ಬಳ್ಳಾರಿ : ಕಂಪ್ಲಿಯಲ್ಲಿ ಕಾರಹುಣ್ಣಿಮೆ ಹಬ್ಬದ ಸಂಭ್ರಮ
ಬಳ್ಳಾರಿ, ಜೂ.14 : ರೈತರ ಪಾಲಿನ ಮಹತ್ವದ ಹಬ್ಬವಾದ ಕಾರಹುಣ್ಣಿಮೆಯನ್ನು ಬಳ್ಳಾರಿಜಿಲ್ಲೆಯ ಕಂಪ್ಲಿ ಪಟ್ಟಣದ ವಿವಿಧ ಅಗಸಿಗಳಲ್ಲಿ ವಿಜೃಂಭಣೆಯಿಂದ ಆಚರಣೆಮಾಡಿದರು. ವರುಣದೇವ ಹಬ್ಬದ ಆಚರಣೆಗೆ ಸ್ಪಲ್ಪ ತೊಂದರೆ ಉಂಟುಮಾಡಿದರು, ಜನರು ಮಳೆಯನ್ನು ಲೆಕ್ಕಿಸಿದೆ ಹಬ್ಬದಲ್ಲಿ ಸಂಭ್ರಮಿಸಿದರು.
ಕಂಪ್ಲಿ ಪಟ್ಟಣದ ಮಾರೆಮ್ಮ ಗುಡಿಯ ಅಗಸಿ, ಬೆಳಗೋಡುಹಾಳು ಅಗಸಿ, ತಳವಾರು ಓಣಿ ಅಗಸಿ, ಮುದ್ದಾಪುರ ಅಗಸಿ ಮತ್ತು 4ನೇ ವಾರ್ಡಿನ ಅಗಸಿಯಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆ ಸಂಗಾತಿಗಳಾದ ಎತ್ತುಗಳನ್ನು ಶುಭ್ರವಾಗಿ ತೊಳೆದು, ಅವುಗಳ ಕೋಡುಗಳನ್ನು ಕೆತ್ತಿಸಿ, ಅವುಗಳಿಗೆ ವೈವಿದ್ಯಮಯ ಬಣ್ಣಗಳನ್ನು ಹಚ್ಚಿಸಿ ಅವುಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಹಬ್ಬದ ಅಂಗವಾಗಿ ಸಂಜೆ ಪಟ್ಟಣದ ಅಗಸಿಯಲ್ಲಿ ಎತ್ತುಗಳಿಗೆ ಗೆಜ್ಜೆ, ಕೋಡಣಸು, ಗಗ್ರಿಗಳನ್ನು ಹಾಕಿ, ವಿಶೇಷವಾಗಿ ತಯಾರಿಸಲಾದ ಜೂಲಗಳಿಂದ ಶೃಂಗರಿಸಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಓಟದ ಸ್ಪರ್ಧೆ ಆರಂಭವಾದ ತಕ್ಷಣ ಮಳೆರಾಯ ತನ್ನ ಪ್ರತಾಪ ತೋರಿಸಲು ಆರಂಭಿಸಿದನು. ಬಿರುಬಿಸಿಲಿಗೆ ರೋಸಿಹೋಗಿದ್ದ ಜನತೆಗೆ ಮಳೆ ತಂಪೆರೆಯಿತು. [ಕಾರಹುಣ್ಣಿಮೆ: ಎತ್ತುಗಳಿಗೆ ಇದೇನು ಮಾಡ್ತಿದ್ದಾರೆ ನೋಡಿ!]
4ನೇ ವಾರ್ಡಿನಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ನೂರ್ ಎನ್ನುವವರ ಎತ್ತುಗಳು ಪ್ರಥಮ ಸ್ಥಾನವನ್ನು ಹಾಗೂ ಬಲಕುಂದಿ ವೀರಭದ್ರಪ್ಪ ಎನ್ನುವವರ ಎತ್ತುಗಳು ದ್ವಿತೀಯ ಸ್ಥಾನವನ್ನು ಪಡೆದವು. ಎತ್ತುಗಳ ಮಾಲೀಕರಿಗೆ ಪುರಸಭೆಯ ಸದಸ್ಯ ಸಿ.ಆರ್.ಹನುಮಂತ ಅವರು ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ನೀಡಿದರು.
ಮಾರೆಮ್ಮನ ಗುಡಿ ಅಗಸಿಯಲ್ಲಿಯೂ ಹಬ್ಬದ ಸಂಭ್ರಮ ಜೋರಾಗಿತ್ತು. ಎತ್ತುಗಳನ್ನು ಹಲವು ವಿಧಗಳಲ್ಲಿ ಸಿಂಗರಿಸಿ ಮಾರೆಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕಂಪ್ಲಿ ಪುರಸಭೆಯ ಮಾಜಿ ಸದಸ್ಯರಾದ ಎಂ.ಗೋಪಾಲ್, ಎಂ.ಸಿ. ಮಾಯಪ್ಪ, ಹಬೀಬ್ ರೆಹಮಾನ್ ಸೇರಿದಂತೆ ಅನೇಕರು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.