ಗೊಂದಲಕ್ಕೀಡಾಗಿ ಸ್ಪರ್ಧೆ ಕೈಬಿಟ್ಟಿದ್ದರು. ಇದೀಗ 2018 ಚುನಾವಣೆಯಲ್ಲಿ ಕಾಂಗ್ರೆಸ್ ನ ಅನಿಲ್ ಎಚ್. ಲಾಡ್ ಅವರಿಗೆ ಪ್ರತಿಸ್ಪರ್ಧಿಯಾಗಲಿದ್ದಾರೆ.
ನಾಮಪತ್ರ ಸಲ್ಲಿಸುವ ಪೂರ್ವದಲ್ಲಿಯೇ ಒಂದೆರೆಡು ಸುತ್ತು ಮತದಾರರನ್ನು ಭೇಟಿ ಮಾಡಿ, ಪಕ್ಷದ ಪರ ಪ್ರಚಾರ ನಿರ್ವಹಿಸಿದ್ದಾರೆ. ಜಿ. ಸೋಮಶೇಖರರೆಡ್ಡಿ ಈ ಬಾರಿ ಸವಾಲಿನಿಂದ ಟಿಕೇಟ್ ಪಡೆದಿದ್ದು, ಟಿಕೇಟ್ ಪಡೆದದ್ದೇ ಇವರ ವಿಜಯೋತ್ಸಾಹಕ್ಕೆ ಪ್ರೋತ್ಸಾಹ.
ಸಣ್ಣ ಫಕ್ಕೀರಪ್ಪ
ಸಣ್ಣ ಫಕ್ಕೀರಪ್ಪ 2009ರ ಸಂಸದೀಯ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದ ಸಂಸದರಾಗಿದ್ದರು. ಬಿ.ಶ್ರೀರಾಮುಲು ಅವರ ಸೋದರ ಮಾವ. ಬಳ್ಳಾರಿ ಗ್ರಾಮೀಣ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಸ್ಪರ್ಧಾಳು. ಕಾಂಗ್ರೆಸ್ ನ ಬಿ. ನಾಗೇಂದ್ರ ಎದುರಾಳಿ. ಇಬ್ಬರಿಗೂ ಕ್ಷೇತ್ರ ಹೊಸದು. ಆದರೆ, ರಾಜಕೀಯ ಹೊಸದಲ್ಲ.
ಎಂ.ಎಸ್.ಸೋಮಲಿಂಗಪ್ಪ
ಸಿರಗುಪ್ಪ ಕ್ಷೇತ್ರ 2004 ರವರೆಗೆ ಸಾಮಾನ್ಯ ಕ್ಷೇತ್ರವಾಗಿತ್ತು. ವಾಲ್ಮೀಕಿ ಸಮುದಾಯದ ಎಂ.ಎಸ್.ಸೋಮಲಿಂಗಪ್ಪ ತಂದೆ ತೆಕ್ಕಲಕೋಟೆ ಸಿದ್ಧಪ್ಪನ ಗರಡಿಯಲ್ಲಿ ಬೆಳೆದವರು. ಕಾಂಗ್ರೆಸ್ ಟಿಕೆಟ್ ಪಡೆದು ಶಾಸಕರಾಗಿದ್ದರು. 2008ರಲ್ಲಿ ಸಿರುಗುಪ್ಪ ಕ್ಷೇತ್ರ ಎಸ್ಟಿ ಮೀಸಲು ಕ್ಷೇತ್ರವಾಯಿತು. ಸೋಮಲಿಂಗಪ್ಪ ಬಿಜೆಪಿಯಿಂದ ಸ್ಪರ್ಧಿಸಿ, ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಿ.ಎಂ.ನಾಗರಾಜ ಅವರನ್ನು ಸೋಲಿಸಿ ಶಾಸಕರಾದರು. ಆದರೆ, 2013ರ ಚುನಾವಣೆಯಲ್ಲಿ ಫಲಿತಾಂಶ ತಿರುಗುಮುರುಗಾಗಿ ಸೋಮಲಿಂಗಪ್ಪ ಸೋತು ಬಿ.ಎಂ.ನಾಗರಾಜ್ ಗೆದ್ದರು.
ಇದೀಗ 2018 ಚುನಾವಣೆಯಲ್ಲಿ ಇವರ ಹಿರಿತನ, ಅನುಭವ ಇವರನ್ನು ಆಶೀರ್ವದಿಸುವ ಲೆಕ್ಕಾಚಾರ ಪಕ್ಷಕ್ಕಿದೆ. ಕಾಂಗ್ರೆಸ್ ಬಿ. ಮುರಳಿಕೃಷ್ಣ ಅವರನ್ನು ಕಣಕ್ಕಿಳಿಸಲಿದೆ.
