ಹೊಸಪೇಟೆಯಲ್ಲೇ 4 ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಠಿಕಾಣಿ
ಹೊಸಪೇಟೆ (ಬಳ್ಳಾರಿ ಜಿಲ್ಲೆ), ಏಪ್ರಿಲ್ 17: ಬಳ್ಳಾರಿ ಜಿಲ್ಲೆಯ ಹೊಸಪೇಟೆ ಶಕ್ತಿ ಕೇಂದ್ರದಂತೆ ಆಗಿದೆ. ಇಲ್ಲಿ ಮನೆ ಮಾಡಿಕೊಂಡಿರುವ ನಾಲ್ವರು ಈ ಬಾರಿ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧೆಗೆ ಇಳಿದಿದ್ದಾರೆ. ಒಂದು ವೇಳೆ ಚಮತ್ಕಾರ ನಡೆದು, ಈ ನಾಲ್ವರು ಶಾಸಕರಾಗಿ ಗೆದ್ದುಬಿಟ್ಟರೆ ಹೊಸಪೇಟೆ ಪಟ್ಟಣಕ್ಕೆ ಹೊಸದೊಂದು ಗರಿ ಮೂಡಲಿದೆ.
ವಿಜಯನಗರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು, ಮತ್ತೆ ಸ್ಪರ್ಧೆಗೆ ಇಳಿದಿರುವ ಮಾಜಿ ಶಾಸಕ ಬಿ.ಎಸ್.ಆನಂದ್ ಸಿಂಗ್ ಹೊಸಪೇಟೆ ನಿವಾಸಿ. ಅವರು ಈ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದು, ಹ್ಯಾಟ್ರಿಕ್ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಇವರ ಮನೆ - ವ್ಯವಹಾರ ಎಲ್ಲವೂ ಹೊಸಪೇಟೆ ಕೇಂದ್ರಿತ.
ಹೊಸಪೇಟೆ ಕ್ಷೇತ್ರ ಪರಿಚಯ: ಕಾಂಗ್ರೆಸ್ಸಿಗೆ ಗೆಲುವಿನ 'ಆನಂದ' ಸಿಗುವುದೇ?
ಹಗರಿಬೊಮ್ಮನಹಳ್ಳಿ ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರದ ಕಲ್ಲಹಳ್ಳಿ ತಾಂಡಾದ ಶಾಸಕ ಭೀಮಾನಾಯಕ್ ಅವರು ಹೊಸಪೇಟೆಯ ರಾಜೀವ್ ನಗರದಲ್ಲಿ ಮನೆ ಮಾಡಿಕೊಂಡಿದ್ದಾರೆ. ಇವರು ಹುಟ್ಟಿ - ಬೆಳೆದದ್ದು, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಜೆಡಿಎಸ್ ಶಾಸಕರಾಗಿ ಆಯ್ಕೆ ಆಗಿದ್ದು, ಹಗರಿಬೊಮ್ಮನಹಳ್ಳಿಯಿಂದ.
ಆದರೆ, ವಸತಿ ಮಾಡಿಕೊಂಡಿದ್ದು ಹೊಸಪೇಟೆಯಲ್ಲಿ. ಈ ಬಾರಿ ಹೊಸಪೇಟೆಯಲ್ಲಿ ಮನೆ ಮಾಡಿಕೊಂಡು, ಹಗರಿಬೊಮ್ಮನಹಳ್ಳಿಯಿಂದ ಸ್ಪರ್ಧಿಸುತ್ತಿದ್ದಾರೆ.
ಕಾಂಗ್ರೆಸ್ ನ ಹೊಸಮುಖ ಗುಜ್ಜಲ ರಘು. ಹೊಸಪೇಟೆಯ ಏಳುಕೇರಿ ನಿವಾಸಿ. ಜೆಡಿಎಸ್ ನಿಂದ ಎಂ.ಪಿ. ಪ್ರಕಾಶ್ ಅವರ ಜೊತೆಯಲ್ಲಿ ಕಾಂಗ್ರೆಸ್ ಸೇರಿದ ಇವರು, ಕಟ್ಟಾ ಕಾಂಗ್ರೆಸ್ಸಿಗರಂತೆ ದುಡಿಯುತ್ತಿದ್ದಾರೆ. ಇವರಿಗೆ ಈ ಬಾರಿ, ಇದೇ ಮೊದಲ ಬಾರಿ ಕೂಡ್ಲಿಗಿ ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ ಟಿಕೆಟ್ ನೀಡಿದೆ.
ಕಂಪ್ಲಿ ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿರುವ ಜೆ.ಎನ್. ಗಣೇಶ್ ಹೊಸಪೇಟೆ ಮೂಲ ನಿವಾಸಿ. ಕಂಪ್ಲಿ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸಿರುವ ಅವರು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ.
ಬಳ್ಳಾರಿ ಜಿಲ್ಲೆಯ ಒಟ್ಟು ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳು ಹೊಸಪೇಟೆ ಮೂಲ ನಿವಾಸಿಗಳು. ಒಂದು ಕಾಲದಲ್ಲಿ ಜಿಲ್ಲೆಯು ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ರಾಹುಲ್ ಗಾಂಧಿ ಜನಾಶೀರ್ವಾದ ಸಭೆ ಪ್ರಾರಂಭ ಮಾಡಿದ್ದೂ ಹೊಸಪೇಟೆಯಿಂದ.
ಇಂದಿರಾ ಗಾಂಧಿ ಅವರು ಎರಡು ಬಾರಿ ಹೊಸಪೇಟೆಗೆ ಅಗಮಿಸಿದ್ದರು. ಒಮ್ಮೆ ಹಂಪಿಗೆ ಭೇಟಿ ನೀಡಿದ್ದರು. ಜವಾಹರಲಾಲ್ ನೆಹರೂ ಅವರು ಕೂಡ ಹಂಪಿಗೆ ಭೇಟಿ ನೀಡಿದ್ದು ಸ್ಮರಣೀಯ.