ಟಿ.ಎಚ್.ಸುರೇಶ್ ಬಾಬು
ಬಿ. ಶ್ರೀರಾಮುಲು ಸೋದರಳಿಯ ಟಿ.ಎಚ್. ಸುರೇಶ್ ಬಾಬು, ವಿಧಾನಸಭೆಯಲ್ಲಿ ಸಿದ್ಧರಾಮಯ್ಯ ವಿರುದ್ಧ ಧ್ವನಿಎತ್ತಿ ಪ್ರಚಾರಕ್ಕೆ ಬಂದವರು. ಸಣ್ಣ ಪ್ರಾಯದ ಶಾಸಕರು. 2008ರಲ್ಲಿ ಕಂಪ್ಲಿ ಎಸ್ಟಿ ಮೀಸಲು ಕ್ಷೇತ್ರ ಸೃಷ್ಟಿಯಾದ ವರ್ಷದಿಂದ ಸತತ ಎರಡು ಚುನಾವಣೆಗಳಲ್ಲಿ ಮೊದಲು ಬಿಜೆಪಿಯಿಂದ 2013ರಲ್ಲಿ ಎರಡನೇ ಬಾರಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಜೆ.ಎನ್. ಗಣೇಶ್ ಕಾಂಗ್ರೆಸ್ ಅಭ್ಯರ್ಥಿ. ಒಮ್ಮೆ ಪಕ್ಷೇತರರಾಗಿ ಸ್ಪರ್ಧಿಸಿ, ಸೋತಿರುವ ಗಣೇಶ್ ಉತ್ತಮ ಅಭ್ಯರ್ಥಿ. ಆದರೆ, ಟಿ.ಎಚ್. ಸುರೇಶಬಾಬು ಅವರ ಹಣದ ಪ್ರಭಾವದಲ್ಲಿ ಮಸುಕಾಗುವ ಆತಂಕ ಕಾಂಗ್ರೆಸ್ಸಿಗರಿಗೆ.
ಎಚ್.ಆರ್.ಗವಿಯಪ್ಪ
ಎಚ್.ಆರ್. ಗವಿಯಪ್ಪ ಅವರ ಕುಟುಂಬ ಮೂಲ ಕಾಂಗ್ರೆಸ್ಸಿಗರು. ಇಂದಿರಾ ಗಾಂಧಿ ಅವರ ಜತೆ ಆಪ್ತತೆ ಹೊಂದಿದ್ದ ಇವರು, ಕಾಂಗ್ರೆಸ್ ನ ಕಟ್ಟಾಳುಗಳು. ಆದರೆ, ಬದಲಾದ ರಾಜಕೀಯದಲ್ಲಿ ಇವರೀಗ ಬಿಜೆಪಿಯ ಹುರಿಯಾಳು. ವಿಜಯನಗರ ಕ್ಷೇತ್ರದ ಬಿಜೆಪಿ ಮುಖಂಡರಾಗಿದ್ದ ಬಿ.ಎಸ್. ಆನಂದಸಿಂಗ್ ಅವರು ಕಾಂಗ್ರೆಸ್ ಸೇರಿದ್ದೇ, ಇವರು ಬಿಜೆಪಿ ಸೇರಲು ಕಾರಣ.
2004ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಶಾಸಕರಾಗಿದ್ದರು. ಬಿ.ಎಸ್. ಆನಂದ್ ಸಿಂಗ್ ವಿರುದ್ಧ ಎಚ್.ಆರ್. ಗವಿಯಪ್ಪ ಸ್ಪರ್ಧೆ. ಗೆಲುವು ಅಸ್ಪಷ್ಟ.
ಡಿ. ರಾಘವೇಂದ್ರ
ಡಿ. ರಾಘವೇಂದ್ರ ಒಬ್ಬ ಯುವ ಉದ್ಯಮಿ. ತಂದೆಯ ರಾಜಕೀಯ ನೆರಳಲ್ಲೇ ಬೆಳೆದ ಶಕ್ತಿ. ಸಂಡೂರು ಪುರಸಭೆಯ ಕಾಂಗ್ರೆಸ್ ಸದಸ್ಯರಾಗಿ ಆಯ್ಕೆಯಾಗಿ, ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದಾರೆ. ಎಂ.ವೈ. ಘೋರ್ಪಡೆ ಅವರ ಪುತ್ರ ಕಾರ್ತೀಕ್ ಘೋರ್ಪಡೆ ಅವರ ಬೆಂಬಲ , ಆಶೀರ್ವಾದವೇ ಇವರ ಸ್ಪರ್ಧೆಯ ಸಂಪನ್ಮೂಲ. ಇದೇ ಮೊದಲ ಅಸೆಂಬ್ಲಿ ಚುನಾವಣೆ. ಶಾಸಕ ಇ. ತುಕಾರಾಂ ಪ್ರತಿಸ್ಪರ್ಧಿ.
ಎನ್.ವೈ.ಗೋಪಾಲ ಕೃಷ್ಣ
ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಆಗಿದೆ. ಕೂಡ್ಲಿಗಿ ಎಸ್ಟಿ ಮೀಸಲು ಕ್ಷೇತ್ರಕ್ಕೆ ಎನ್.ವೈ. ಗೋಪಾಲಕೃಷ್ಣ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ನಾಲ್ಕುಬಾರಿ ಮೊಳಕಾಲ್ಮೂರು ಶಾಸಕ, ಒಮ್ಮೆ ಬಳ್ಳಾರಿ ಗ್ರಾಮೀಣ ಶಾಸಕ. ಡೆಪ್ಯುಟಿ ಸ್ಪೀಕರ್ ಆಗಿದ್ದರು. ಕಾಂಗ್ರೆಸ್ ಟಿಕೇಟ್ ವಂಚಿತನಾಗಿ, ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು, ಜೆಡಿಎಸ್ ನ ಎನ್.ಟಿ. ಬೊಮ್ಮಣ್ಣ ಅವರಿಂದ ತೀವ್ರ ಸ್ಪರ್ಧೆ ಸಾಧ್ಯತೆ.